Haryana: ಕದ್ದು ದನ ಸಾಗಿಸುತ್ತಿದ್ದಾನೆಂದು PUC ವಿದ್ಯಾರ್ಥಿಗೆ ಗುಂಡು ಹಾರಿಸಿ ಹತ್ಯೆಗೈದ ಗೋರಕ್ಷಕರು – ಆರೋಪಿಗಳು ಅಂದರ್

Haryana: ದನ ಕಳ್ಳಸಾಗಣೆದಾರನೆಂದು ತಪ್ಪಾಗಿ ತಿಳಿದು ಗೋರಕ್ಷಕರು ಕಾರಿನಲ್ಲಿ ಹಿಂಬಾಲಿಸಿ ಪಿಯುಸಿ ವಿದ್ಯಾರ್ಥಿಯೊಬ್ಬನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಬೆಳಕಿಗೆ ಬಂದಿದೆ.

ಹೌದು, ಹರ್ಯಾಣದ (Haryana) ಫರಿದಾಬಾದ್‍ನಲ್ಲಿ ಈ ಮನ ಮಿಡಿಯುವ ಘಟನೆ ನಡೆದಿದ್ದು,
ಆರ್ಯನ್ ಮಿಶ್ರಾ ದುಷ್ಕರ್ಮಿಗಳ ದಾಳಿಗೆ ಬಲಿಯಾದ ದುರ್ದೈವಿ ಎಂದು ಗುರುತಿಸಲಾಗಿದೆ. ಆಗಸ್ಟ್ 23 ರಂದು ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಅಷ್ಟಕ್ಕೂ ಆಗಿದ್ದೇನು?
ರೆನಾಲ್ಟ್ ಡಸ್ಟರ್ ಮತ್ತು ಟೊಯೊಟಾ ಫಾರ್ಚುನರ್ ಕಾರುಗಳಲ್ಲಿ ಕೆಲವರು ಜಾನುವಾರುಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಗೋರಕ್ಷಕರಿಗೆ ಮಾಹಿತಿ ಸಿಕ್ಕಿದೆ. ಈ ವೇಳೆ ತಕ್ಷಣ ಕಾರ್ಯಪ್ರವೃತ್ತರಾದ ಅವರು ಅದೇ ಮಾರ್ಗದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಆರ್ಯನ್ ಮಿಶ್ರಾ, ಆತನ ಸ್ನೇಹಿತರಾದ ಶಾಂಕಿ ಮತ್ತು ಹರ್ಷಿತ್ ಅವರನ್ನು ಜಾನುವಾರು ಕಳ್ಳಸಾಗಣೆದಾರರು ಎಂದು ತಪ್ಪಾಗಿ ಭಾವಿಸಿದ್ದಾರೆ. ಬಳಿಕ ಆರೋಪಿಗಳು ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ (Delhi-Agra National Highway) ಸುಮಾರು 30 ಕಿಲೋಮೀಟರ್ ಅವರ ಕಾರನ್ನು ಹಿಂಬಾಲಿಸಿದ್ದಾರೆ.

ಗೋರಕ್ಷಕರು ಕಾರನ್ನು ಹಿಂಬಾಲಿಸಿ ಚಾಲಕ ಹರ್ಷಿತ್ ನನ್ನು ನಿಲ್ಲಿಸುವಂತೆ ಹೇಳಿದ್ದಾರೆ. ಆದರೆ ಕಾರಿನಲ್ಲಿದ್ದ ಶಾಂಕಿ ಎಂಬಾತನಿಗೆ ಕೆಲವರ ಜೊತೆ ಗಲಾಟೆಗಳಾಗಿದ್ದು, ಅವರು ಗೂಂಡಾಗಳನ್ನು ಕಳಿಸಿ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ ಎಂದು ಭಾವಿಸಿದ್ದಾರೆ. ಕಾರು ನಿಲ್ಲಿಸದೇ ಇದ್ದಾಗ ಆರೋಪಿಗಳು ಕಾರಿನತ್ತ ಗುಂಡು ಹಾರಿಸಿದ್ದಾರೆ ಈ ವೇಳೆ ಆರ್ಯನ್ ಕುತ್ತಿಗೆಗೆ ತಗುಲಿತು. ಬಳಿಕ ಕಾರು ನಿಲ್ಲಿಸಿದಾಗ ಕಾರಿನಲ್ಲಿ ಮಹಿಳೆಯರು ಇದ್ದಿದ್ದನ್ನು ನೋಡಿ ಆರೋಪಿಗಳು ತಪ್ಪಾದ ಕಾರು ಎಂದು ಅರಿವಾಗಿ ಪರಾರಿಯಾಗಿದ್ದಾರೆ. ಆರ್ಯನ್‍ನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾದರೂ, ಅಲ್ಲಿ ಆತ ಒಂದು ದಿನದ ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಸದ್ಯ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು (Haryana Police) ಬಂಧಿಸಿದ್ದಾರೆ. ಬಂಧಿತರನ್ನು ಅನಿಲ್ ಕೌಶಿಕ್, ವರುಣ್, ಕೃಷ್ಣ, ಆದೇಶ್ ಮತ್ತು ಸೌರಭ್ ಎಂದು ಗುರುತಿಸಲಾಗಿದೆ

Leave A Reply

Your email address will not be published.