Kempegowda Jayanti: ನಾಡದೊರೆ ಕೆಂಪೇಗೌಡ ಜಯಂತಿ ಆಚರಣೆ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಕುಮಾರಸ್ವಾಮಿಗೇ ಅಹ್ವಾನವಿಲ್ಲ !

Kempegowda Jayanti:  ಬೆಂಗಳೂರು: ನಾಡದೊರೆ ಕೆಂಪೇಗೌಡ ಜಯಂತಿ ಆಚರಣೆ ಸಂದರ್ಭ, ಆಹ್ವಾನ ಪತ್ರಿಕೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಹೆಸರನ್ನು ಕೈಬಿಟ್ಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಈಗ ಚರ್ಚೆಗೆ ಗ್ರಾಸವಾಗಿದೆ.

ದೆಹಲಿಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಕೆಂಪೇಗೌಡ ಇಡೀ ರಾಜ್ಯಕ್ಕೆ ಸೇರಿದವರಾಗಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ ನಮ್ಮ ಹೆಸರನ್ನು ಕೈಬಿಡಲಾಗಿದೆ ಎಂಬ ಮಾಹಿತಿ ಗೊತ್ತಾಗಿದೆ. ಆದರೆ ನಾನು ಹೆಚ್ಚಿನ ಮಹತ್ವ ನೀಡುವುದಿಲ್ಲ. ಆಹ್ವಾನ ಪತ್ರಿಕೆಗಳಲ್ಲಿ ಹೆಸರು ಹಾಕದೇ ಇರುವುದನ್ನು ನಾನು ದೊಡ್ಡ ವಿಷಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಮುಂದಕ್ಕೆ ಮಾತನಾಡಿದ ಕುಮಾರಸ್ವಾಮಿ, ‘ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೆಂಗಳೂರು ನಗರದ ಬೆಳವಣಿಗೆಗೆ ಕೊಡುಗೆ ನೀಡಿದ್ದೇನೆ. ಕೆಂಪೇಗೌಡರಿಗೆ ಗೌರವ ತರುವ ಕೆಲಸಗಳನ್ನು ಮಾಡಿದ್ದೇನೆ. ಈಗ ಅವರು ನನ್ನ ಹೆಸರನ್ನು ಸೇರಿಸಿದರೆ, ನಾನು ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಿಲ್ಲ. ನಾಳೆ, ರಾಷ್ಟ್ರಪತಿಗಳು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಆಗ ನಾನು ಇಲ್ಲಿ ದೆಹಲಿಯಲ್ಲೀ ಹಾಜರಿರಬೇಕು. ಇಲ್ಲಿಂದಲೇ ನಾಡ ಪ್ರಭೂಗೆ ಗೌರವ ಸಲ್ಲಿಸುತ್ತೇನೆ’ ಎಂದು ಕುಮಾರಸ್ವಾಮಿ ಹೇಳಿದರು.

ಈಗ ಕೆಂಪೇಗೌಡ ಜಯಂತಿಯನ್ನು ಹಲವು ರೀತಿಯಲ್ಲಿ ಆಚರಿಸಲಾಗುತ್ತದೆ. ಪ್ರತಿ ಮನೆಯಲ್ಲೂ ಕೆಂಪೇಗೌಡರ ಫೋಟೋ ಇಟ್ಟು ಪೂಜೆ ಸಲ್ಲಿಸಲಾಗುತ್ತದೆ. ಬೆಂಗಳೂರು ಬಗ್ಗೆ ವಿಶ್ವವೇ ಮಾತನಾಡುತ್ತಿದ್ದು, ಇದರ ಹಿಂದೆ ಕೆಂಪೇಗೌಡರಿದ್ದಾರೆ. ಬೆಂಗಳೂರಿನಲ್ಲಿ ಕೆಂಪೇಗೌಡ ನಿರ್ಮಿಸಿದ ಕೆರೆಗಳು ಒತ್ತುವರಿಯಾಗಿದೆ; ಅವನ್ನು ಉಳಿಸಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಮೇಕೆದಾಟು ಯೋಜನೆ ಜಾರಿಯಾಗಬೇಕು ಎಂಬುದು ಜನರ ಆಗ್ರಹ. ಸದ್ಯ ಕುಡಿಯಲು ನೀರಿಲ್ಲ, ಮುಂದೆ 15 ವರ್ಷ ಕಳೆದರೂ ಏನಾಗುತ್ತೋ ಗೊತ್ತಿಲ್ಲ. ಸರ್ಕಾರ ಜನ್ಮ ದಿನಾಚರಣೆ ಮಾಡಬೇಕಾದರೆ ಕೆರೆಗಳನ್ನು ಉಳಿಸಲಿ. ಮಳೆನೀರಿನ ಸದುಪಯೋಗದ ಬಗ್ಗೆ ಯೋಚಿಸಲಿ. ಹೀಗೆ ಮಾಡಿದರೆ ಸರಕಾರವನ್ನು ಅಭಿನಂದಿಸುತ್ತೇನೆ ಎಂದು ಹೆಚ್ ಡಿ ಸ್ವಾಮಿ ಹೇಳಿದ್ದಾರೆ.

Leave A Reply

Your email address will not be published.