Parappan Agrahara: ಪರಪ್ಪನ ಅಗ್ರಹಾರ ಸೆರೆಮನೆಯೇ ಅಥವಾ ಅರಮನೆಯೇ?: ಸರ್ಕಾರ ಸ್ಪಷ್ಟಪಡಿಸಬೇಕು

Parappana Agrahara: ಪರಪ್ಪನ ಅಗ್ರಹಾರ ಸೆರೆಮನೆಯೇ(Jail) ಅಥವಾ ಅರಮನೆಯೇ(Palace) ಎಂಬುದನ್ನು ಗೃಹ ಇಲಾಖೆ(Home Department) ಮತ್ತು ಗೃಹ ಸಚಿವರು ನಾಡಿನ ಜನತೆಗೆ ಸ್ಪಷ್ಟಪಡಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಚಿತ್ರದುರ್ಗದ ರೇಣುಕಸ್ವಾಮಿ ಅವರ ಕೊಲೆ(Renukaswami murder case) ಆರೋಪಿ ದರ್ಶನ್(Darshan) ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ, ರಾಜಾತಿಥ್ಯ ವ್ಯವಸ್ಥೆಯನ್ನು ಅಲ್ಲಿನ ಜೈಲಿನ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ(Police Department) ಕಲ್ಪಿಸಿಕೊಟ್ಟಿರುವುದು ತೀವ್ರ ಖಂಡನೀಯ ಎಂದಿರುವ ಅವರು, ಇದು ರಾಜ್ಯ ಕಾಂಗ್ರೆಸ್ ಸರ್ಕಾರದ(Congress Govt) ದುರಾಡಳಿತದ ಪರಮಾವಧಿ ಎಂದು ಟೀಕಿಸಿದ್ದಾರೆ.

ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಈ ಪ್ರಕರಣದ ವೈಫಲ್ಯವೇ ಎತ್ತಿ ತೋರಿಸುತ್ತದೆ. ಈ ಪ್ರಕರಣದಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ತಿಳಿಸಿದ್ದಾರೆ. ಈ ಐಷಾರಾಮಿ ವ್ಯವಸ್ಥೆಯನ್ನು ನೋಡಿದರೆ ಅಲ್ಲಿನ ಸಂಬಂಧಪಟ್ಟ ಜೈಲಿನ ಅಧಿಕಾರಿಗಳು ಮತ್ತು ಅಲ್ಲಿನ ಸಿಬ್ಬಂದಿಗಳು ಆರೋಪಿಗಳ ಜೊತೆ ಶಾಮೀಲಾಗಿರುವುದು ಗೋಚರಿಸುತ್ತದೆ. ದರ್ಶನ್ ಸೇರಿದಂತೆ ಇತರ ಆರೋಪಿಗಳಿಗೆ ಕುಳಿತುಕೊಳ್ಳಲು ಕುರ್ಚಿ, ಟೇಬಲ್, ಕಾಫಿ-ಟೀ ಜೊತೆಗೆ ಸಿಗರೇಟ್ ಸೇರಿದಂತೆ ಎಲ್ಲ ಐಷಾರಾಮಿ ವ್ಯವಸ್ಥೆ ಕಲ್ಪಿಸಿಕೊಟ್ಟಿರುವುದು ಸರಿಯಲ್ಲ; ಇದು ಖಂಡನೀಯ ಎಂದಿದ್ದಾರೆ.

ಆರೋಪಿ ದರ್ಶನ್ ಗೆ ಮನೆ ಊಟ ಬೇಡಿಕೆಯಿಟ್ಟಿರುವುದು ಮೇಲ್ನೋಟಕ್ಕೆ ಕಣ್ಣೊರೆಸುವ ರೀತಿ ಕಾಣುತ್ತದೆ. ಆದರೆ ಆರೋಪಿಗಳಿಗೆ ಜೈಲಿನಲ್ಲೇ ಎಲ್ಲಾ ರೀತಿಯ ಸಕಲ ಸೌಲಭ್ಯ ಒದಗಿಸುತ್ತಿರುವುದು ದುರಂತ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆರೋಪಿ ದರ್ಶನ್ ಗೆ ಕಾಫಿ-ಟೀ, ಸಿಗರೇಟ್ ಜೊತೆಗೆ ಇನ್ನು ಏನೇನು ಯಾವ ಯಾವ ಪದಾರ್ಥಗಳು, ವಸ್ತುಗಳು ಜೈಲಿನ ಒಳಗಡೆ ಸರಬರಾಜು ಆಗುತ್ತಿದೆ ಎನ್ನುವುದು ಊಹೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿರುವ ಅವರು, ಈ ಐಷಾರಾಮಿ ವ್ಯವಸ್ಥೆ ನೋಡಿದರೆ ಮೃತ ರೇಣುಕಸ್ವಾಮಿ ಅವರ ತಂದೆ ತಾಯಿ ಹಾಗೂ ಇಡೀ ನಾಡಿನ ಜನತೆಗೆ ಇದು ಯಾವ ರೀತಿ ಸಂದೇಶ ಹೋಗುತ್ತಿದೆ ಎನ್ನುವುದು ಸರ್ಕಾರ ಗಂಭೀರವಾಗಿ ಯೋಚಿಸಬೇಕಾಗಿದೆ ಎಂದು ಗಮನ ಸೆಳೆದಿದ್ದಾರೆ.

ಆದ್ದರಿಂದ, ಈ ಬಗ್ಗೆ ಸರ್ಕಾರ ತಕ್ಷಣವೇ ಪರಿಶೀಲಿಸಿ ತಪ್ಪಿತಸ್ಥ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಹಾಗೂ ಮುಂಬರುವ ದಿನಗಳಲ್ಲಿ ಈ ರೀತಿಯ ಘಟನೆಗಳು ಜೈಲಿನಲ್ಲಿ ನಡೆಯಬಾರದು ಎಂದು ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.

Leave A Reply

Your email address will not be published.