Thirthodbhava: ಮಡಿಕೇರಿಯ ಭಾಗಮಂಡಲದಂತೆ ಕೇರಳದ ಎರಡು ಕಡೆ ತೀರ್ಥೋದ್ಭವ: ಅದೆಲ್ಲಿ ಹುಟ್ಟುತ್ತಾಳೆ ಕಾವೇರಿ ಮಾತೆ?

Thirthodbhava: ಕೇರಳ ರಾಜ್ಯದ ಎರಡು ಕಡೆ ಕೊಡಗಿನ ತಲಕಾವೇರಿಯಲ್ಲಿ ತೀರ್ಥ ಬರುವ ಸಂದರ್ಭದಲ್ಲಿ ಅಲ್ಲೂ ಕೂಡ ತೀರ್ಥೋದ್ಭವವಾಗುತ್ತದೆ. ಇಲ್ಲೂ ಪ್ರತಿ ವರ್ಷ ತುಲಾ ಸಂಕ್ರಮಣ ದಿನದಂದು ಅಸಂಖ್ಯಾತ ಭಕ್ತಾದಿಗಳು ಪುಣ್ಯ ಸ್ಥಾನವನ್ನು ಮಾಡಿ ಪುನೀತರಾಗುತ್ತಾರೆ.

ಸಾವಿರಾರು ವರ್ಷಗಳ ಇತಿಹಾಸ ಇರುವ ಕಾವೇರಮ್ಮನ ದೇವಾಲಯ ಕಾಸರಗೋಡು ಜಿಲ್ಲೆಯ ಮುಜಂಗಾವ್ ನಲ್ಲಿ ಶ್ರೀ ಮಹಾಲಿಂಗೇಶ್ವರ ಕಾವೇರಮ್ಮ ಕ್ಷೇತ್ರದಲ್ಲಿ ನೆಲೆ ನಿಂತಿದೆ.

ಮಡಿಕೇರಿಯಿಂದ ಸುಳ್ಯ, ಜಾಲ್ಸೂರು ಮಾರ್ಗವಾಗಿ ಕಾಸರಗೋಡಿಗೆ ತೆರಳುವಾಗ, ಜಾಲ್ಸೂರುನಿಂದ 20ಕಿ.ಮೀ ದೂರದಲ್ಲಿ ಸಿಗುವ ಗಾಳಿಮುಖದಿಂದ 3 ಕೀ.ಮೀ ಒಳ ರಸ್ತೆಯಲ್ಲಿ ಸಾಗಿದರೆ ಕಾವೇರಮ್ಮನ ಕ್ಷೇತ್ರ ಕಾಣಸಿಗುತ್ತದೆ.

ಮಹಾಲಿಂಗೇಶ್ವರ ದೇವಾಲಯದ ಮುಂಭಾಗ 200 ಮೀಟರ್ ಒಳಗಡೆ ತಲಕಾವೇರಿಯಂತೆ ತೀರ್ಥ ಕುಂಡಿಕೆ ಹಾಗೂ ಕೊಳವಿದೆ. ಇದೀಗ ಜೀರ್ಣೋದ್ಧಾರ ಕಾರ್ಯವಾಗುತ್ತಿದ್ದು ತೀರ್ಥಕುಂಡಿಕೆಯ ಸಮೀಪ ಇದ್ದ ಕಾವೇರಮ್ಮನ ಮೂರ್ತಿಯನ್ನು ಸಮೀಪದ ಬಾಲಾಲಯದಲ್ಲಿ ಇರಿಸಲಾಗಿದ್ದು, ಪ್ರತಿದಿನ ಪೂಜೆ ನೆರವೇರುತ್ತಿದೆ.

ಅಚ್ಚರಿಯೆಂಬಂತೆ ತುಲಾ ಸಂಕ್ರಮಣದ ಪವಿತ್ರ ತೀರ್ಥೋದ್ಭವ ದಿನದಂದು ಇಲ್ಲಿನ ತೀರ್ಥಕುಂಡಿಕೆಯಲ್ಲಿ ತೀರ್ಥೋದ್ಭವವಾಗುತ್ತದೆ. ಈ ಬಾರಿ ಅಕ್ಟೋಬರ್ 17ರಂದು ಬೆಳಿಗ್ಗೆ ತೀರ್ಥೋದ್ಭವವಾಗಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಬಂದು ತೀರ್ಥ ಸ್ಥಾನವನ್ನು ಮಾಡಿ ಪೂಜೆ ನೆರವೇರಿಸುತ್ತಾರೆ.

