Telangana: ಬಿಸಿಯೂಟಕ್ಕೆ ಖಾರದಪುಡಿ ಬೆರೆಸಿ ಅದನ್ನೇ ಸಾಂಬಾರ್ ಅಂದ ಶಾಲೆ: ಆಹಾರ ವಿತರಣೆ ವಿರುದ್ಧ ತೀವ್ರಗೊಂಡ ಆಕ್ರೋಶ !
Telangana: ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆ ಬಂದ ಮೇಲೆ ಅದೆಷ್ಟೋ ಮಕ್ಕಳ ಹೊಟ್ಟೆ ತುಂಬುತ್ತಿದೆ. ಒಂದಷ್ಟು ಮಕ್ಕಳು ಊಟಕ್ಕಾಗಿಯಾದರೂ ಶಾಲೆಗೆ ಬರುತ್ತಾರೆ. ಆದರೆ ಈ ಯೋಜನೆಯ ಪ್ರಯೋಜನಕ್ಕಿಂತ ದುರುಪಯೋಗ ಆಗುತ್ತಿರುವುದೇ ಹೆಚ್ಚು. ಮಕ್ಕಳಿಗೆ ಸರಿಯಾದ, ಗುಣಮಟ್ಟದ ಊಟ ನೀಡದೆ ಇರುವ ಅನೇಕ ಉದಾಹರಣೆಗಳಿವೆ. ಇದೀಗ ತೆಲಂಗಾಣದ (Telangana) ಕೊತ್ತಪಲ್ಲಿ (Kothapally) ಗ್ರಾಮದ ಶಾಲೆಯ ವಿದ್ಯಾರ್ಥಿಗಳಿಗೆ ಬಿಸಿ ಊಟದಲ್ಲಿ (Mid-day Meal) ಸಾಂಬಾರು ಮಾಡದೆ, ಕೇವಲ ಖಾರದ ಪುಡಿಯನ್ನು (Chilli powder) ಬೆರೆಸಿದ ಅನ್ನ ನೀಡಲಾಗಿದೆ. ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ಪ್ರತಿಪಕ್ಷ ಭಾರತ್ ರಾಷ್ಟ್ರ ಸಮಿತಿ (Bharat Rashtra Samithi) ಮುಖಂಡರು ತೆಲಂಗಾಣ ಸರ್ಕಾರ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರವನ್ನು ನೀಡುತ್ತಿದೆ ಎಂದು ದೂರಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳ ಪರಿಸ್ಥಿತಿಯನ್ನು ಅವಲೋಕಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ತೆಲಂಗಾಣ ಮಾಜಿ ಸಚಿವ ಕೆ.ಟಿ.ರಾಮರಾವ್ ಅವರು ಖಾರದಪುಡಿ ಜೊತೆ ಅನ್ನ ಕಲಸಿ ಮಕ್ಕಳಿಗೆ ತಿನ್ನಲು ನೀಡಿದ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ವಿರೋಧಿಸಿದ್ದಾರೆ. ನಮ್ಮ ಶಾಲೆಯ ಮಕ್ಕಳು ಇಂತಾ ಕ್ರೂರ ಆಹಾರಕ್ಕೆ ಅರ್ಹರೇ? ಎಂದು ‘ತೆಲಂಗಾಣ ಮುಖ್ಯಮಂತ್ರಿಗಳಿಗೆ ಕೆ.ಟಿ.ರಾಮರಾವ್ ಪ್ರಶ್ನಿಸಿದ್ದಾರೆ. ಹಿಂದೆ ಕೆಸಿಆರ್ ಸರ್ಕಾರ, ಶಾಲಾ ಮಕ್ಕಳಿಗೆ ಒಳ್ಳೆ ಉಪಹಾರ ಯೋಜನೆಯನ್ನು ಜಾರಿಗೊಳಿಸಿತ್ತು. ಆದರೆ ಅದನ್ನು ಕಾಂಗ್ರೆಸ್ ಸರ್ಕಾರ ಯಾವುದೇ ಕಾರಣ ನೀಡದೆ ರದ್ದುಗೊಳಿಸಿದೆ.
ಆಗಸ್ಟ್ 2 ರಂದು ಮಧ್ಯಾಹ್ನದ ಖಾರದಪುಡಿ ಮಿಶ್ರಿತ ಅನ್ನ ತಿಂದು ಮಕ್ಕಳು ಹೊಟ್ಟೆನೋವಿನಿಂದ ಬಳಲುತ್ತಿದ್ದಾರೆ ಎಂದು ಪೋಷಕರು ದೂರಿದ್ದರು. ಅಲ್ಲದೆ ಈ ಕಳಪೆ ಆಹಾರ ರುಚಿ ಇಲ್ಲವೆಂದು ಅನೇಕ ವಿದ್ಯಾರ್ಥಿಗಳು ಬಿಸಾಡಿದ್ದಾರೆ ಎಂದು ಶಿಕ್ಷಕರೊಬ್ಬರು ವಿಚಾರಣಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.