Murder: ಪತ್ರಕರ್ತನ ಮೇಲೆ ಗುಂಡು ಹಾರಿಸಿ ಹತ್ಯೆ, ಮನೆಗೇ ನುಗ್ಗಿ ಗುಂಡಿಕ್ಕಿದ ದುಷ್ಕರ್ಮಿಗಳು !!

Murder: ಪತ್ರಕರ್ತನೋರ್ವನನ್ನು ಗುಂಡಿಕ್ಕಿ ಭೀಕರವಾಗಿ ಹತ್ಯೆ (Murder) ಮಾಡಿರುವ ಘಟನೆ ಬಿಹಾರದ (Bihar) ಅರಾರಿಯಾ ಜಿಲ್ಲೆಯಲ್ಲಿ ಇಂದು (ಆ. 18) ನಡೆದಿದೆ. ಮೃತನನ್ನು ಪತ್ರಕರ್ತ ವಿಮಲ್ ಕುಮಾರ್ ಯಾದವ್ ಎನ್ನಲಾಗಿದೆ.

ವಿಮಲ್ ಕುಮಾರ್ ಅವರು ‘ದೈನಿಕ್​ ಜಾಗರಣ್​’ ಎಂಬ ಹಿಂದಿ ಸುದ್ದಿ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ಇವರು
ರಾಣಿಗಂಜ್ ಜಿಲ್ಲೆಯ ನಿವಾಸಿಯಾಗಿದ್ದು, ಅರಾರಿಯಾದಲ್ಲಿ ವಾಸವಿದ್ದರು. ವಿಮಲ್ ಅವರಿಗೆ 15 ವರ್ಷದ ಮಗ ಮತ್ತು 13 ವರ್ಷದ ಮಗಳಿದ್ದಾಳೆ.

ಇಂದು ಬೆಳಗ್ಗೆ 5 ಗಂಟೆಯ ಹೊತ್ತಿಗೆ ವಿಮಲ್ ಕುಮಾರ್ ಮನೆಗೆ ಕೆಲ ದುಷ್ಕರ್ಮಿಗಳು ನುಗ್ಗಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ವಿಮಲ್​ ಅವರನ್ನು ಮನೆಯಿಂದ ಹೊರಗೆ ಕರೆದಿದ್ದು, ಅವರು ಹೊರಗೆ ಬರದಿದ್ದಾಗ ಮನೆಯೊಳಗೆ ನುಗ್ಗಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಗುಂಡು ವಿಮಲ್ ದೇಹಕ್ಕೆ ತಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅರಾರಿಯಾ ಸದರ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಂದಹಾಗೆ 2019ರಲ್ಲಿ ವಿಮಲ್ ಕುಮಾರ್ ಅವರ ಸಹೋದರನನ್ನೂ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ವಿಮಲ್​ ಒಬ್ಬರೇ ಸಾಕ್ಷಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಯ ಸತ್ಯಾಸತ್ಯತೆ ಇನ್ನಷ್ಟೇ ಬೆಳಕಿಗೆ ಬರಬೇಕಿದೆ.

Comments are closed.