Malayalam Industry: ‘ಮಲಯಾಳಂ ಚಿತ್ರರಂಗ’ದಲ್ಲಿ ಅಲ್ಲೋಲ ಕಲ್ಲೋಲ – ಬಯಲಾಯ್ತು ನ್ಯಾ. ಹೇಮಾ ಸಮಿತಿ ವರದಿ !!ಏನಿದೆ ಆ ವರದಿಯಲ್ಲಿ, ಏನಾಗಿತ್ತು 2017ರಲ್ಲಿ?

Malayalam Industry: ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ(K Hema) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ(Sharada) ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಸರ್ಕಾರ ರಚನೆ ಮಾಡಿತ್ತು. ಈ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು, ಈಗ ಆರ್ಟಿಐ ಮೂಲಕ ವರದಿಯು ಬಹಿರಂಗಗೊಂಡಿದೆ. ವರದಿಯಲ್ಲಿ ಉಲ್ಲೇಖವಾಗಿರೋ ಅಂಶಗಳು ಚಿತ್ರೋದ್ಯಮದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿವೆ. ಹಾಗಿದ್ದರೆ ಈ ಸಮಿತಿಯ ವರದಿಯಲ್ಲಿ ಏನಿದೆ? ಇಲ್ಲಿದೆ ಡೀಟೇಲ್ಸ್

ಈ ಸಮಿತಿ 2019ರ ಡಿಸೆಂಬರ್​ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ. ಮಲಯಾಳಂ ಸಿನಿಮಾ ರಂಗ (Film Industry) ಕೆಲವು ಪುರುಷ ಹಿಡಿತದಲ್ಲಿದ್ದು, ಅವರು ಹೇಳಿದಂತೆ ಕೇಳದೇ ಇದ್ದರೆ, ಯಾವ ನಟಿಯರಿಗೂ ಅಲ್ಲಿ ಅವಕಾಶ ಸಿಗುವುದಿಲ್ಲ. ಮಹಿಳೆಯರು ಚಿತ್ರೋದ್ಯಮದಲ್ಲಿ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಬೇಕು, ಇಲ್ಲ ಚಿತ್ರೋದ್ಯಮವನ್ನು ತೊರೆಯಬೇಕು ಅನ್ನು ಅಂಶಗಳನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಚಿತ್ರೋದ್ಯಮದಲ್ಲಿ ಮಾಫಿಯಾ ಎಂಟ್ರಿ ಕೊಟ್ಟಿದೆ ಅನ್ನೋ ಅಂಶವೂ ಸೇರ್ಪಡೆಯಾಗಿದೆ. ವರದಿಯ ಅಧ್ಯಯನದ ಸಂದರ್ಭದಲ್ಲಿ ಮಲಯಾಳಂ ಚಿತ್ರೋದ್ಯಮವು ಕೆಲ ನಿರ್ಮಾಪಕರ, ನಿರ್ದೇಶಕರ ಹಾಗೂ ನಟರ ಹಿಡಿತದಲ್ಲಿರುವುದು ಕಂಡು ಬಂದಿದೆ. ಇದಿಷ್ಟೇ ಜನರು ಮಲಯಾಳಂ ಚಿತ್ರೋದ್ಯಮವನ್ನ ನಿಯಂತ್ರಿಸುತ್ತಿದ್ದಾರೆ. ಈ ಉದ್ಯಮವು ಅಪರಾಧಿಗಳ ಮತ್ತು ಸ್ತ್ರೀ ದ್ವೇಷಿಗಳಿಂದ ಹೆಚ್ಚು ಪ್ರಭಾವಿತವಾಗಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ನ್ಯಾಯಮೂರ್ತಿ ಹೇಮಾ(Justice Hema)ಸಮಿತಿ ವರದಿಯು ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ತೆರೆದಿಟ್ಟಿದೆ. ಲೈಂಗಿಕ ಕಿರುಕುಳ, ಮಹಿಳೆಯರ ಶೌಚಾಲಯಗಳು ಮತ್ತು ಬಟ್ಟೆ ಬದಲಾಯಿಸುವ ಕೊಠಡಿಗಳಂತಹ ಮೂಲಭೂತ ಸೌಲಭ್ಯಗಳ ಕೊರತೆ, ಲಿಂಗ ಪಕ್ಷಪಾತ ಮತ್ತು ತಾರತಮ್ಯ, ಸಂಭಾವನೆಯಲ್ಲಿ ಅಸಮಾನತೆ ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಕಾನೂನುಬದ್ಧವಾಗಿ ರಚಿಸಲಾದ ಅಧಿಕಾರದ ನಿಷ್ಕ್ರಿಯೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ಈ ವರದಿ ಬೆಳಕು ಚೆಲ್ಲಿದೆ.