ಈ ಕ್ಷೇತ್ರವು ಪರಶುರಾಮ ಸೃಷ್ಟಿ ಎಂದು ಹೇಳಲಾಗುತ್ತಿದೆ. ಪರಶುರಾಮ ಕೊಡಲಿಯನ್ನು ಎಸೆಯುವಾಗ ಇಲ್ಲಿ ಬಂದು ಬಿದ್ದು ಕಾವೇರಮ್ಮನ ಕ್ಷೇತ್ರವಾಗಿದೆ ಎಂದು ಪುರಾಣಗಳು ಹೇಳುತ್ತವೆ. ಶ್ರೀ ಮಹಾಲಿಂಗೇಶ್ವರ ದೇವಾಲಯವು ಕೇರಳ ರಾಜ್ಯ ಸರ್ಕಾರದ ಅಧೀನದಲ್ಲಿದ್ದು ಈ ದೇವಾಲಯದ ಮುಂಭಾಗದಲ್ಲಿರುವ ಕಾವೇರಮ್ಮ ತೀರ್ಥಕುಂಡಿಕೆ ಇರುವ ಪ್ರದೇಶವು ಮಂಗಳೂರಿನ ಖ್ಯಾತ ವೈದ್ಯರಾದ ಡಾ. ಶ್ರೀನಿವಾಸ ಕಕ್ಕಿಲಾಯ ರವರ ಒಡೆತನದಲ್ಲಿದೆ. ಶ್ರೀನಿವಾಸ ಕಕ್ಕಿಲಾಯರವರು ಪ್ರಗತಿಪರ ಚಿಂತಕರು ಆಗಿದ್ದರೂ ಕೂಡ ಕಾವೇರಮ್ಮನ ಬಗ್ಗೆ ಹೆಚ್ಚು ಭಕ್ತಿ ಹೊಂದಿದ್ದು, ಇದರ ಅಭಿವೃದ್ಧಿ ಕಾರ್ಯಗಳನ್ನು ಕೂಡ ನಡೆಸಿದ್ದಾರೆ.

ಪ್ರತಿದಿನ ಬೆಳಿಗ್ಗೆ 11 ರಿಂದ 12:30 ಗಂಟೆ ತನಕ ಇಲ್ಲಿ ಪೂಜೆ ನೆರವೇರಿಸಲಾಗುವುದು ಎಂದು ಶ್ರೀನಿವಾಸ ಕಕ್ಕಿಲಾಯರವರ ತೋಟದ ಉಸ್ತುವಾರಿಯನ್ನು ಹೊತ್ತಿರುವ ನಾರಾಯಣ ಭಟ್ರು ಹೇಳಿದ್ದಾರೆ.

ಸಾವಿರಾರು ವರ್ಷಗಳು ಇತಿಹಾಸ ಇರುವ ಈ ಕ್ಷೇತ್ರ ನೋಡಲು ತಲಕಾವೇರಿಯ ತೀರ್ಥಕುಂಡಿಕೆಯಂತಿದೆ. ಪ್ರತಿನಿತ್ಯ ಇಲ್ಲಿ ಕೆಳಭಾಗದಿಂದ ಜಲ ಬರುತ್ತಿದ್ದು ತೀರ್ಥೋದ್ಭವ ದಿನದಂದು ಮೇಲ್ಭಾಗಕ್ಕೆ ಉಕ್ಕುತ್ತದೆ. ಪ್ರತಿ ವರ್ಷ ನಾವು ಇದನ್ನು ಸಾಕ್ಷಿಕರಿಸುತ್ತೇವೆ ಎಂದು ನಾರಾಯಣ ಅವರು ಹೇಳುತ್ತಾರೆ. ಇದರ ಸಮೀಪದಲ್ಲಿ ನಾಗನಕಟ್ಟೆಯು ಕೂಡ ಇದ್ದು ನಾಗನಿಗೂ ಸೇವೆ ನಡೆಯುತ್ತದೆ.

