CM Post: ಸಿದ್ದು ಬಣದಲ್ಲೇ ಸಿಎಂ ಕುರ್ಚಿಗಾಗಿ ಕಸರತ್ತು! ಹಾಗಾದರೆ ಲಾಭ ಯಾರಿಗೆ?

CM Post: ಪರ್ಯಾಯ ನಾಯಕತ್ವಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramayiah) ಬಣದಲ್ಲೇ ಬಿರುಕು ಮೂಡಿದೆ. ಹಿರಿತನದ ಕಡೆಗಣನೆಗೆ ಸಂಬಂಧಿಸಿದಂತೆ ಮೂಡಿರುವ ಬಿಕ್ಕಟ್ಟು ಶಮನಕ್ಕೆ ಸತೀಶ್ ಜಾರಕಿಹೊಳಿ(Sathish jarakiholi) ಅವರೇ ಮುಂದಾಗಿದ್ದಾರೆ.

ಮುಡಾ ಬಿಡಿ ನಿವೇಶನ(MUDA Scame) ಹಾಗೂ ಪ್ರಾಧಿಕಾರದ ಹಣವನ್ನು ಎರಡು ಕ್ಷೇತ್ರಗಳ ಅಭಿವೃದ್ಧಿಗೆ ಬಳಸಿದ ವಿಚಾರಕ್ಕೆ ಸಂಬಂಧಿಸಿದಂತೆ ನಿದೇರ್ಶನಾಲಯ(ED) ಯಾವುದೇ ಕ್ಷಣದಲ್ಲಿ ಮುಖ್ಯಮಂತ್ರಿ ಅವರಿಗೆ ನೋಟಿಸ್ ಜಾರಿ ಮಾಡಿ ಕಾನೂನು ಕ್ರಮಕ್ಕೆ ಮುಂದಾಗಬಹುದು. ನ್ಯಾಯಾಲಯಗಳು ಕರ್ನಾಟಕದ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಆದೇಶ ನೀಡಿದ ನಂತರ ಕಾಂಗ್ರೆಸ್ ವರಿಷ್ಠರು ಮೌನ ವಹಿಸಿರುವುದಲ್ಲದೆ, ತೆರೆಮರೆಯಲ್ಲೇ ಪರ್ಯಾಯ ನಾಯಕತ್ವಕ್ಕೆ ಅನ್ವೇಷಣೆ ನಡೆಸಿದ್ದಾರೆ.

ಇದರ ಸುಳಿವರಿತ ಸಿದ್ದರಾಮಯ್ಯ ತಾವು ಅಧಿಕಾರ ತ್ಯಜಿಸಿದರೆ, ತಮ್ಮ ಬೆಂಬಲಿಗರೇ ನಾಯಕತ್ವ ವಹಿಸಿಕೊಳ್ಳಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಇದರ ಹಿನ್ನೆಲೆಯಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಮ್ಮ ಬೆಂಬಲಿಗರ ಮೂಲಕ ಕರ್ನಾಟಕ ರಾಜಕೀಯಕ್ಕೆ ಹಿಂತಿರುಗಿ ಮುಖ್ಯಮಂತ್ರಿ ಆಗಿ ಎಂಬ ಸಂದೇಶ ನೀಡಿದ್ದರು.ಅವರು ರಾಜ್ಯ ರಾಜಕಾರಣ- ಕ್ಕೆ ಬರುವುದಿಲ್ಲ ಎನ್ನುವುದು ತಿಳಿದ ವಿಚಾರವೇ. ಆದರೂ, ಮಲ್ಲಿಕಾರ್ಜುನ ಖರ್ಗೆ ಮತ್ತು ಎಐಸಿಸಿ ನಾಯಕರ ವಿಶ್ವಾಸ ಪಡೆದುಕೊಳ್ಳಲು ಸಿದ್ದರಾಮಯ್ಯ ತಂತ್ರಗಾರಿಕೆಯನ್ನು ಅನುಸರಿಸಿದ್ದಾರಷ್ಟೇ ಎನ್ನುವುದು ಗುಟ್ಟಿನ ಸಂಗತಿಯೇನಲ್ಲ.

ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಬರಲು ನಿರಾಕರಿಸಿದ ಬೆನ್ನಲ್ಲೇ ಸಿದ್ದರಾಮಯ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹಸಿರು ನಿಶಾನೆ ತೋರಿದಗದಾರಂತೆ. ಸತೀಶ್ ಜಾರಕಿಹೊಳಿ ಅವರನ್ನು ಬೆಂಬಲಿಸಿರುವುದು ಸಿದ್ದರಾಮಯ್ಯದ ಬಣ ಹಿರಿಯ ಸಚಿವರಾದ ಡಾ.ಜಿ.ಪರಮೇಶ್ವರ್ ಹಾಗೂ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಇರಿಸು-ಮುರಿಸು ಮೂಡಿಸಿದೆ. ಸತೀಶ್ ಜಾರಕಿಹೊಳಿ ಅವರನ್ನು ಖುದ್ದು ಸಿದ್ದರಾಮಯ್ಯ ಅವರೇ ಸಿಎಂ ಹುದ್ದೆ ರೇಸ್‌ಗೆ ದೂಡಿದ್ದಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆಯೇ ಡಾ.ಪರಮೇಶ್ವರ್ ಹಾಗೂ ಡಾ.ಮಹದೇವಪ್ಪ ಸದ್ಯದ ರಾಜಕೀಯ ವಿದ್ಯಮಾನ ಮತ್ತು ಇತರೆಲ್ಲಾ ಬೆಳವಣಿಗೆಗಳಿಂದ ದೂರ ಉಳಿದು ತಮ್ಮ ಜಿಲ್ಲಾ ಕೇಂದ್ರಗಳಲ್ಲೇ ಬಿಡಾರ ಹೂಡಿದ್ದಾರೆ.

