ಸುರೇಶ್‌ ಪಳ್ಳಿ, ಭರತ್‌ರಾಜ್‌ ಸನಿಲ್ ಗೆ ‘ಬ್ರ‍್ಯಾಂಡ್ ಮಂಗಳೂರು ಪ್ರಶಸ್ತಿ’

Mangalore : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದತೆ ಪ್ರತಿ ಬಿಂಬಿಸುವ ವರದಿಗೆ ನೀಡಲಾಗುವ ಬ್ರ‍್ಯಾಂಡ್ ಮಂಗಳೂರು( Mangalore )ಪ್ರಶಸ್ತಿಗೆ ಪತ್ರಿಕಾ ಮಾಧ್ಯಮ ವಿಭಾಗದಲ್ಲಿ ಹೊಸದಿಗಂತ ವರದಿಗಾರ ಸುರೇಶ್‌ ಡಿ.ಪಳ್ಳಿ ಮತ್ತು ದೃಶ್ಯ ಮಾಧ್ಯಮ ವಿಭಾಗದಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವರದಿಗಾರ ಭರತ್‌ರಾಜ್‌ ಕೆ. ಸನಿಲ್‌ ಆಯ್ಕೆಯಾಗಿದ್ದಾರೆ.

ಹೊಸದಿಗಂತ ಪತ್ರಿಕೆಯಲ್ಲಿ 2022ರ ಜೂ.13ರಂದು ಪ್ರಕಟಗೊಂಡ “ಮತ್ತೆ ಒಂದಾಗಲಿ ಒಡೆದ ಮನಸ್ಸುಗಳು”ಮತ್ತು ಸುವರ್ಣ ನ್ಯೂಸ್‌ನಲ್ಲಿ 2022ರ ಏ.19ರಂದು ಪ್ರಸಾರಗೊಂಡ “ಹಿಂದೂ ಕುಶಲಕರ್ಮಿಯ ಕೈಚಳಕ, ಕೋಮು ಸೂಕ್ಷ್ಮಮಂಗಳೂರಿನ ಸೌಹಾರ್ದತೆಯ ಕಥೆ” ವಿಶೇಷ ವರದಿಗೆ ಪ್ರಶಸ್ತಿ ಲಭಿಸಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ತೀರ್ಪುಗಾರರಾಗಿ ಪತ್ರಿಕಾ ವಿಭಾಗದಲ್ಲಿ ಹಿರಿಯ ಪತ್ರಕರ್ತ ಹಿಲರಿ ಕ್ರಾಸ್ತ, ರಂಗ ಸಾಹಿತಿ, ನ್ಯಾಯವಾದಿ ಶಶಿರಾಜ್‌ ಕಾವೂರು, ಕರಾವಳಿ ಲೇಖಕಿ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಚೆಳ್ಯಾರು, ದೃಶ್ಯ ಮಾಧ್ಯಮ ವಿಭಾಗದಲ್ಲಿ ಉಜಿರೆ ಎಸ್‌ಡಿಎಂ ಪತ್ರಿಕೋದ್ಯಮ ಉಪನ್ಯಾಸಕ ಸುನಿಲ್‌ ಹೆಗ್ಡೆ, ನಮ್ಮ ಕುಡ್ಲ ವಾಹಿನಿಯ ಹಿರಿಯ ಪತ್ರಕರ್ತ ಲ್ಯಾನ್ಸಿ ಡಿಸೋಜ ಸಹಕರಿಸಿದ್ದರು.

*ಜು.1ರಂದು ಪೂರ್ವಾಹ್ನ 11 ಗಂಟೆಗೆ ಪತ್ರಿಕಾಭವನದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪೊಲೀಸ್‌ ಕಮಿಷನರ್‌ ಕುಲದೀಪ್‌ ಜೈನ್‌, ಆಕಾಶವಾಣಿ ನಿವೃತ್ತ ಅಧಿಕಾರಿ ಸದಾನಂದ ಪೆರ್ಲ ಪ್ರಶಸ್ತಿ ಪ್ರದಾನ ಮಾಡುವರು.

ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ ಅಧ್ಯಕ್ಷತೆ ವಹಿಸುವರು. ಪ್ರೆಸ್‌ಕ್ಲಬ್‌ ಅಧ್ಯಕ್ಷ ಪಿ.ಬಿ.ಹರೀಶ್‌ ರೈ, ಪತ್ರಿಕಾಭವನ ಟ್ರಸ್ಟ್‌ ಅಧ್ಯಕ್ಷ ರಾಮಕೃಷ್ಣ ಆರ್.‌ ಉಪಸ್ಥಿತರಿರುವರು.

ಸುರೇಶ್ ಡಿ. ಪಳ್ಳಿ

ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದವರು. ಸಮೂಹ ಸಂಹವನ ಮತ್ತು ಪತ್ರಿಕೋದ್ಯಮ-ಸ್ನಾತಕೋತ್ತರ ಪದವೀಧರರು. 16 ವರ್ಷಗಳಿಂದ ಹೊಸ ದಿಗಂತ ಪತ್ರಿಕೆಯ ಮಂಗಳೂರು ವಿಭಾಗದಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2013ನೆಯ ಸಾಲಿನ ಪದ್ಯಾಣ ಗೋಪಾಲಕೃಷ್ಣ (ಪ.ಗೋ) ಪ್ರಶಸ್ತಿಗೆ ಭಾಜನರಾಗಿದ್ದರು. ಇವರ ವಿಶೇಷ ವರದಿಯೊಂದು ಅಖಿಲ ಭಾರತ ಮಟ್ಟದ-ಜಾಗತಿಕ ಸಮಾಜ ಕಾರ್ಯ ಸಂಸ್ಥೆ ಪ್ರಕಟಿಸುವ ‘ಹಂಗರ್ ಪ್ರಾಜೆಕ್ಟ್’ನ ಪುಸ್ತಕದಲ್ಲಿ ಆಂಗ್ಲ ಭಾಷೆಗೆ ತರ್ಜುಮೆಗೊಂಡು ಪ್ರಕಟವಾಗಿದೆ.

ಭರತ್‌ರಾಜ್ ಸನಿಲ್:

ಕುಂಪಲದ ಭರತ್‌ರಾಜ್‌ ಅವರಿಗೆ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ. 18ನೇ ವಯಸ್ಸಿನಲ್ಲೇ ಜಯಕಿರಣ ಪತ್ರಿಕೆಯಲ್ಲಿ ಪತ್ರಿಕೋದ್ಯಮ ಆರಂಭಿಸಿ ಬಳಿಕ ದೂರ ಶಿಕ್ಷಣದಲ್ಲಿ ಬಿ.ಎ ಪತ್ರಿಕೋದ್ಯಮ ಪದವಿ ಪೂರೈಸಿದರು. ಬಿಟಿವಿ ನ್ಯೂಸ್ ಜಿಲ್ಲಾ ‌ವರದಿಗಾರನಾಗಿ ಬಳಿಕ 2017ರಿಂದ ಸುವರ್ಣ ನ್ಯೂಸ್‌ನಲ್ಲಿ ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ : 7 ಸ್ಟಾರ್ ಸುಲ್ತಾನ್ ನಟನನ್ನು ಬಲಿ ಕೊಡಲು ನಿರ್ಧಾರ !ಟಗರು ಪಲ್ಯ ತಂಡದ ಬೇಡಿಕೆ ಈಡೇರಿತಾ ?

Leave A Reply

Your email address will not be published.