BJP: ಪಾತಳಕ್ಕೆ ಕುಸಿದ ಬಿಜೆಪಿ ಇಮೇಜ್ : ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಸ್ಥಾನಕ್ಕೆ ಸಮರ್ಥರ ತಲಾಶ್

BJP search for Post of state president and leader of opposition

BJP :ಬೆಂಗಳೂರು: ವಿಧಾನಸಭಾ ಚುಣಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿ (BJP) ಪಕ್ಷದ ಇಮೇಜ್‌ ವೃದ್ಧಿ ಹಾಗೂ ಭವಿಷ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿ ಹೈಕಮಾಂಡ್ ಹಾಗೂ ಸಂಘ ಪರಿವಾರದ ಮುಖಂಡರು ಗಂಭೀರ ಚಿಂತನೆ ನಡೆಸುತ್ತಿದ್ದಾರೆ..

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ಸ್ಥಾನಕ್ಕೆ ಸಮರ್ಥರನ್ನು ನೇಮಕ ಮಾಡುವ ಕುರಿತು ಸಮಾಲೋಚನೆ ನಡೆದಿದೆ.

ಪಕ್ಷದ ಹೀನಾಯ ಸೋಲಿನ ನಂತರ ಆಂತರಿಕ ವಲಯದಲ್ಲಿ ಪರಾಮರ್ಶೆ ಸಭೆ ನಡೆಯುತ್ತಿದ್ದು, 15 ದಿನಗಳಲ್ಲಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರ ಬದಲಾವಣೆ ನಿಚ್ಚಳವಾಗಿದೆ.

ಲೋಕಸಭಾ ಚುನಾವಣೆಯನ್ನೂ ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಂಘ-ಪರಿವಾರದ ಹಿನ್ನೆಲೆ ಹೊಂದಿರುವ ಹಾಗೂ ಸಂಘಟನ ಚಾತುರ್ಯ ಹೊಂದಿರುವ ವ್ಯಕ್ತಿಯನ್ನು ನಿಯೋಜಿಸಬೇಕೆಂಬ ಬಗ್ಗೆ ಚರ್ಚೆ ನಡೆಯುತ್ತಿದ್ದು, ಹಿಂದುಳಿದ ವರ್ಗ ಅಥವಾ ಒಕ್ಕಲಿಗ ಸಮುದಾಯಕ್ಕೆ ಮನ್ನಣೆ ನೀಡುವ ಸಾಧ್ಯತೆ ಹೆಚ್ಚಿದೆ.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಕ್ಕಲಿಗ ಸಮುದಾಯದವರನ್ನೇ ಪರಿಗಣಿಸಿದರೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಥವಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೆಸರು ಮುಂಚೂಣಿಯಲ್ಲಿದೆ.

ಆದರೆ ಸಿ.ಟಿ.ರವಿ ಅವರು ತಾವೂ ಗೆಲ್ಲಲಾಗದೇ,ಚಿಕ್ಕಮಗಳೂರು ಜಿಲ್ಲೆಯಲ್ಲೂ ಒಂದೂ ಸ್ಥಾನ ಗೆಲ್ಲಿಸುವಲ್ಲಿ ವಿಫಲವಾಗಿದ್ದಾರೆ‌‌.ಇದರಿಂದ ಅವರಿಗೆ ನೀಡುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.

ಸಂಘ ಪರಿವಾರ ಹಾಗೂ ದಿಲ್ಲಿ ನಾಯಕರು ರಾಜ್ಯಾಧ್ಯಕ್ಷ ಸ್ಥಾನವನ್ನು ಈ ಬಾರಿ ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿಗೆ ನೀಡುವುದು ಸೂಕ್ತ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಹೀಗಾಗಿ ಮಾಜಿ ಸಚಿವ ವಿ. ಸುನಿಲ್‌ ಕುಮಾರ್‌ ಹೆಸರು ಮುನ್ನೆಲೆಗೆ ಬಂದಿದೆ.

ಆದರೆ ಈ ಬಾರಿ ಸುನಿಲ್ ಕುಮಾರ್ ಅವರು ಕೂಡ ಪ್ರಭಾವಿ ಸಚಿವ ಹುದ್ದೆ ಇದ್ದರೂ ಭಾರಿ ಪ್ರಯಾಸದ ಗೆಲುವು ಪಡೆದುಕೊಂಡಿದ್ದಾರೆ.ಕಾರ್ಕಳದಲ್ಲಿ ಹಲವು ಕಾರ್ಯಕ್ರಮ ನಡೆಸಿದರೂ ಜನರ ಮನಸನ್ನು ಪೂರ್ಣ ಮಟ್ಟದಲ್ಲಿ ಗೆಲ್ಲಲು ವಿಫಲವಾಗಿದ್ದಾರೆ ಎನ್ನಲಾಗಿದೆ.

