Bengaluru : ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ತಿರುಗಿದ್ದ ಸಮುದಾಯ – ರಾಜಕೀಯದಿಂದ ದೂರ ಇರುವಂತೆ ಖಡಕ್ ಎಚ್ಚರಿಕೆ

Share the Article

Bengaluru : ನಮ್ಮ ದೇಶದಲ್ಲಿ ಮಠಮಾನ್ಯಗಳಿಗೆ ಅದರ ಪೀಠಾಧಿಪತಿಗಳಿಗೆ ತನ್ನದೇ ಆದಂತಹ ಮಹತ್ವವಿದೆ. ನಮ್ಮ ಸನಾತನ ಪರಂಪರೆಯಲ್ಲಿ ಅವುಗಳು ಗೌರವ ಸ್ಥಾನವನ್ನು ಪಡೆದುಕೊಂಡು ಬಂದಿವೆ. ಆದರೆ ಇಂದಿನ ಹೆಚ್ಚಿನ ಸ್ವಾಮೀಜಿಗಳು ತಾವು ರಾಜಕೀಯದಲ್ಲಿ ಮೂಗು ತೂರಿಸುವ ಮುಖಾಂತರ ಅದರ ಮಹತ್ವವನ್ನು ಹಾಳುಮಾಡುತ್ತಿದ್ದಾರೆ. ಈ ರೀತಿ ರಾಜಕೀಯದಲ್ಲಿ ಮೂಗು ತೂರಿಸುವ ಸ್ವಾಮಿಗಳಿಗೆ ಕೆಲವೊಮ್ಮೆ ಅದೇ ಸಮುದಾಯದ ಜನರು ಎಚ್ಚರಿಕೆಯನ್ನು ಕೂಡ ನೀಡುವುದನ್ನು ನಾವು ನೋಡಿದ್ದೇವೆ. ಅಂತೆಯೇ ಇದೀಗ ಬಸವ ಜಯಮೃತ್ಯುಂಜಯ ಸ್ವಾಮೀಜಿ( Basava Jaya Mrityunjay Swamiji) ಅವರಿಗೆ ಅವರದ್ದೇ ಸಮುದಾಯದ ಜನರು ರಾಜಕೀಯದಲ್ಲಿ ಮೂಗು ತೂರಿಸಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹೌದು, 6 ವರ್ಷಗಳ ಕಾಲ ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಸಮುದಾಯದ ನಾಯಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ನಿನ್ನೆಯಷ್ಟೇ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಪಂಚಮಸಾಲಿ ಸಮುದಾಯದ ಪ್ರಮುಖ ಬಿಜೆಪಿ ನಾಯಕರು, ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ವಿರುದ್ಧ ಕಿಡಿಕಾರಿದ್ದು, ರಾಜಕೀಯದಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕರು ‘ಸ್ವಾಮೀಜಿಗಳು ಬಿಜೆಪಿಯ ಆಂತರಿಕ ವಿಚಾರದಲ್ಲಿ ಮೂಗು ತೂರಿಸದೆ ಸಮುದಾಯವನ್ನು ಒಗ್ಗೂಡಿಸುವ ಕೆಲಸವನ್ನು ಸ್ವಾಮೀಜಿ ಮಾಡಬೇಕು. ಬಿಜೆಪಿ ಯತ್ನಾಳ್ ಅವರನ್ನು ಉಚ್ಚಾಟಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಇದು ಆ ಪಕ್ಷದ ಸಂಪೂರ್ಣ ಆಂತರಿಕ ವಿಷಯ. ಆದರೆ ಯತ್ನಾಳ್ ಅವರನ್ನು ನೇರವಾಗಿ ಬೆಂಬಲಿಸುವ ಮೂಲಕ ಮತ್ತು ಅವರನ್ನು ದೊಡ್ಡ ಪಂಚಮಸಾಲಿ ನಾಯಕ ಎಂದು ಬಿಂಬಿಸುವ ಮೂಲಕ ಸ್ವಾಮೀಜಿ ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತಿದ್ದಾರೆ. ಈ ಮೂಲಕ ಸಮುದಾಯದ ಮಾನ ಹಾಳು ಮಾಡುತ್ತಿದ್ದಾರೆ, ಇದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

Comments are closed.