Rakshak Bullet : ರಕ್ಷಕ್ ಬುಲೆಟ್ ನಿಂದ ನಾಡದೇವಿ ಚಾಮುಂಡೇಶ್ವರಿ ಗೆ ಅವಮಾನ? ಭಾರಿ ಆಕ್ರೋಶ

 

Rakshak Bullet: ಬುಲೆಟ್ ಪ್ರಕಾಶ್ ಮಗ ರಕ್ಷಕ್ ಬುಲೆಟ್ ಸಿನಿಮಾ, ಕಿರುತೆರೆ, ರಿಯಾಲಿಟಿ ಶೋಗಳ ಮೂಲಕ ಇದೀಗ ಚಂದನ ಮನದಲ್ಲಿ ಮಿಂಚುತ್ತಿದ್ದಾರೆ. ಇದೆಲ್ಲದರ ನಡುವೆ ಅವರು ಟ್ರೋಲಿಗರ ಬಾಯಿಗೆ ಸದಾ ತುತ್ತಾಗುತ್ತಿರುತ್ತಾರೆ. ಆದರೆ ಈಗ ಅವರು ವಿವಾದ ಒಂದನ್ನು ಮೈಮೇಲೆ ಎಳೆದುಕೊಂಡಿದ್ದು, ನಾಡ ದೇವಿ ಚಾಮುಂಡೇಶ್ವರಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಅವರ ಮೇಲೆ ಬಂದಿದೆ.

 

ಹೌದು, ರಕ್ಷಕ್ ಇದೀಗ ಚಾಮುಂಡೇಶ್ವರಿ ವಿಷಯವಾಗಿ ಟೀಕೆಗೆ ಒಳಗಾಗಿದ್ದಾರೆ. ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರದಲ್ಲಿ ವೇದಿಕೆ ಮೇಲೆ ರಕ್ಷಕ್ ಬುಲೆಟ್ ‘ ಹೊಡೆದ ಡೈಲಾಗ್ ಇದೀಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಇದನ್ನು ಇಟ್ಟುಕೊಂಡು ಅನೇಕ ಹಿಂದೂ ಪರ ಸಂಘಟನೆಗಳು ರಕ್ಷಕ್ ಮೇಲೆ ಮುಗಿಬಿದ್ದಿದ್ದಾರೆ.

 

ಏನದು ಡೈಲಾಗ್‌?

ಬುಲ್ ಬುಲ್ ಸಿನಿಮಾದಲ್ಲಿ ದರ್ಶನ್‌ ರಚಿತಾ ರಾಮ್‌ರನ್ನು ಸ್ವಿಟ್ಜರ್ಲೆಂಡ್‌ನಲ್ಲಿ ಭೇಟಿಯಾದಾಗ ಹೊಡೆಯುವ ಡೈಲಾಗ್‌ ಅನ್ನೇ ರಕ್ಷಕ್ ಬುಲೆಟ್ ಹೇಳಿದ್ದಾರೆ ‘ನಿಮ್ಮನ್ನ ನೋಡ್ತಾ ಇದ್ದ ಹಾಗೆಯೇ ಅಂದುಕೊಂಡೆ. ತಾಯಿ ಚಾಮುಂಡೇಶ್ವರಿನೇ ಬೆಟ್ಟದಿಂದ ಇಳಿದು, ಸೀರೆ-ಒಡವೆ ಎಲ್ಲಾ ಬಿಚ್ಚಿಟ್ಟು, ಪ್ಯಾಂಟು-ಶರ್ಟು ಹಾಕಿಕೊಂಡು ಸ್ವಿಜರ್ಲೆಂಡ್‌ಅಲ್ಲಿ ಒಳ್ಳೇ ಟ್ರಿಪ್‌ ಹೊಡೀತಾ ಇದ್ದಾರೆ ಅಂತಾ’ ಎನ್ನುವ ಡೈಲಾಗ್‌ ಇದೀಗ ವಿವಾದದ ಕಿಡಿ ಹೊತ್ತಿಸಿದೆ. ರಕ್ಷಕ್ ಬುಲೆಟ್‌ ಏನೋ ಉತ್ಸಾಹದಲ್ಲೇ ಡೈಲಾಗ್ ಹೊಡೆದಿದ್ದಾರೆ. ಆದರೆ ಚಾಮುಂಡೇಶ್ವರಿ ಸೀರೆ ಒಡವೆ ಬಿಚ್ಚಿಟ್ಟು ಪ್ಯಾಂಟು ಶರ್ಟ್ ಹಾಕಿಕೊಂಡು ಎನ್ನುವ ಸಾಲುಗಳೇ ವಿವಾದಕ್ಕೆ ಕಾರಣವಾಗಿದೆ.

ಈ ವಿಡಿಯೊವನ್ನು ಹಂಚಿಕೊಂಡಿರುವ ಕೆಲ ನೆಟ್ಟಿಗರು ರಕ್ಷಕ್ ಬುಲೆಟ್ ಚಾಮುಂಡೇಶ್ವರಿಗೆ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಆದರೆ ಇದು ವಾಸ್ತವವಾಗಿ ದರ್ಶನ್ ಹಾಗೂ ರಚಿತಾ ರಾಮ್ ನಟನೆಯ ಬುಲ್ ಬುಲ್ ಸಿನಿಮಾದ ಡೈಲಾಗ್ ಆಗಿದ್ದು, ಕೆಲವರು ಸಿನಿಮಾದ ಡೈಲಾಗ್ ಬರೆದವರನ್ನು ಅಥವಾ ಇಂತಹ ಡೈಲಾಗ್ ಅನ್ನು ಮತ್ತೆ ಬಳಸಿದ ಕಾರ್ಯಕ್ರಮದ ಡೈಲಾಗ್ ಬರಹಗಾರರನ್ನು ಪ್ರಶ್ನಿಸಿ ಅದನ್ನು ಬಿಟ್ಟು ರಕ್ಷಕ್‌ರನ್ನು ಟೀಕಿಸುವುದು ಎಷ್ಟು ಸರಿ ಎಂದಿದ್ದಾರೆ.

Comments are closed.