Seetaram Yechury: ಸಿಪಿಐ ನೇತಾರ, ಹಲವರ ನೆಚ್ಚಿನ ನಾಯಕ ಸೀತಾರಾಮ್ ಯೆಚೂರಿ ಯಾರು? ಶುದ್ಧ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಇವರು ಕಾಮ್ರೆಡ್ ಆಗಿದ್ದೇಗೆ?

Seetaram Yechury: ಸಿಪಿಐ-ಮಾರ್ಕ್ಸಿಸ್ಟ್‌ ಪಕ್ಷದ ನಾಯಕ ಹಾಗೂ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ(Seetaram Yechury) ಗುರುವಾರ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಇತ್ತೀಚೆಗೆ ಆಕ್ಸಿಜನ್‌ ಸಪೋರ್ಟ್‌ನಲ್ಲಿ ಇರಿಸಲಾಗಿತ್ತು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರಿಗೆ ಇತ್ತೀಚೆಗೆ ಆಕ್ಸಿಜನ್‌ ಸಪೋರ್ಟ್‌ ನೀಡಲಾಗಿತ್ತು ಆದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ. ದೇಶದದ ಪ್ರಧಾನಿ ಆದಿಯಾಗಿ ಪ್ರಜೆಗಳು ಕೂಡ ಇವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಹಾಗಿದ್ರೆ ಯಾರು ಈ ಸೀತಾರಾಂ ಯೆಚೂರಿ? ಸಿಪಿಐ ಪಕ್ಷದ ನಾಯಕನಾಗಿ ಮೆರಿದಿದ್ದು ಹೇಗೆ? ಅದೂ ಅಲ್ಲದೆ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ, ಕಾಮ್ರೆಡ್ ಆಗಿದ್ದು ಹೇಗೆ? ಇಲ್ಲಿದೆ ನೋಡಿ ಹಲವು ಇಂಟ್ರೆಸ್ಟಿಂಗ್ ಮಾಹಿತಿ.

ಯಾರು ಈ ಸೀತಾರಾಮ್ ಯೆಚೂರಿ?
ಆಗಸ್ಟ್ 12, 1952 ರಂದು ಚೆನ್ನೈನಲ್ಲಿ ಜನಿಸಿದ ಸೀತಾರಾಂ ಯೆಚೂರಿ ಅವರು ಭಾರತೀಯ ರಾಜಕೀಯ ಕ್ಷೇತ್ರದಲ್ಲಿ ಪ್ರಮುಖ ಹೆಸರ. ಸಮ್ಮಿಶ್ರ ರಾಜಕೀಯಕ್ಕೆ ಅವರ ಕಾರ್ಯತಂತ್ರದ ವಿಧಾನ ಮತ್ತು ಮಾರ್ಕ್ಸ್‌ವಾದದ ತತ್ವಗಳನ್ನು ಅನುಸರಿಸುವ ಮೂಲಕ ಹೆಸರು ಮಾಡಿದ್ದರು.

ಶುದ್ಧ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಯೆಚೂರಿ ಆಂಧ್ರಪ್ರದೇಶದಲ್ಲಿ ತಮ್ಮ ಬಾಲ್ಯ ಕಳೆದರು. ಹೈದರಾಬಾದ್‌ನಲ್ಲಿ ತಮ್ಮ ಶಿಕ್ಷಣ ಪೂರೈಸಿದ ಅವರು ಅವರು ವಿದ್ಯಾರ್ಥಿ ಜೀವನದಲ್ಲೇ ಪ್ರತಿಭಟನೆ, ವಿದ್ಯಾರ್ಥಿ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡವರು. ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಹಾಗೂ ಕಾಲೇಜಿನಲ್ಲಿ ಹೇರಲಾಗಿದ್ದ ವಿವಿಧ ನಿಯಮಗಳ ವಿರೋಧಿಸಿ ಆಡಳಿತ ಮಂಡಳಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದವರು.

1970ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅವರು ಸರ್ಕಾರದ ವಿರುದ್ಧವೇ ಹೋರಾಟ ನಡೆಸಿ ಆಗಲೇ ಫೈರ್‌ಬ್ರಾಂಡ್ ಎಂದು ಕರೆಸಿಕೊಂಡರು. ಈ ವೇಳೆ ಅವರು ಕಾಲೇಜು ಶಿಕ್ಷಣ ಪಡೆಯುತ್ತಿದ್ದರು, ಆದರೆ ಅವರಲ್ಲಿ ಕಮ್ಯೂನಿಸ್ಟ್ ಸಿದ್ಧಾಂತ ಬೇರೂರಲು ಆರಂಭಿಸಿದ ದಿನಗಳವು, ದೇಶದಲ್ಲಿ ಕಾರ್ಮಿಕರ ಹಕ್ಕು ಸೇರಿ ಹಲವು ರೀತಿಯ ಹೋರಾಟ ಆರಂಭಗೊಂಡಿತ್ತು, ಇದರಿಂದ ಪ್ರಭಾವಿತರಾದ ಅವರು ಕಮ್ಯೂನಿಸ್ಟ್ ವಾದದಲ್ಲಿ ಬಲವಾದ ನಂಬಿಕೆ ಇಟ್ಟರು.

