Tulu lipi: ವಿಟ್ಲ: ತುಳು ಲಿಪಿ ಶಾಸನ ಪತ್ತೆ

Tulu lipi: ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಕಸಬ ಗ್ರಾಮ ವ್ಯಾಪ್ತಿಗೆ ಸೇರುವ ಶ್ರೀ ಗಣಪತಿ ಲಕ್ಷ್ಮೀ ನಾರಾಯಣ ಉಮಾಮಹೇಶ್ವರ ದೇವರ ಮಠದ ಜೀರ್ಣೋದ್ಧಾರ ಸಂದರ್ಭದಲ್ಲಿ ಎರಡು ಶಿಲಾ ಫಲಕದಲ್ಲಿ ತುಳು ಲಿಪಿ (Tulu lipi) ಶಾಸನಗಳು ದೊರೆತಿದೆ.
ಇಲ್ಲಿ ದೊರೆತ ತುಳು ಲಿಪಿ ಶಾಸನಗಳ ಪ್ರಾಥಮಿಕ ಮಾಹಿತಿಯನ್ನು ಡಾ. ವೆಂಕಟೇಶ ಮಂಜುಳಗಿರಿ ಅವರಿಂದ ಪಡೆದುಕೊಂಡು ಶ್ರೀನಿಕೇತನ ವಸ್ತುಸಂಗ್ರಹಾಲಯ ಮತ್ತು ಸಂಶೋಧನ ಕೇಂದ್ರ- ಕುಕ್ಕೆ ಸುಬ್ರಹ್ಮಣ್ಯ ಇದರ ನಿರ್ದೇಶಕರಾದ ಡಾ. ಜಿ.ವಿ ಕಲ್ಲಾಪುರ ಅವರು ಶಾಸನದ ಅಧ್ಯಯನವನ್ನು ಮಾಡಿರುತ್ತಾರೆ.
ಶಾಸನವನ್ನು ಎರಡು ಕಣ ಶಿಲೆಯಲ್ಲಿ (ಗ್ರಾನೈಟ್) ಕೊರೆಯಲಾಗಿದ್ದು, ತುಳು ಲಿಪಿ ಮತ್ತು ಕನ್ನಡ ಭಾಷೆಯಲ್ಲಿದೆ. ಶಾಸನದ ಒಂದು ಫಲಕದಲ್ಲಿ 11 ಸಾಲುಗಳು ಮತ್ತು ಇನ್ನೊಂದು ಫಲಕದಲ್ಲಿ 4 ಸಾಲುಗಳಿವೆ. ಸ್ವಸ್ತಿಶ್ರೀ ಎಂಬ ಶುಭ ಸೂಕ್ತದಿಂದ ಪ್ರಾರಂಭವಾಗುವ ಈ ಶಾಸನವನ್ನು ಶಾಲಿವಾಹನ ಶಕವರ್ಷ 1801ರ (ಸಾಮಾನ್ಯ ವರ್ಷ 1879) ಪ್ರಮಾಧಿ ಸಂವತ್ಸರದ ಉತ್ತರಾಯಣದ ಬಹುಳ ಬುಧವಾರದ ಕುಂಭ ಲಗ್ನದಲ್ಲಿ ಹಾಕಲ್ಪಟ್ಟಿದೆ. ಈ ಸಂದರ್ಭದಲ್ಲಿ ವಿಟ್ಲದ ಬಕ್ರಬೈಲಿನ ನೆತ್ರಕೆರೆಯ ಮಠದಲ್ಲಿ ಶ್ರೀ ಗಣಪತಿ ಲಕ್ಷ್ಮೀ ನಾರಾಯಣ ದೇವರನ್ನು ಪ್ರತಿಷ್ಠಾಪಿಸಿರುವುದು ಹಾಗೆಯೇ ಪ್ರತಿಷ್ಠಿತ ದೇವರ ನಿತ್ಯ ಸೇವೆಯ ವಿನಿಯೋಗಕ್ಕಾಗಿ ನಗದು ಸಹಿತ ದಾನವನ್ನು ಕುಕ್ಕಿಲದ ಪುಟ್ಟಣ ಭಟ್ಟರ ಮಗ ಈಶ್ವರ ಭಟ್ಟರು ನೀಡಿರುವುದು ತಿಳಿದುಬರುತ್ತದೆ.
Comments are closed.