ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರೂ.7 ಲಕ್ಷ ಮೌಲ್ಯದ ಪುಂಗನೂರು ತಳಿಯ ಗೋದಾನ ಮಾಡಿದ ಉದ್ಯಮಿ ಮಹೇಶ್‌ ರೆಡ್ಡಿ

Subrahmanya: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ (Subrahmanya)7 ಲಕ್ಷ ರೂ ಮೌಲ್ಯದ ಪುಂಗನೂರು ತಳಿಯ 4 ಗೋವುಗಳನ್ನು ಕ್ಷೇತ್ರದ ಭಕ್ತ ಹೈದರಾಬಾದ್‌ನ ಎ.ಎಂ.ಆರ್ ಗ್ರೂಪ್‌ನ ಆಡಳಿತ ನಿರ್ದೇಶಕ ಎ.ಮಹೇಶ್ ರೆಡ್ಡಿ ದಾನವಾಗಿ ನೀಡಿದರು.

 

ದೇವಸ್ಥಾನದ ನಾಗಪ್ರತಿಷ್ಠಾ ಮಂಟಪದ ಬಳಿ ಗೋವುಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು.ಬಳಿಕ ವಿವಿಧ ವೈದಿಕ ವಿಧಿ ವಿಧಾನಗಳ ಮೂಲಕ ಗೋವುಗಳನ್ನು ಶ್ರೀ ದೇವಳಕ್ಕೆ ಹಸ್ತಾಂತರಿಸಲಾಯಿತು.

ಹೈದರಬಾದ್ ಮೂಲದ ಉದ್ಯಮಿಗಳಾದ ಎ.ಮಹೇಶ್ ರೆಡ್ಡಿಯವರು ಕುಕ್ಕೆ ಸುಬ್ರಹ್ಮಣ್ಯನ ಭಕ್ತರಾಗಿದ್ದು ಈ ಹಿಂದೆ ಸುಮಾರು ರೂ 27 ಲಕ್ಷದಲ್ಲಿ ಬೋಜನ ಪ್ರಸಾದ ತಯಾರಿಕಾ ಮತ್ತು ಲಾಡು ಪ್ರಸಾದ ತಯಾರಿಕಾ ಯಂತ್ರೋಪಕರಣಗಳನ್ನು, ಷಣ್ಮುಖ ಪ್ರಸಾದ ಬೋಜನ ಶಾಲೆಗೆ ಬೋಜನ ಪ್ರಸಾದ ವಿತರಣೆಗೆ ಗಾಡಿಗಳನ್ನು ಕಾಣಿಕೆ ರೂಪದಲ್ಲಿ ಶ್ರೀ ದೇವಸ್ಥಾನಕ್ಕೆ ಅರ್ಪಿಸಿದ್ದರು.

 

ಇದೀಗ ನಾಗರಪಂಚಮಿಯ ಶುಭ ದಿನ ಶ್ವೇತ ವರ್ಣದ 3 ಗೋವುಗಳನ್ನು ಹಾಗೂ 1 ಕರುವನ್ನು ದಾನವಾಗಿ ನೀಡಿದ್ದಾರೆ.

 

ಶ್ರೀ ದೇವರ ದರುಶನ ಪಡೆದ ದಾನಿಗಳಿಗೆ ದೇವಳದ ಅರ್ಚಕರು ಶಾಲು ಹೊದಿಸಿ ಮಹಾ ಪ್ರಸಾದ ನೀಡಿದರು.ನಂತರ ದೇವಳದ ಆಡಳಿತ ಕಚೇರಿಯಲ್ಲಿ ಉದ್ಯಮಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

 

ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಎಸ್ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಪಿಜಿಎಸ್‌ಎನ್ ಪ್ರಸಾದ್, ಮನೋಹರ ರೈ, ಲೋಕೇಶ್ ಮುಂಡುಕಜೆ, ವನಜಾ.ವಿ.ಭಟ್, ಶೋಭಾ ಗಿರಿಧರ್, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ : ಟಾಪ್‌ ಮತ್ತು ಶಾರ್ಟ್ಸ್‌ ಧರಿಸಿದ ಲಲನೆಯಿಂದ ಗಾಳಿಯಲ್ಲಿ ಗನ್‌ ಬೀಸುತ್ತಾ ಪ್ರದರ್ಶನ!

Comments are closed.