Karwara: ಶಾಸಕ ವಸಂತ್ ಅಸ್ನೋಟಿಕರ್ ಶೂಟೌಟ್ ಪ್ರಕರಣ: ಆರೋಪಿ ರಾಜನ್ ಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್

Karwara: ಇಪ್ಪತ್ನಾಲ್ಕು ವರ್ಷಗಳ ಹಿಂದೆ ನಡೆದ ಕಾರವಾರ ಶಾಸಕ ವಸಂತ್ ಆಸ್ಫೋಟಕರ್ ಶೂಟೌಟ್ ಪ್ರಕರಣದ ಆರೋಪಿ ಶಾರ್ಪ್ ಶೂಟರ್ ರಾಜನ್ ಅಲಿಯಾಸ್ ಸಂಜಯ್ ಕಿಶನ್ ಮೊಹಿತೆಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೊರ್ಟ್ ಕಾಯಂಗೊಳಿಸಿದೆ.

 

ಪ್ರಕರಣದ ಆರನೇ ಆರೋಪಿಯಾಗಿದ್ದ ಮುಂಬಯಿ ಪಶ್ಚಿಮದ ಅಂಧೇರಿ ಮೂಲದ ಸಂಜಯ್ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ದಾನ ನ್ಯಾಯಮೂರ್ತಿ ಎಚ್.ಪಿ.ಸಂದೇಶ್, ಹಾಗೂ ನ್ಯಾ.ರಾಮಚಂದ್ರ ಹುದ್ದಾರ್ ಅವರಿದ್ದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.

”ಎಲ್ಲ ಆಯಾಮಗಳಲ್ಲೂ ಕಾನೂನಾತ್ಮಕ ಹಾಗೂ ವಾಸ್ತವಿಕ ಅಂಶಗಳನ್ನು ಪರಿಶೀಲನೆ ನಡೆಸಿದ ವಿಚಾರಣಾ ನ್ಯಾಯಾಲಯದ ಆದೇಶ ಕಾನೂನು ಬಾಹಿರ ಹಾಗೂ ದೋಷ ದಿಂದ ಕೂಡಿದೆ ಎಂದು ಸಾಬೀತುಪಡಿಸುವುದಕ್ಕೆ ಯಾವುದೇ ಆಧಾರಗಳು ಇಲ್ಲ. ಹಾಗಾಗಿ, ಮೇಲ್ಮನವಿ ವಜಾಗೊಳಿಸಲಾಗುತ್ತಿದೆ,” ಎಂದು ನ್ಯಾಯಪೀಠ ತಿಳಿಸಿದೆ.

”ಘಟನೆ ಸಂಬಂಧ ಲಭ್ಯವಿರುವ ಹಲವು ಪ್ರತ್ಯಕ್ಷ ಸಾಕ್ಷ್ಯಗಳಿದ್ದು, ಮೇಲ್ಮನವಿದಾರರ ಕೃತ್ಯವನ್ನು ಗುರುತಿಸಿದ್ದಾರೆ. ಸಾಕ್ಷಿಗಳು ವಿಚಾರಣಾ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದಾರೆ. ಆ ಪೈಕಿ ಕೆಲವುಗಳಲ್ಲಿ ವಿರೋಧಾ ಭಾಸವಿರಬಹುದು. ಆದರೆ, ಅದಕ್ಕೆಲ್ಲಾ ಖಚಿತ ಆಧಾರಗಳಿವೆ. ಪ್ರತ್ಯಕ್ಷ ಸಾಕ್ಷಿಗಳು ಆರೋಪಕ್ಕೆ ಪೂರಕವಾಗಿದ್ದಾಗ ಇತರೆ ಸಾಕ್ಷಿಗಳನ್ನು ನಂಬಬೇಕಾಗುತ್ತದೆ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

”ವಾದ-ಪ್ರತಿವಾದ ಆಲಿಸಿ, ದಾಖಲೆಗಳ ಪರಿಶೀಲನೆ ನಡೆಸಿದ ನ್ಯಾಯಪೀಠ, “ಗುಂಡಿನ ದಾಳಿ ಅಸಾಮನ್ಯವಾಗಿತ್ತು. ಕಾರವಾರದಂತಹ ನಗರದಲ್ಲಿ ಈ ರೀತಿ ಚಲನಚಿತ್ರಗಳಲ್ಲಿಯೂ ಕಾಣದಂತಹ ಘಟನೆಯಾಗಿದ್ದರೆ ಪರಿಣಾಮ ಪ್ರತ್ಯಕ್ಷ ಸಾಕ್ಷ್ಯಗಳಿಗೆ ನೆನಪಿನಲ್ಲಿ ಉಳಿಯುವಂತಾಗಿದೆ,” ಎಂದು ಹೇಳಿದೆ.

