R Ashok: ಯತ್ನಾಳ್ ವಿರುದ್ಧ ನಾವು ಯಾವುದೇ ಕ್ರಮ ಕೈಗೊಳ್ಳಲು ಆಗದು, ಯಾಕೆಂದ್ರೆ…?! ಅಚ್ಚರಿ ಹೇಳಿಕೆ ನೀಡಿದ ಆರ್ ಅಶೋಕ್

R Ashok: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basavanagouda Patil Yatnal) ಅವರ ಮೇಲೆ ನಾವು ಕ್ರಮ ಕೈಗೊಳ್ಳಲು ಆಗುವುದಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್(R Ashok) ಹೇಳಿದ್ದು, ಯಾಕೆಂದು ಕಾರಣವನ್ನೂ ನೀಡಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ವಿಭಿನ್ನ ಮಾತು, ನಡೆ-ನುಡಿ, ಹಿಂದುತ್ವದ ಚಿಂತನೆಗಳ ನೆಲೆಯಲ್ಲಿ ಗುರುತಿಸಿಕೊಂಡ ವಿಜಯಪುರ(Vijayapura) ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಮೂರು ದಶಕದ ರಾಜ್ಯ ರಾಜಕಾರಣದಲ್ಲಿ ಜನಜನಿತ. ಸಮಯ ಬಂದಾಗಲೆಲ್ಲ ಯತ್ನಾಳ್ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ(Yadiyurappa) ಕುಟುಂಬದ ವಿರುದ್ಧ, ಅಪ್ಪ-ಮಕ್ಕಳ ವಿರುದ್ಧ, ಬಿಜೆಪಿಯ ಕೆಲ ನಾಯಕರ ಬಹಿರಂಗವಾಗಿಯೇ ಟೀಕಿಸುತ್ತಾರೆ. ಅವರ ಕೆಲವು ಹೇಳಿಕೆಗಳು ಪಕ್ಷಕ್ಕೇ ಮುಜುಗರ ತರುತ್ತವೆ. ಇಷ್ಟಾದರೂ ಪಾರ್ಟಿ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳದಿರುವುದು ಎಲ್ಲರಿಗೂ ಅಚ್ಚರಿಯ ಸಂಗತಿ. ಇದೀಗ ಈ ಬಗ್ಗೆ ಆರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ.
ಹೌದು, ಮೈಸೂರಿನಲ್ಲಿಂದು ಮಾತನಾಡಿರುವ ಅಶೋಕ್, ಬಸನಗೌಡ ಯತ್ನಾಳ್ ಶಾಸಕರು, ಕೇಂದ್ರದಲ್ಲಿ ಮಂತ್ರಿಯಾಗಿದ್ದವರು. ಹೀಗಾಗಿ ಯತ್ನಾಳ್ ವಿರುದ್ಧ ನಾವು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಈಗಾಗಲೇ ಕೇಂದ್ರದವರು ಎರಡು ಬಾರಿ ಕರೆಸಿ ಮಾತನಾಡಿದ್ದಾರೆ. ಮುಂದಿನ ವಾರ ರಾಜ್ಯ ಬಿಜೆಪಿ ಉಸ್ತುವಾರಿಗಳು ಆಗಮಿಸುತ್ತಿದ್ದಾರೆ. ಆಗ ಶಾಸಕ ಯತ್ನಾಳ್ರನ್ನು ಕರೆಸಿ ಮಾತನಾಡುತ್ತಾರೆ. ನಂತರ ನಾವು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಕರ್ನಾಟಕ ರಾಜ್ಯ ಬಿಜೆಪಿಯಿಂದ, ಯತ್ನಾಳ್ ವಿರುದ್ಧ ಯಾವುದೇ ಕ್ರಮಕೈಗೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಆರ್ ಅಶೋಕ್ ಒಪ್ಪಿಕೊಂಡಿದ್ದಾರೆ.
ಅಲ್ಲದೆ ಮಾಜಿ ಶಾಸಕ ಪ್ರೀತಂ ಗೌಡ ಪೋಸ್ಟರ್ ಸುಟ್ಟ ಬಗ್ಗೆ ಪ್ರತಿಕ್ರಿಯಿಸಿದ ಅರ್.ಅಶೋಕ್, “ಪ್ರೀತಂ ಗೌಡ ನಮ್ಮ ಪಕ್ಷ ಕಾರ್ಯಕರ್ತ, ನಾವು ಒಟ್ಟಾಗಿ ಹೋಗಬೇಕು ಎಂದಾಗ ಸಹಜವಾಗಿ ಇಂತ ಘಟನೆಗಳು ನಡೆಯುತ್ತವೆ. ನಮ್ಮ ಗುರಿ ಮುಂದಿನ ಚುನಾವಣೆಯನ್ಮು ಒಟ್ಟಾಗಿ ಎದುರಿಸಬೇಕು ಎನ್ನುವುದು. ಅಲ್ಲಿವರೆಗೂ ಮುಂದೆಯೂ ಇಂತಹ ಘಟನೆಗಳು ನಡೆಯಬಹುದು ಅವೆಲ್ಲವನ್ನು ಸರಿಪಡಿಸಿಕೊಂಡು ಹೋಗುತ್ತೇವೆ” ಎಂದಿದ್ದಾರೆ.