ಇದರ ಸುಳಿವರಿತ ಸತೀಶ್ ಜಾರಕಿಹೊಳಿ ಕಳೆದ ಎರಡು ದಿನಗಳ ಹಿಂದೆ ತುಮಕೂರಿಗೆ ತೆರಳಿ ಡಾ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಗೌಪ್ಯ ಮಾತುಕತೆ ನಡೆಸಿದರು. ಮಂಗಳವಾರದಂದು ಮೈಸೂರಿಗೆ ತೆರಳಿ ಡಾ.ಮಹದೇವಪ್ಪ ಅವರೊಂದಿಗೆ ಚರ್ಚಿಸಿದ ಸತೀಶ್ ಜಾರಕಿಹೊಳಿ ತಮ್ಮ ಬಣದಲ್ಲಿ ಒಗ್ಗಟ್ಟು ಕಾಪಾಡಿಕೊಳ್ಳುವ ಜತೆಗೆ ವಿಶ್ವಾಸ ಗಳಿಸುವಲ್ಲಿ ಪ್ರಯತ್ನ ಮುಂದುವರೆಸಿದ್ದಾರೆ.

ಕಳೆದ ಎರಡು ದಿನಗಳಿಂದ ನಗರದಲ್ಲೇ ಬಿಡಾರ ಹೂಡಿದ್ದ ಜಾರಕಿಹೊಳಿ ಕೆಲವು ಸಚಿವರು ಮತ್ತು ಶಾಸಕರ ಜೊತೆ- ಯೂ ಗೌಪ್ಯ ಮಾತುಕತೆ ನಡೆಸಿದ್ದರು. ಸಿದ್ದರಾಮಯ್ಯ ಮಾತ್ರ ತಮಗೇನೂ ತಿಳಿದಿಲ್ಲ ಎನ್ನುವಂತೆಯೇ ಮೌನಕ್ಕೆ ಶರಣಾಗಿದ್ದಾರೆ. ತಾವೇನಾದರೂ ಕುರ್ಚಿ ತ್ಯಜಿಸಲೇಬೇಕಾದ ಪರಿಸ್ಥಿತಿ ಅನಿವಾರ್ಯ ಎನಿಸಿದಾಗ ಪರ್ಯಾಯ ನಾಯಕತ್ವಕ್ಕೆ ವೇದಿಕೆ ಸಿದ್ಧ ಪಡಿಸಲು ಒಳಗೊಳಗೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಂದೆ ಅವಕಾಶ ದೊರೆಯುವುದಾದರೆ ವರಿಷ್ಠರು ತಮ್ಮನ್ನು ಕೈಬಿಡುವುದಿಲ್ಲ ಎಂಬ ಅತಿಯಾದ ವಿಶ್ವಾಸದಲ್ಲಿದ್ದಾರೆ. ಇದರ ನಡುವೆಯೇ ತಮ್ಮ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಮೂಲಕವೂ ಬಹಳ ಗೌಪ್ಯವಾಗಿ ತಮಗೆ ಅಧಿಕಾರ ತಪ್ಪದಂತೆ ಜಾಗ್ರತೆ ವಹಿಸಿದ್ದಾರೆ.

ಸುರೇಶ್ ನಿನ್ನೆ ಸತೀಶ್ ನಿವಾಸಕ್ಕೆ ತೆರಳಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ಮಾಡಿದ್ದಾರೆ. ಆದರೆ, ಮಾತುಕತೆ ವಿವರ ತಿಳಿದುಬಂದಿಲ್ಲ. ತನ್ಮಧ್ಯೆ. ಡಿ.ಕೆ.ಶಿವಕುಮಾರ್ ಮತ್ತು ಸುರೇಶ್ ಇಬ್ಬರೂ ಸ್ವಪಕ್ಷೀಯ ಶಾಸಕರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ತಮ್ಮೊಟ್ಟಿಗೆ ಗುರ್ತಿಸಿಕೊಂಡಿರುವ ಸಚಿವರ ಮೂಲಕ ಶಾಸಕರ ಸಂಖ್ಯೆ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲೂ ಪ್ರಯತ್ನ ಮುಂದುವರೆಸಿದ್ದಾರೆ.

Leave A Reply

Your email address will not be published.