PUC Fail: ಪಿಯುಸಿ ಫೇಲ್; ಮನನೊಂದ ಐವರು ವಿದ್ಯಾರ್ಥಿನಿಯರು ಆತ್ಮಹತ್ಯೆ!

Bangalore: ದ್ವಿತೀಯ ಪಿಯುಸಿ ಪರೀಕ್ಷೆ ಮಂಗಳವಾರ ಪ್ರಕಟವಾಗುತ್ತಿದ್ದಂತೆಯೇ ಅನುತ್ತೀರ್ಣಗೊಂಡ ಐವರು ವಿದ್ಯಾರ್ಥಿನಿಯರು ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿನಿ ಐಶ್ವರ್ಯ(17) ಕಲಾಮಂದಿರ ಅಪಾರ್ಟ್ ಮೆಂಟ್ನಲ್ಲಿ (ಪಿಡಬ್ಲ್ಯೂಡಿ ವಸತಿ ಗೃಹ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಲೋಕೋಪಯೋಗಿ ಇಲಾಖೆಯ ಡಿ ಗ್ರೂಪ್ ನೌಕರರಾದ ಮಂಜುಳಾ ಅವರ ಪುತ್ರಿ ಐಶ್ವರ್ಯ ವಿಜ್ಞಾನ ವಿಭಾಗದಲ್ಲಿ ರಸಾಯನಶಾಸ್ತ್ರ ವಿಷಯದಲ್ಲಿ ಫೇಲಾದ ಕಾರಣ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಅಗಸನೂರು ಗ್ರಾಮದ ಮಲ್ಲಯ್ಯ- ನಾಗರತ್ನಾ ದಂಪತಿ ಪುತ್ರಿ ವಿಜಯಲಕ್ಷ್ಮಿ ಸಿರುಗಪ್ಪದ ವಿಕೆಜೆ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಸಮಾಜಶಾಸ್ತ್ರದಲ್ಲಿ ಕೇವಲ 15 ಅಂಕ ಪಡೆದು ಅನುತ್ತೀರ್ಣಗೊಂಡಿದ್ದು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕುಡಿನೀರಕಟ್ಟೆಯ ಚಂದ್ರಶೇಖರಪ್ಪ – ವೀಣಾ ದಂಪತಿ ಪುತ್ರಿ ಕೃಪಾ(18) ದಾವಣಗೆರೆ ಖಾಸಗಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಎರಡು ವಿಷಯದಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ವರದಿಯಾಗಿದೆ.
ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದ ತಾಂಡಾದ ವಿದ್ಯಾರ್ಥಿನಿಯೊಬ್ಬಳು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾವ್ಯ ಬಸಪ್ಪ ಲಮಾಣಿ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
Comments are closed.