Crime News: ಸ್ಮಶಾನದಲ್ಲಿ ಗಾಂಜಾ ಗಿಡ ಬೆಳೆದವನ ಬಂಧನ

Marijuana plants: ಇತ್ತೀಚೆಗೆ ಗಾಂಜ ಬೆಳೆಯಲು ಇಂಥದ್ದೇ ಜಾಗ ಬೇಕೆಂದಿಲ್ಲ. ಮನೆಯ ಹಿತ್ತಿಲು, ಬಾಲ್ಕನಿಯಿಂದ ಹಿಡಿದು ಎಲ್ಲಾ ಕಡೆ ಬೆಳೆಯುತ್ತಾರೆ. ಇದೀಗ ಸ್ಮಶಾನದ ಜಾಗದಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಗಿಡಗಳನ್ನು ಬೆಳೆಸಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದ್ದಾರೆ. ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಶೈಲಜಾ ಬಡವಾಣೆಯಲ್ಲಿ ಈ ಕೃತ್ಯ ಎಸಗಲಾಗಿದೆ.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸ್ ಠಾಣೆಗಳಿಗೆ ಸಾರ್ವಜನಿಕರಿಂದ ಆಗಾಗದ ದೂರು ನೀಡಲಾಗುತ್ತಿತ್ತು. ನಿಷೇಧಿತ ಮಾದಕ ವಸ್ತುಗಳ ಮಾರಾಟ, ಸರಬರಾಜು, ಬಳಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಆರ್.ವಿ.ಗಂಗಾಧರಪ್ಪ, ಡಿವೈಎಸ್ಪಿ, ಸೋಮವಾರಪೇಟೆ ಉಪವಿಭಾಗ, ಪ್ರಕಾಶ್.ಬಿ.ಜಿ. ಪಿಐ, ಮತ್ತು ಗೀತಾ, ಪಿಎಸ್ಐ, ಕುಶಾಲನಗರ ಟೌನ್ ಪೊಲೀಸ್ ಠಾಣೆ & ಸಿಬ್ಬಂದಿಗಳು ಹಾಗೂ ಡಿಸಿಆರ್ಬಿ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿದ್ದಾರೆ.
ಮಾ. 15ರಂದು ಶೈಲಜಾ ಬಡವಾಣೆಯಲ್ಲಿರುವ ಸ್ಮಶಾನದ ಜಾಗದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಗಿಡಗಳನ್ನು ಬೆಳೆಸಿರುವ ಕುರಿತು ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಹೇರೂರು ಗ್ರಾಮದ ನಿವಾಸಿ ಪ್ರಶಾಂತ್(29) ಎಂಬಾತನನ್ನು ನಿಷೇಧಿತ ಮಾದಕ ವಸ್ತು 1 ಕೆ.ಜಿ 731 ಗ್ರಾಂ ತೂಕದ 19 ಹಸಿ ಗಾಂಜಾ ಗಿಡಗಳೊಂದಿಗೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮಡಿಕೇರಿಯ ಕೆ. ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನ ಅಭಿನಂದಿಸಿದ್ದಾರೆ.
Comments are closed.