Belthangady Crime: ಕಾಂಗ್ರೆಸ್‌ ಕಾರ್ಯಕರ್ತನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Belthangady: ಯುವಕನೋರ್ವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ  ಘಟನೆಯೊಂದು ನಡೆದಿದೆ. ಇದು ಆತ್ಮಹತ್ಯೆ ಎಂದು ಶಂಕಿಸಲಾಗಿದ್ದು, ಆದರೆ ಇದು ಕೊಲೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದ್ದು, ಸಮರ್ಪಕ ತನಿಖೆಯಾಗಬೇಕೆಂದು ಆಗ್ರಹ ಕೇಳಿ ಬಂದಿದೆ.

ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾ.ಪಂ.ವ್ಯಾಪ್ತಿಯ ವಾಮದಪದವು ತಿಮರಡ್ಡ ನಿವಾಸಿ ಪದ್ಮನಾಭ ಸಾಮಂತ (ಸೇವಂತ) ಮೃತ ಹೊಂದಿದವರು.

ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದ ಇವರು ಜಿಲ್ಲಾ ಕಾಂಗ್ರೆಸ್‌ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾಗಿದ್ದರು. ಇವರು ಆರ್‌ಟಿಐ ನಿಂದ ಮಾಹಿತಿ ಪಡೆದು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದರು. ಇತ್ತೀಚೆಗೆ ಇವರ ಮೇಲೆ ಯುವಕನೊಬ್ಬನಿಗೆ ಸರಕಾರಿ ಉದ್ಯೋಗ ನೀಡುವುದಾಗಿ ಹೇಳಿ 1.50 ಲಕ್ಷ ಪಡೆದಿರುವುದಾಗಿ ವಂಚನೆ ಆರೋಪ ಕೇಳಿಬಂದಿದ್ದು, ಈ ಕುರಿತು ಪೂಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವುದಾಗಿ ಪೊಲೀಸರ ಬಳಿ ಹೇಳಿದ್ದ ಇವರು ಕಳೆದ ಮೂರು ದಿನಗಳಿಂದ ಠಾಣೆಗೆ ಹೋಗಿಲ್ಲ. ದೂರವಾಣಿ ಕರೆ ಮಾಡಿದರೂ ಉತ್ತರವಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಇವರು ಮೃತಪಟ್ಟು ಕೆಲವು ದಿನಗಳಗಾಗಿರುವ ಕಾರಣ ಮರಣೋತ್ತರ ಪರೀಕ್ಷೆಗೆ ಫೋರೆನ್ಸಿಕ್‌ ತಜ್ಞರು ಬರಬೇಕಿದೆ. ಪದ್ಮನಾಭ ಅವರಿಗೆ ಸರಿಯಾದ ಉದ್ಯೋಗವಿರಲಿಲ್ಲ. ತನ್ನ ತಾಯಿ ಸಹೋದರನೊಂದಿಗೆ ವಾಸಿಸುತ್ತಿದ್ದು, ಮೃತದೇಹ ಮನೆಯ ಹಿಂಬದಿಯ ಗುಡ್ಡದಲ್ಲಿ ಪತ್ತೆಯಾಗಿದೆ.

ಕೊಳೆತ ಮೃತದೇಹದ ವಾಸನೆಯು ಹೆಚ್ಚಿದ್ದರಿಂದ ರವಿವಾರ ಈ ಘಟನೆ ಬೆಳಕಿಗೆ ಬಂದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಇದು ಆತ್ಮಹತ್ಯೆ ಎಂದು ಹೇಳಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರವೇ ನಿಜಾಂಶ ತಿಳಿದು ಬರಲಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Insomnia: ನಿದ್ರಾಹೀನತೆಗೆ ಒತ್ತಡ ಮಾತ್ರವಲ್ಲ ಸಾಮಾಜಿಕ ಜಾಲತಾಣ, ಒಟಿಟಿಗಳೂ ಕಾರಣ : ಸಂಶೋಧನಾ ವರದಿಯಲ್ಲಿ ಬಹಿರಂಗ

Leave A Reply

Your email address will not be published.