Ricky Rai Shot Case: ಮಾಜಿ ಡಾನ್ ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಪ್ರಕರಣ; ಆಸ್ತಿ ವಿವಾದ ಕಾರಣವಾಯಿತೇ? ರಾಮನಗರ ಎಸ್ಪಿ ಹೇಳಿದ್ದೇನು?

Ricky Rai Shot Case: ಬಿಡದಿ ಬಳಿಯ ಫಾರ್ಮ್ಹೌಸ್ನಲ್ಲಿ ಮಾಜಿ ಡಾನ್ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿರುವ ಘಟನೆ ಮಧ್ಯರಾತ್ರಿ ನಡೆದಿದೆ. ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪೊಲೀಸರು ವಿವಿಧ ಆಯಾಮಗಳಿಂದ ಈ ಪ್ರಕರಣದ ತನಿಖೆ ಮಾಡುತ್ತಿದ್ದಾರೆ. ಮುತ್ತಪ್ಪ ರೈ ಅವರ ರೂ.2000 ಕೋಟಿ ಆಸ್ತಿಗೆ ಸಂಬಂಧಿಸಿದಂತೆ ರಿಕ್ಕಿ ರೈ ಕೊಲೆಗೆ ಯತ್ನ ನಡೆದಿರಬಹುದೇ ಎನ್ನುವ ಅನುಮಾನವಿದೆ. ಗೋವಾ, ಬೆಂಗಳೂರು, ಮಂಗಳೂರು, ಬೆಂಗಳೂರು ಸೇರಿ ಹಲವು ಕಡೆಗಳಲ್ಲಿ ಮುತ್ತಪ್ಪ ರೈ ಬ್ಯುಸಿನೆಸ್ ಹೊಂದಿದ್ದರು. ಈ ಎಲ್ಲಾ ಬ್ಯುಸಿನೆಸ್ನ್ನು ರಿಕ್ಕಿ ರೈ ನೋಡಿಕೊಳ್ಳುತ್ತಿದ್ದರು.
ಘಟನಾ ಸ್ಥಳಕ್ಕೆ ಬಂದಿರುವ ಪೊಲೀಸ್ ಶ್ವಾನ ದಳವು ಫೈರಿಂಗ್ ಸ್ಥಳದಿಂದ ಸುಮಾರು ಎರಡು ಕಿ.ಮೀ ದೂರದ ಹೆಗ್ಗಡಗೆರೆವರೆಗೆ ಹೋಗಿದೆ. ಶ್ವಾನ ಕಾಂಪೌಂಡ್ನಿಂದ ಹೊರಗೆ ಓಡಿ, ದೊಡ್ಡ ಮುದುವಾಡಿ ಕಡೆಗೆ ಸಾಗಿ, ಹೆಗ್ಗಡಗೆರೆಯಲ್ಲಿ ನಿಂತಿದೆ. ಸೋಕೋ ಟೀಂ ಘಟನಾ ಸ್ಥಳದಲ್ಲಿ ಪರಿಶೀಲನೆ ಮಾಡಿದ್ದು, ಮೊಬೈಲ್, ಬ್ಯಾರೆಲ್ ಗನ್ನ ಬುಲೆಟ್ ಶೆಲ್ ಸೇರಿ ಮಹತ್ವದ ಸಾಕ್ಷಿಗಳು ಲಭ್ಯವಾಗಿರುವ ಕುರಿತು ವರದಿಯಾಗಿದೆ.
ಮಧ್ಯರಾತ್ರಿ ರಿಕ್ಕಿ ರೈ ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮೇಲ್ನೋಟಕ್ಕೆ ಒಂದು ಸುತ್ತು ಫೈರಿಂಗ್ ನಡೆದಿರುವ ಶಂಕೆಯಿದೆ. ರಿಕ್ಕಿ ರೈಗೆ ತೀವ್ರ ಗಾಯವಾಗಿದ್ದು, ಅವರ ಜೊತೆ ಇದ್ದ ಒಬ್ಬರಿಗೆ ಸಣ್ಣ ಗಾಯಗಳಾಗಿದೆ. FSL ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
ಪ್ರಕರಣದ ಆರೋಪಿಗಳ ಪತ್ತೆಗೆ ಐದು ತಂಡಗಳನ್ನು ರಚಿಸಲಾಗಿದೆ. ತಂಡ 1 ಶೂಟರ್ಗಳು ಬಂದ ರಸ್ತೆಯ ಸಿಸಿಟಿವಿ ಪರಿಶೀಲಿಸುತ್ತಿದ್ದರೆ, ತಂಡ 2 ಫಾಮ್ಹೌಸ್ ಬಳಿಯ ಸಿಡಿಆರ್ ಸಂಗ್ರಹ ಮಾಡುತ್ತಿದೆ. ತಂಡ 3 ರಿಕ್ಕಿ ರೈ ಮೇಲೆ ಹಳೇ ದ್ವೇಷ ಹೊಂದಿರುವವರನ್ನು ಪತ್ತೆ ಮಾಡುತ್ತಿದ್ದು, ತಂಡ 4 ಕುಟುಂಬಸ್ಥರ ಬಳಿ ಮಾಹಿತಿ ಕಲೆಹಾಕುತ್ತಿದೆ. ತಂಡ 5 ಸ್ಥಳದಲ್ಲಿ ಬೀಡುಬಿಟ್ಟು ಮಾನಿಟರಿಂಗ್ ನಡೆಸುತ್ತಿದೆ.
ಮುತ್ತಪ್ಪ ರೈ ಅವರ ಆಪ್ತ ವಲಯದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಮಂಗಳೂರು ಮೂಲದ ಮಿಥುನ್ ರೈ ಅವರ ಪಾತ್ರದ ಕುರಿತು ರಾಮನಗರ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಹಲವು ವರ್ಷಗಳ ಕಾಲ ಮುತ್ತಪ್ಪ ರೈ ಅವರ ರೈಟ್ ಹ್ಯಾಂಡ್ ಆಗಿ ಕೆಲಸ ಮಾಡಿದ್ದ ಮಿಥುನ್ ರೈ ಆಸ್ತಿ ವಿಚಾರದಲ್ಲಿ ಉಂಟಾದ ಕಿರಿಕ್ನಿಂದ ದೂರವಾಗಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಆಸ್ತಿ ವಿವಾದವು ಮುತ್ತಪ್ಪ ರೈ ಮತ್ತು ಮಿಥುನ್ ರೈ ನಡುವಿನ ಜಗಳಕ್ಕೆ ಮೂಲ ಕಾರಣವಾಗಿತ್ತು. ಇದು ಮುತ್ತಪ್ಪ ರೈ ಮರಣದ ನಂತರವೂ ಮುಂದುವರಿದಿತ್ತು. ಮುತ್ತಪ್ಪ ರೈ ಅವರ ಜೊತೆಗಿನ ಹಳೆಯ ದ್ವೇಷವನ್ನು ಮಿಥುನ್ ರೈ ರಿಕ್ಕಿ ರೈ ಮೇಲೆ ತೀರಿಸಿಕೊಳ್ಳಲು ಈ ದಾಳಿ ಮಾಡಿರಬಹುದೇ ಎನ್ನುವ ಕೋನದಲ್ಲಿ ಪೊಲೀಸರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ಶಾರ್ಪ್ಶೂಟರ್ಗಳನ್ನು ಬಳಸಿ ರಿಕ್ಕಿ ರೈ ಕೊಲೆಗೆ ಸಂಚು ರೂಪಿಸಲಾಗಿತ್ತು.
Comments are closed.