Online booking: ದೇವಸ್ಥಾನಗಳಲ್ಲಿ ಆನ್ಲೈನ್ ಸೇವೆ: ಗಂಟೆ ಹಿಡಿಯೋದಾ, ಇಲ್ಲ ಆಂಡ್ರಾಯ್ಡ್‌ ಮೊಬೈಲ್‌ ಹಿಡಿಯೋದಾ ? ಎಂಬ ಗೊಂದಲದಲ್ಲಿ ಅರ್ಚಕರು !

Online booking: ಇನ್ನು ಮುಂದೆ ಅರ್ಚಕರು ಗಂಟೆ ಬದಲು ಕೈಯ್ಯಲ್ಲಿ ಮೊಬೈಲು ಹಿಡಿದುಕೊಳ್ಳಬೇಕಾಗುತ್ತೆ. ಹೌದು ಅಂತಹ ವಾತಾವರಣ ಇದೀಗ ಸೃಷ್ಟಿಯಾಗಲು ಶುರುವಾಗಿದೆ. ಇತ್ತೀಚೆಗೆ ಎಲ್ಲವೂ ಆನ್‌ಲೈನ್‌ ಮಯ. ಕೇವಲ ವ್ಯಾಪಾರ ವಹಿವಾಟು ಆನ್‌ಲೈನ್‌ ಮುಖಾಂತರ ನಡೆದರೆ ಸಾಕೇ?

ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗಬೇಕು. ಅದಲ್ಲದೇ ಈಗಿನ ಜನರಿಗೆ ಸಮಯ ಅನ್ನೋದು ಬಹಳ ಕಡಿಮೆ. ಹಾಗಾಗಿ ರಾಜ್ಯ ಸರ್ಕಾರ, ಸಣ್ಣಪುಟ್ಟ ಮುಜರಾಯಿ ದೇಗುಲಗಳಲ್ಲಿಯೂ (Temples) ಆನ್‌ಲೈನ್ ಸೇವೆ ನೀಡುತ್ತಿದೆ. ಆದರೆ ಈ ಆನ್‌ಲೈನ್ ಸೇವೆಗೆ ಅರ್ಚಕರಿಂದಲೇ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ಆನ್‌ಲೈನ್‌ ಅಂದ ಮೇಲೆ ಅವಾಗಿಂದ ಅವಾಗಕ್ಕೆ ತಕ್ಷಣಕ್ಕೆ ಆಗಿ ಕೆಲ್ಸ ನಡೀಬೇಕು. ಯಾವಾಗ ಭಕ್ತರಿಗೆ ದೇವರನ್ನು ನೋಡಬೇಕು, ಸೇವೆ ಮಾಡಿಸಬೇಕು ಅನ್ನುವಾಗ ಕೈಯಲ್ಲಿರುವ ಮೊಬೈಲ್‌ ತೆಗೀತಾರೆ, ತಕ್ಷಣ ಬುಕ್‌ ಮಾಡ್ತಾರೆ. ಆದರೆ ಆನ್‌ಲೈನ್‌ನಲ್ಲಿ ಕೆಲ ಭಕ್ತರು ಸಂಜೆ ಅಥವಾ ರಾತ್ರಿ ಅಭಿಷೇಕ, ಪ್ರಸಾದ ಇತ್ಯಾದಿ ಸೇವೆಗಳನ್ನು ಬುಕ್ ಮಾಡ್ತಾರೆ. ಬುಕ್ ಮಾಡಿದ ತಕ್ಷಣ ಅರ್ಚಕರು ಭಕ್ತಾದಿಗಳ ಸೇವೆ ಮಾಡಲು ಕಷ್ಟವಾಗುತ್ತದೆ. ಈ ಮಧ್ಯೆ ದೇವಾಲಯಗಳಲ್ಲಿ ಪುರೋಹಿತರಿಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಇದರಿಂದ ಭಕ್ತಾದಿಗಳು ಬುಕ್ಕಿಂಗ್ ಮಾಡಿದ ಮಾಹಿತಿ ಸಿಗೋದಿಲ್ಲ. ಭಕ್ತರು ಬುಕ್‌ ಮಾಡಿದ ತಕ್ಷಣ ಅರ್ಚಕರು ಪೂಜೆ ಕೆಲಸ ಬಿಟ್ಟು ಪ್ರಸಾದ ತಕ್ಷಣ ತಯಾರು ಮಾಡಿ ಕೊಡುವುದು ಕಷ್ಟ ಎಂದು ಅರ್ಚಕರ ಒಕ್ಕೂಟ ಧಾರ್ಮಿಕ ದತ್ತಿ ಆಯುಕ್ತರಿಗೆ (Department of Religious Endowments) ಪತ್ರ ಬರೆದಿದೆ.

ಬಿ ದರ್ಜೆಯ ಬಹುತೇಕ ದೇವಾಲಯಗಳಲ್ಲಿ ಅಡುಗೆಯವರು ಹಾಗೂ ಉಗ್ರಾಣದ ವ್ಯವಸ್ಥೆ ಇಲ್ಲ. ಜೊತೆಗೆ ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಪೂಜಾ ಸೇವೆಗೆ ನೀಡಿದ ಹಣ ಯಾವಾಗಲೋ ಅರ್ಚಕರ ಕೈ ಸೇರುತ್ತದೆ. ಪೂಜಾ ಹಾಗೂ ಪ್ರಸಾದ ಪದಾರ್ಥಗಳನ್ನು ತರಲು ತೊಂದರೆ ಆಗುತ್ತಿದೆ. ಹೀಗಾಗಿ ಈ ಆನ್‌ಲೈನ್ ಸೇವೆಯನ್ನು ಹಾಗೂ ಈ ಮೊಬೈಲ್ ಆ್ಯಪ್‌ನ್ನು ರದ್ದು ಮಾಡಬೇಕೆಂದು ಅರ್ಚಕರ ಒಕ್ಕೂಟ ಒತ್ತಾಯಿಸಿದೆ.

ಮೊಬೈಲ್ ಆ್ಯಪ್ ಹಾಗೂ ಆನ್‌ಲೈನ್ ಸೇವೆಯನ್ನು ದೊಡ್ಡ ದೊಡ್ಡ ದೇವಸ್ಥಾನಗಳಾದ ಕುಕ್ಕೆ ಸುಬ್ರಹ್ಮಣ್ಯ, ಚಾಮುಂಡಿಬೆಟ್ಟ, ನಂಜನಗೂಡು, ಮೇಲುಕೋಟೆ ಮೊದಲಾದ ಕಡೆ ಅಡುಗೆ ಕೆಲಸದವರು, ಸಿಬ್ಬಂದಿಗಳು ಹಾಗೂ ಉಗ್ರಾಣಗಳು ಇರುವ ಕಡೆ ನಡೆಸಲು ಯಾವುದೇ ತೊಂದರೆ ಇಲ್ಲ ಎಂದು ಅರ್ಚಕರ ಒಕ್ಕೂಟ ಹೇಳಿದೆ. ಸಣ್ಣ ಸಣ್ಣ ದೇವಸ್ಥಾನದಲ್ಲಿ ಇದರ ಬಳಕೆ ಅರ್ಚಕರಿಗೆ ಸಂಕಷ್ಟ ತರಲಿದೆ ಎನ್ನೋದು ಅವರ ಅಭಿಪ್ರಾಯ.

Leave A Reply

Your email address will not be published.