ಯೆಚೂರಿ ಅವರ ರಾಜಕೀಯ ಜೀವನ:
1974ರಲ್ಲಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಸೇರಿದಾಗ ಯೆಚೂರಿಯವರ ರಾಜಕೀಯ ಪಯಣ ಆರಂಭವಾಯಿತು. ಆ ಬಳಿಕ ರಾಜಕೀಯದ ಮೆಟ್ಟಿಲುಗಳನ್ನು ಅತ್ಯಂತ ಶೀಘ್ರವಾಗಿ ಏರಿದ್ದರು. ಮೂರು ಬಾರಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿದ್ದ ಸೀತಾರಾಮ್‌ ಯೆಚೂರಿ ಬಳಿಕ, ಎಸ್‌ಎಫ್‌ಐನ ಅಖಿಲ ಭಾರತ ಅಧ್ಯಕ್ಷರಾಗಿದ್ದರು. 1984 ರಲ್ಲಿ, ಅವರು ಸಿಪಿಐ(ಎಂ) ಕೇಂದ್ರ ಸಮಿತಿಗೆ ಆಯ್ಕೆಯಾದ ಅವರು ಬಳಿಕ ಶಾಶ್ವತ ಆಹ್ವಾನಿತರೆನಿಸಿಕೊಂಡಿದ್ದರು. 1992 ರ ಹೊತ್ತಿಗೆ, ಅವರು ಪಾಲಿಟ್‌ಬ್ಯೂರೊದ ಸದಸ್ಯರಾಗಿದ್ದರು, ಅವರು ಮೂರು ದಶಕಗಳ ಕಾಲ ಈ ಸ್ಥಾನವನ್ನು ಹೊಂದಿದ್ದರು.

ಯೆಚೂರಿ ಅವರು 2005 ರಿಂದ 2017 ರವರೆಗೆ ಪಶ್ಚಿಮ ಬಂಗಾಳದಿಂದ ಸಂಸತ್ತಿನ ಸದಸ್ಯರಾಗಿ, ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅವರು ಪ್ರಕಾಶ್ ಕಾರಟ್ ಅವರ ನಂತರ 2015 ರಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಯಾದರು ಮತ್ತು 2018 ಮತ್ತು 2022 ರಲ್ಲಿ ಎರಡು ಬಾರಿ ಸ್ಥಾನಕ್ಕೆ ಮರು ಆಯ್ಕೆಯಾದರು.

1990ರಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಏರಲು ಕಾಂಗ್ರೆಸ್ ಅನ್ನು ವಿರೋಧಿಸುವ ಬಣದಲ್ಲಿ ಯಚೂರಿ ಕಾಣಿಸಿಕೊಂಡರು ಅಲ್ಲದೆ ಈ ಸರ್ಕಾರಕ್ಕೆ ಮುಂದಾಳತ್ವ ವಹಿಸಿದರು. ಸಮ್ಮಿಶ್ರ ಸರ್ಕಾರದ ಪ್ರಮುಖ ಮುಂದಾಳತ್ವ ವಹಿಸಿದ್ದವರಲ್ಲಿ ಇವರೂ ಒಬ್ಬರಾದರು. ಇದಾದ ಬಳಿಕ ಅವರು ರಾಜಕೀಯದಲ್ಲಿದ್ದರೂ ಅವರ ಪಕ್ಷ ಮಾತ್ರ ಸ್ಥಾನಗಳ ಗಿಟ್ಟಿಸುವಲ್ಲಿ ವಿಫಲವಾಗುತ್ತಾ ಸಾಗಿತ್ತು. ಈಗ ಕೇವಲ 4 ಸ್ಥಾನ ಪಡೆದು 1.76ರಷ್ಟು ಮತಗಳನ್ನಷ್ಟೇ ಹೊಂದಿದೆ.

ಏಮ್ಸ್ ಆಸ್ಪತ್ರೆಗೆ ದೇಹದಾನ:
ಸೀತಾರಾಮ್ ಯೆಚೂರಿ ಅವರು ಹಲವು ರೀತಿಯಲ್ಲಿ ಬಣ್ಣಿಸಬಹುದಾದ ಬಹುಮುಖಿ ವ್ಯಕ್ತಿತ್ವದ ಮೇಧಾವಿ. ಭಾರತದ ಕಮ್ಯುನಿಸ್ಟ್ ರಾಜಕಾರಣದ ಮುಂಚೂಣಿ ನಾಯಕ. ಅವರು ಪ್ರಖರ ವಾಗ್ನಿ, ಮಾರ್ಕ್ಸ್‌ವಾದಿ ಚಿಂತಕ, ಬರಹಗಾರ, ಸ್ನೇಹಮಯಿ ಎಲ್ಲವೂ ಆಗಿದ್ದರು. ಎಲ್ಲ ಪಕ್ಷಗಳ ನಾಯಕರೂ ಪ್ರೀತಿಸುತ್ತಿದ್ದ ಸರಳ ವ್ಯಕ್ತಿತ್ವ ಅವರದಾಗಿತ್ತು. ಅತ್ಯಂತ ಶ್ರೀಮಂತ ಮತ್ತು ಪ್ರಬಲವರ್ಗದ ಕುಟುಂಬದಲ್ಲಿ ಹುಟ್ಟಿದ್ದರೂ, ಬಡವ-ಶ್ರೀಮಂತ, ಪ್ರಬಲ-ದುರ್ಬಲ ವರ್ಗ ಎಂಬ ಅಸಮಾನತೆ ಹೋಗಲಾಡಿಸಲು ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು. ಆದರ್ಶ ರೀತಿಯಲ್ಲಿ ಬದುಕಿದ ಅವರು, ದೇಹವನ್ನು ಆಸ್ಪತ್ರೆಗೆ ದಾನ ಮಾಡುವ ಮೂಲಕ ಬದುಕು ಮುಗಿದ ನಂತರವೂ ಆದರ್ಶ ಮೆರೆದಿದ್ದಾರೆ.

Leave A Reply

Your email address will not be published.