ವಿಪಕ್ಷ ನಾಯಕ ಸ್ಥಾನಕ್ಕೆ ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೇ ನೇಮಿಸುವುದು ಸೂಕ್ತ ಎಂಬ ಮಾತು ಕೇಳಿ ಬಂದಿದೆ. ಆದರೆ ಸಂಘ ಪರಿವಾರದ ನಾಯಕರ ಜತೆಗೆ ನಡೆದ ಸಭೆಯ ಸಂದರ್ಭದಲ್ಲಿ ಬೊಮ್ಮಾಯಿ ಬಗ್ಗೆ ಹೆಚ್ಚಿನ ಒಲವು ಕಂಡುಬಂದಿಲ್ಲ ಎನ್ನಲಾಗಿದೆ. ಪಕ್ಷದ ಹಿರಿಯರು ಹಾಗೂ ಕಾರ್ಯಕರ್ತರ ಮಟ್ಟದಲ್ಲೂ ಬೊಮ್ಮಾಯಿ ಬಗ್ಗೆ ಬೇಸರ ಇರುವುದರಿಂದ ಬೇರೆ ಲಿಂಗಾಯತ ನಾಯಕರನ್ನು ಈ ಹುದ್ದೆಗೆ ನೇಮಕ ಮಾಡುವ ಸಾಧ್ಯತೆ ಇದೆ.

ಬೊಮ್ಮಾಯಿ ಹೊರತುಪಡಿಸಿ ಲಿಂಗಾಯತರನ್ನೇ ವಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಮಾಡುವುದಾದರೆ ಕೇಂದ್ರದ ಮಾಜಿ ಸಚಿವ ಬಸನಗೌಡ ಯತ್ನಾಳ್‌ ಅಥವಾ ಅರವಿಂದ ಬೆಲ್ಲದ್‌ ಹೆಸರು ಪಕ್ಷದ ಹಂತದಲ್ಲಿ ಚರ್ಚೆಯಲ್ಲಿದೆ. ಇಬ್ಬರೂ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಪಕ್ಷ ಹಾಗೂ ಸಂಘಟನೆ ಬಗ್ಗೆ ನಿಷ್ಠೆ ಹೊಂದಿದ್ದಾರೆ. ಸದನದಲ್ಲಿ ಕಾಂಗ್ರೆಸ್‌ ವಿರುದ್ಧ ಹೋರಾಟ ರೂಪಿಸಬೇಕಿದ್ದರೆ ವೈಯಕ್ತಿಕವಾಗಿ ಕ್ಲೀನ್‌ ಇಮೇಜ್‌ ಹೊಂದಿರುವವರು ಬೇಕಾಗುತ್ತದೆ. ಬೆಲ್ಲದ್‌ ಹಾಗೂ ಯತ್ನಾಳ್‌ ಈ ದೃಷ್ಟಿಯಿಂದ ಹೆಚ್ಚು ಅರ್ಹತೆ ಹೊಂದಿದ್ದಾರೆ. ಇದರಿಂದ ಬಿಜೆಪಿ ಲಿಂಗಾಯತರಿಗೆ ಅವಕಾಶ ನೀಡಿಲ್ಲ ಎಂಬ ಕೂಗನ್ನು ತಪ್ಪಿಸುವ ಜತೆಗೆ ಹೊಸ ನಾಯಕತ್ವ ಹುಟ್ಟಿ ಹಾಕುವುದಕ್ಕೂ ಅನುಕೂಲವಾಗುತ್ತದೆ ಎಂಬುದು ಬಿಜೆಪಿ ಲೆಕ್ಕಾಚಾರ.

ಒಂದೊಮ್ಮೆ ವರಿಷ್ಠರು ಲಿಂಗಾಯತ ಸಮುದಾಯಕ್ಕೆ ಸೇರಿದವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಿದರೆ ಆಗ ಮಾಜಿ ಸಚಿವರಾದ ಸುರೇಶ್‌ ಕುಮಾರ್‌ ಅಥವಾ ಸುನಿಲ್‌ ಕುಮಾರ್‌ ವಿಪಕ್ಷ ನಾಯಕರಾಗಿ ನೇಮಕಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಲಿಂಗಾಯತರ ಅಸಮಾಧಾನ ಬಿಜೆಪಿಗೆ ಪೆಟ್ಟು

ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ಬಳಿಕ ಹಾಗೂ ಅವರನ್ನು ನಡೆಸಿಕೊಂಡ ರೀತಿ ಲಿಂಗಾಯತ ಸಮುದಾಯವಲ್ಲದೇ ಇಡೀ ರಾಜ್ಯದ ಜನತೆಗೆ ಬಿಜೆಪಿ ನಾಯಕರ ಮೇಲೆ ಅಸಮಾಧಾನ ಮೂಡಿದ ಪರಿಣಾಮ ಈ ರೀತಿಯ ಫಲಿತಾಂಶ ಬಂದಿದೆ ಎನ್ನಲಾಗಿದೆ.

ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಯಲು ಬಿಟ್ಟಿದ್ದರೇ ಈ ಬಾರಿ ಸ್ಪಷ್ಟ ಬಹುಮತದಿಂದ ಬಿಜೆಪಿ ಗೆಲ್ಲುತ್ತಿತ್ತು ಎಂದು ವ್ಯಾಖ್ಯಾನಿಸಲಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ ಬಿಟ್ಟರೆ ಅಂತಹ ನಾಯಕನ ಸ್ಥಾನ ತುಂಬುವಂತಹ ವ್ಯಕ್ತಿ ಯಾರೂ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಇದನ್ನೂ ಓದಿ:Jagadish Shetter: ಸೋತರೂ ಜಗದೀಶ್ ಶೆಟ್ಟರ್ ಗೆ ಒಲಿಯಲಿದೆ ಮಂತ್ರಿಗಿರಿ? ‘ಕೈ’ ಪಡೆಯ ಲೆಕ್ಕಾಚಾರ ಏನು?

Leave A Reply

Your email address will not be published.