ಅರ್ಜಿದಾರರ ಪರ ವಕೀಲರು, ‘ಘಟನೆ ನಡೆದ ದಿನದಂದು ಆರೋಪಿ ಕಾರವಾರದಲ್ಲಿದ್ದರು ಎಂದು ತನಿಖಾಧಿಕಾರಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಹೊಸದಾಗಿ ಆರೋಪಪಟ್ಟಿ ಸಲ್ಲಿಸಿದ್ದು, ಪ್ರಕರಣದಲ್ಲಿ ಅನಗತ್ಯವಾಗಿ ಸಿಲುಕಿಸಿದ್ದಾರೆ. ಘಟನೆ ನಡೆದ ಎರಡು ವರ್ಷಗಳ ಬಳಿಕ ಸಾಕ್ಷಿಗಳ ಪರೇಡ್ ನಡೆಸಿದ್ದಾರೆ. ಸಾಕ್ಷಿಗಳಿಗೆ ತರಬೇತಿ ನೀಡಿ ಹೇಳಿಕೆ ದಾಖಲಿಸಲಾಗಿದೆ,” ಎಂದು ವಿವರಿಸಿದ್ದರು.

ಪ್ರಕರಣದ ಹಿನ್ನೆಲೆ: 2000ರ ಫೆ.19ರಂದು ಕಾರವಾರದ ಕಲ್ಯಾಣ ಮಂಟಪವೊಂದರಲ್ಲಿ ತಮ್ಮ ಮಗಳ ವಿವಾಹದ ಆರತಕ್ಷತೆ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಆಸ್ನೋಟಿಕರ್ ಮೇಲೆ ಗುಂಡಿನ ಮಳೆಗರೆದಿದ್ದರು. ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಘಟನೆಯಲ್ಲಿ ಗಣಪತಿ ಉಲ್ವೇಕರ್ ಗಾಯಗೊಂಡಿದ್ದರು.

ಪ್ರಕರಣದ ವಿಚಾರಣೆ ಹಂತದಲ್ಲಿಯೇ ಮೂವರು ಆರೋಪಿಗಳಾದ ದಿಲೀಪ್ ಅರ್ಜುನ್ ನಾಯ್ಕ, ಇತರೆ ಆರೋಪಿಗಳಾದ ಆಂಟೋನಿ ಮತ್ತು ಓಂ ಪ್ರಕಾಶ್ ಗಿರಿ ಮೃತಪಟ್ಟಿದ್ದರು. ಹಾಗಾಗಿ, ನ್ಯಾಯಾಲಯ ಆ ಆರೋಪಿಗಳ ವಿರುದ್ಧದ ಆರೋಪ ಕೈಬಿಟ್ಟಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ಉತ್ತರ ಕನ್ನಡ ಜಿಲ್ಲೆಯ ಒಂದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಕೋರ್ಟ್ ಆರೋಪಿಯ ವಿರುದ್ಧ ಕೊಲೆ, ಕೊಲೆ ಯತ್ನ, ಪಿತೂರಿ, ಸಾಕ್ಷ್ಯನಾಶ, ಶಸ್ತ್ರಾಸ್ತ್ರ ಕಾಯಿದೆ ಉಲ್ಲಂಘನೆ ಆರೋಪದಲ್ಲಿ ಸಂಜಯ್ ಮೊಹಿತೆಗೆ ಜೀವಾವಧಿ ಶಿಕ್ಷೆ ಮತ್ತು 68 ಸಾವಿರ ರೂ. ದಂಡ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಆರೋಪಿ ಮೇಲ್ಮನವಿ ಸಲ್ಲಿಸಿದ್ದ.

Leave A Reply

Your email address will not be published.