Kiccha Sudeep: ‘ಸುದೀಪ್ ಅವ್ರೆ.. ನಿಮ್ಮನ್ನು ಬಿಟ್ರೆ ಬೇರೆ ಯಾರು ಬಿಗ್​ಬಾಸ್​ ನಿರೂಪಣೆ ಮಾಡಬಹುದು?’ ಕಿಚ್ಚನ ಉತ್ತರ ಹೀಗಿತ್ತು.

Kiccha Sudeep: ಸೆಪ್ಟೆಂಬರ್‌ 29 ರಿಂದ ಬಿಗ್‌ ಬಾಸ್‌ ಕನ್ನಡ(Bigg Boss Kannada) ಸೀಸನ್‌ 11 ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ವಾಹಿನಿಯು ಪ್ರೆಸ್ ಮೀಟ್ ಕರೆದು ಹಲವು ವಿಚಾರಗಳನ್ನು ಚರ್ಚಿಸಿ ಕುತೂಹಲ ಹುಟ್ಟಿಸುತ್ತಿದೆ. ಅಲ್ಲದೆ ಪ್ರೆಸ್ ಮೀಟಲ್ಲಿ ಸುದೀಪ್ ಕೂಡ ಭಾಗಿಯಾಗಿದ್ದು ಸಂಭಾವನೆ, ರಮ್ಮಿ ಆಟ ಸೇರಿ ಹಲವು ವಿಚಾರಗಳ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ.

ಇದುವರೆಗೂ ಕಿಚ್ಚ ಸುದೀಪ್(Kiccha Sudeep) ಬದಲು ಬೇರೆಯವರು ಬಿಗ್ ಬಾಸ್ ಗೆ ನಿರೂಪಕರಾಗಿ ಬರುತ್ತಾರೆ ಎನ್ನಲಾಗಿತ್ತು. ಆದರೀಗ ಸುದೀಪ್ ಅವರೇ ದೊಡ್ಮನೆಯ ಹೋಸ್ಟ್ ಎಂದು ಖಚಿತವಾಗಿದೆ. ಈ ವಿಚಾರಗಳೂ ಪ್ರೆಸ್ ಮೀಟಲ್ಲಿ ಚರ್ಚೆಗೆ ಬಂದಿದ್ದು, ಸುದೀಪ್ ತುಂಬಾ ಮಾರ್ಮಿಕವಾಗಿ ಉತ್ತರಿಸಿದ್ದಾರೆ. ‘ಈ ಸೀಸನ್‌ ಹೊಸ ಅಧ್ಯಾಯ. ಈ ಸಂದರ್ಭದಲ್ಲಿ ಒಂದು ವಿಚಾರ ಹೇಳ್ತಿನಿ. ನಾನು ಈ ಸೀಸನ್‌ ಹೋಸ್ಟ್‌ ಮಾಡೋದಿಲ್ಲ ಎಂದು ಹೇಳಿದ್ದು ಸಂಭಾವನೆ ವಿಚಾರಕ್ಕೆ ಅಲ್ವೇ ಅಲ್ಲ. ಸಿನಿಮಾಗಳಿಗೆ ಸಮಯ ಹೊಂದಿಸಲು ಕಷ್ಟವಾಗುತ್ತಿದೆ ಎನ್ನುವ ಕಾರಣಕ್ಕೆ ಆರಂಭದಲ್ಲಿ ಹಿಂದೆ ಸರಿದಿದ್ದೆ. ಬಳಿಕ ಬಿಗ್‌ಬಾಸ್‌ ತಂಡದವರು ಮನೆಗೆ ಬಂದು ಒಪ್ಪಿಸಿದರು. ನೀವೆಲ್ಲರೂ ತಿಳಿದಿರಬೇಕು, ಎಲ್ಲದಕ್ಕೂ ಮಾರುಕಟ್ಟೆ ಇದೆ. ನನಗೆ ಏನು ದುಡಿಯಬೇಕೋ ಅದನ್ನು ದುಡಿಯುತ್ತೇನೆʼʼ ಎಂದು ಕಿಚ್ಚ ಹೇಳಿದ್ದಾರೆ.

ಬಳಿಕ ವರದಿಗಾರರೊಬ್ಬರು ‘ಒಂದು ವೇಳೆ ಮುಂದಿನ ಸೀಸನ್​ ಸಂದರ್ಭದಲ್ಲಿ ನಿರೂಪಣೆ ಮಾಡೋದೇ ಇಲ್ಲ ಅಂತ ನೀವು ನಿರ್ಧಾರ ಮಾಡಿದರೆ ಮತ್ತು ನಿಮ್ಮ ಸ್ಥಾನಕ್ಕೆ ಬೇರೆ ಯಾರನ್ನಾದರೂ ನೀವೇ ಆಯ್ಕೆ ಮಾಡಿ ಎಂದು ಕಲರ್ಸ್​ ಕನ್ನಡದವರು ಕೇಳಿದರೆ ಯಾವ ನಟರ ಹೆಸರನ್ನು ಸೂಚಿಸುತ್ತೀರಾ?’ ಎಂದು ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಸುದೀಪ್​, ಸಿನಿಮಾದಲ್ಲಿ ಕತೆ ಹೇಳಲು ಯಾರಾದರೂ ನನ್ನ ಬಳಿ ಬಂದಾಗ ಕತೆ ಕೇಳಿದ ಬಳಿಕ ನಾನು ಮಾಡಲ್ಲ ನೀವು ಅವರ ಬಳಿ ಹೋಗಿ, ಅವರು ಮಾಡುತ್ತಾರೆ ಎಂದು ನಾನು ಹೇಳ್ತೀನಾ? ಮಾಡಲ್ಲ ಅಂತೀನಿ ಅಷ್ಟೇ. ಕತೆ ನನಗೆ ಇಷ್ಟವಾಗಲಿಲ್ಲ ಎನ್ನಬಹುದು ಅಥವಾ ನನ್ನಿಂದ ಮಾಡಲು ಸಾಧ್ಯವಿಲ್ಲ ಎಂದು ಹೇಳಬಹುದಷ್ಟೇ. ಆ ನಂತರದ ನಿರ್ಧಾರ ಅವರವರಿಗೆ ಬಿಟ್ಟಿದ್ದಾಗಿರುತ್ತದೆ. ಈ ವಿಚಾರದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಅವರಿಗೆ ಇರುತ್ತದೆ. ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಸದ್ಯಕ್ಕೆ ನನ್ನ ಗಮನ ಬಿಗ್​ಬಾಸ್​ ಸೀಸನ್​ 11ರ ಮೇಲಿದೆ. ಈ ಸೀಸನ್​ ನಮ್ಮ ಬಳಿ ಇರಬೇಕಾದರೆ ಇದನ್ನು ಹೇಗೆ ಮಾಡಬೇಕೆಂದು ಚಿಂತಿಸುತ್ತೇನೆ ಹೊರತು ಮುಂದಿನ ಸೀಸನ್​ ಬಗ್ಗೆ ಚಿಂತಿಸುವುದಿಲ್ಲ ಎಂದು ಹೇಳಿದ್ದಾರೆ.

Leave A Reply

Your email address will not be published.