ಈ ಸಮಿತಿಯು ತನಿಖೆ ನಡೆಸಿದ ವಿವಿಧ ಘಟನೆಗಳಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ನಟನೊಂದಿಗೆ ಮತ್ತೆ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾದಾಗ ಆ ನಟಿ ಅನುಭವಿಸಿದ ಸಂಕಷ್ಟವನ್ನು ವಿವರಿಸಲಾಗಿದೆ. ರಕ್ಷಣೆಯ ದೃಷ್ಟಿಯಿಂದ ನಟಿಯ ಹೆಸರನ್ನು ಬಹಿರಂಗಪಡಿಸಿಲ್ಲ. ತನಗೆ ಈ ಹಿಂದೆ ಕಿರುಕುಳ ನೀಡಿದ್ದ ನಟನ ಜೊತೆ ಮತ್ತೆ ನಟಿಸಬೇಕಾಗಿತ್ತು. ಆ ಸಿನಿಮಾದಲ್ಲಿ ದಂಪತಿ ಪಾತ್ರ ಮಾಡುತ್ತಿದ್ದೆವು. ಒಂದು ದೃಶ್ಯದಲ್ಲಿ ನನ್ನನ್ನು ತಬ್ಬಿಕೊಳ್ಳಬೇಕಾಗಿತ್ತು. ಈಗಾಗಲೇ ಮಾನಸಿಕ ಮತ್ತು ದೈಹಿಕವಾಗಿ ನೊಂದಿದ್ದ ಕಾರಣ, ಆ ದೃಶ್ಯದಲ್ಲಿ ನಟಿಸಲು ಆಗುತ್ತಿರಲಿಲ್ಲ. ಆದರೆ, ಆ ದೃಶ್ಯವನ್ನು ಲಾಭವಾಗಿ ತೆಗೆದುಕೊಂಡ ನಟ 17 ಟೇಕ್ ತೆಗೆದುಕೊಂಡರು. ಈ ವಿಚಾರದಲ್ಲಿ ನಟನನ್ನು ನಿಂದಿಸದ ನಿರ್ದೇಶಕರು, ನನ್ನನ್ನೇ ಗದರಿದರು ಎಂದು ಹೇಮಾ ಸಮಿತಿಯ ಮುಂದೆ ನಟಿ ಹೇಳಿಕೊಂಡಿದ್ದಾರೆ.

ಮಲಯಾಳಂ ಸಿನಿಮಾ(Malayalam Industry) ರಂಗದಲ್ಲಿ ನಟಿಯರ ಮನೆ ಬಾಗಿಲುಗಳು ಅಥವಾ ತಂಗಿದ ಸ್ಥಳಗಳ ಬಾಗಿಲುಗಳು ಬಡಿದುಕೊಳ್ಳುತ್ತಲೇ ಇರುತ್ತವೆ. ನಟಿಯರು ಸ್ಪಂದಿಸದೇ ಹೋದರೆ, ಬಾಗಿಲು ಬಡಿತ ಇನ್ನೂ ಜೋರಾಗುತ್ತವೆ ಎಂದು ಮತ್ತೋರ್ವ ನಟಿಯೊಬ್ಬರು ಸಮಿತಿಯ ಮುಂದೆ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ. ಜೀವಭಯ ಕಾರಣದಿಂದಾಗಿ ಪೊಲೀಸರನ್ನು ಸಂಪರ್ಕಿಸಲು ಸಾಕಷ್ಟು ಜನರು ಹಿಂದೇಟು ಹಾಕಿದ್ದಾರೆ ಅಂತಿದೆ ವರದಿ. ಧೈರ್ಯದಿಂದ ದೂರು ನೀಡಿದರೆ, ಆ ನಟಿಯ ಬದುಕೇ ಮುಗಿದು ಹೋಗುತ್ತದೆ ಅನ್ನೋ ಅಂಶ ಕೂಡ ಉಲ್ಲೇಖವಾಗಿದೆ. ನಟಿಯ ವೃತ್ತಿ ಜೀವನ ಮುಗಿಸುವುದರ ಜೊತೆಗೆ ಆ ಕುಟುಂಬಗಳನ್ನು ಗುರಿಯಾಗಿಸಿ ನಿತ್ಯ ಬೆದರಿಕೆ ಹಾಕಲಾಗುತ್ತದೆ ಎನ್ನುವುದನ್ನೂ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಕುಟುಂಬಕ್ಕೆ ಬೆದರಿಕೆ ಜೊತೆಗೆ ಮತ್ತೆ ಅವಕಾಶ ಸಿಗುವುದಿಲ್ಲ ಅನ್ನೋ ಕಾರಣಕ್ಕೆ ಅನೇಕ ನಟಿಯರು ಮೌನಕ್ಕೆ ಜಾರಿದ್ದಾರಂತೆ.

ಅಲ್ಲದೆ ಮಹಿಳೆಯರು ಸಿನಿಮಾರಂಗಕ್ಕೆ ಬರುವುದು ಹಣ ಮಾಡಲು ಮತ್ತು ಯಾವುದಕ್ಕೂ ಶರಣಾಗುತ್ತಾರೆ ಎಂಬ ಸಾಮಾನ್ಯ ಊಹೆ ಇದೆ. ಹೆಣ್ಣು ಸಿನಿಮಾಗೆ ಬರಲು ಕಲೆ ಮತ್ತು ನಟನೆಯ ಮೇಲೆ ಅವರಿಗಿರುವ ಅಭಿರುಚಿಯೇ ಕಾರಣ ಎಂದು ಸಿನಿಮಾದಲ್ಲಿರುವ ಪುರುಷರು ಊಹಿಸುವುದಿಲ್ಲ. ಖ್ಯಾತಿ ಮತ್ತು ಹಣಕ್ಕಾಗಿ ಬರುತ್ತಾರೆ ಮತ್ತು ಚಲನಚಿತ್ರದಲ್ಲಿ ಅವಕಾಶ ಪಡೆಯಲು ಯಾವುದೇ ವ್ಯಕ್ತಿಯೊಂದಿಗೆ ಮಲಗುತ್ತಾರೆ ಎಂಬ ತಪ್ಪು ಅನಿಸಿಕೆ ಇದೆ ಎಂದು ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Leave A Reply

Your email address will not be published.