ಸುತ್ತಲೂ ಪ್ರಕೃತಿ ಸೌಂದರ್ಯದಿಂದ ಕೂಡಿರುವ ಈ ಪ್ರದೇಶಕ್ಕೆ ಹೋಗುವ ಮಾರ್ಗ ಅಭಿವೃದ್ಧಿಯಾಗಬೇಕಷ್ಟೇ.

ಈ ಕ್ಷೇತ್ರದಂತೆ ಮತ್ತೊಂದು ತೀರ್ಥೋದ್ಭವವಾಗುವ ಸ್ಥಳವಿದ್ದು, ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪ ಮುಜಂಗಾವು ಎಂಬಲ್ಲಿ ಕೂಡ ತುಲಾ ಸಂಕ್ರಮಣದಲ್ಲಿ ತಲಕಾವೇರಿಯಲ್ಲಿ ತೀರ್ಥ ಬರುವ ಸಮಯದಲ್ಲಿ ಅಲ್ಲೂ ಕೂಡ ತೀರ್ಥೋದ್ಭವವಾಗುತ್ತದೆ. ಇಲ್ಲಿ ಇ. ಪ್ರದೇಶ ಗುಹೆ ಒಳಗಡೆ ಇದ್ದು, ಅಲ್ಲಿ ತೀರ್ಥೋದ್ಭವವಾಗುತ್ತದೆ. ಕೇರಳದ ಹಲವು ಭಾಗಗಳಿಂದ ಜನರು ಇಲ್ಲಿ ಬಂದು ಪುಣ್ಯ ದಿನದಂದು ತೀರ್ಥ ಸ್ಥಾನವನ್ನು ಮಾಡುತ್ತಾರೆ.

ಅಲ್ಲೂ ಕೂಡ ನಿಗದಿತ ಸಮಯದಲ್ಲಿ ತೀರ್ಥೋದ್ಭವವಾಗುತ್ತದೆಯಂತೆ. ಕಾವೇರಮ್ಮ ಕೊಡಗು ಸೇರಿ ಕೇರಳದ ಎರಡು ಕಡೆ ಕೂಡ ತೀರ್ಥರೂಪಿಣಿಯಾಗಿ ಕಾಣಿಸಿಕೊಂಡು ಅಸಂಖ್ಯಾ ಭಕ್ತಾದಿಗಳಿಗೆ ಆಶೀರ್ವದಿಸುತ್ತಿದ್ದಾಳೆ ಎಂದು ನಾರಾಯಣ ಹೇಳುತ್ತಾರೆ.

ಪ್ರಕೃತಿ ಸೌಂದರ್ಯದ ಸುಂದರ ಪರಿಸರದಲ್ಲಿ ಇಂತಹ ಕೌತುಕದ ಸ್ಥಳವನ್ನು ನೀವು ಕೂಡ ಒಮ್ಮೆ ಭೇಟಿ ನೀಡಿ ಮಾತೆಯ ಆಶೀರ್ವಾದ ಪಡೆದುಕೊಳ್ಳಬಹುದು.

ಅಲ್ಲೂ ಕೂಡ ನಿಗದಿತ ಸಮಯದಲ್ಲಿ ತೀರ್ಥೋದ್ಭವವಾಗುತ್ತಿದೆಯಂತೆ. ಕಾವೇರಮ್ಮ ಕೊಡಗು ಸೇರಿ ಕೇರಳದ ಎರಡು ಕಡೆ ಕೂಡ ತೀರ್ಥರೂಪಿಣಿಯಾಗಿ ಕಾಣಿಸಿಕೊಂಡು ಅಸಂಖ್ಯಾ ಭಕ್ತಾದಿಗಳಿಗೆ ಆಶೀರ್ವದಿಸುತ್ತಿದ್ದಾಳೆ ಎಂದು ನಾರಾಯಣ ಹೇಳುತ್ತಾರೆ..

ಪ್ರಕೃತಿ ಸೌಂದರ್ಯದ ಸುಂದರ ಪರಿಸರದಲ್ಲಿ ಇಂತಹ ಕೌತುಕದ ಸ್ಥಳವನ್ನು ನೀವು ಕೂಡ ಒಮ್ಮೆ ಭೇಟಿ ನೀಡಿ ಮಾತೆಯ ಆಶೀರ್ವಾದ ಪಡೆದುಕೊಳ್ಳಬಹುದು.

Leave A Reply

Your email address will not be published.