D.K.Shivakumar Viral Video: ಪತ್ರಕರ್ತರಿಗೆ ಬೆದರಿಕೆ ಹಾಕಿ, ಎದ್ದು ಹೋದವರ ಲಿಸ್ಟ್ ಕೊಡಿ ಅಂದ ಡಿಕೆಶಿ !

D.K.Shivakumar: ನಿನ್ನೆ ಮಂಗಳವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (D.K.Shivakumar) ಮಾಧ್ಯಮದವರ ಮುಂದೆ ದರ್ಪ ತೋರಿ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಅಮಿತ್‌ ಮಾಳವೀಯ (Amit Malviya) ರವರು ಆರೋಪ ಮಾಡಿದ್ದಾರೆ. ಆ ಸಂಬಂಧದ ವಿಡಿಯೋ ಅನ್ನು ಅವರು ಬಿಡುಗಡೆ ಮಾಡಿದ್ದಾರೆ.

ನಿನ್ನೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ಅವರ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಈಗ ಆ ಪತ್ರಿಕಾಗೋಷ್ಠಿಗೆ ಸಂಬಂಧಿಸಿದಂತೆ ಮಾಳವೀಯ ಅವರು ವಿಡಿಯೋ ಒಂದನ್ನು ಟ್ವೀಟ್‌ ಮಾಡಿದ್ದಾರೆ. ಡಿಕೆಶಿ ಅವರು ನಿಗದಿತ ಸಮಯಕ್ಕೆ ಪತ್ರಿಕಾಗೋಷ್ಠಿಗೆ ಹಾಜರಾಗಿರಲಿಲ್ಲ ಆದುದರಿಂದ ಕೋಪಗೊಂಡ ಕೆಲ ಪತ್ರಕರ್ತರು ಕಾದು ಕಾದು ಪತ್ರಿಕಾಗೋಷ್ಠಿ ಬಹಿಷ್ಕರಿಸಿ ಹೋಗಿದ್ದರು. ಇದರ ಬಗ್ಗೆ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಈ ವೇಳೆ ಕೆಲ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿ, ” ಎಲ್ಲಿ, ಯಾವಾಗ ಪತ್ರಿಕಾಗೋಷ್ಠಿ ನಡೆಸಬೇಕು ಎಂದು ನನಗೆ ಚೆನ್ನಾಗಿ ಗೊತ್ತು. ನನಗೇ ಬ್ಲಾಕ್‌ಮೇಲ್‌ ಮಾಡ್ತೀರಾ ? ಎಂದು ಪ್ರಶ್ನಿಸಿದ್ದಾರೆ. ಬಳಿಕ ಎಲ್ಲರ ಎದುರೇ, ತಮ್ಮ ಆಪ್ತರೊಬ್ಬರನ್ನು ಕರೆದು, ಯಾರೆಲ್ಲ ಎದ್ದು ಹೋಗಿದ್ದಾರೆಯೋ ಅವರ ಪಟ್ಟಿ ಕೊಡಿ. ನಾನು ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ ” ಎಂದು ಹೇಳಿದ್ದಾರೆ.

ಡಿಕೆಶಿ ವರ್ತನೆ ಬಗ್ಗೆ ಅಮಿತ್ ಮಾಳವೀಯ ಕಿಡಿ:
ಈ ವಿಡಿಯೋವನ್ನು ಟ್ವೀಟ್‌ ಮಾಡಿ ಹಂಚಿಕೊಂಡಿರುವ ಅಮಿತ್ ಮಾಳವೀಯ ‘ಪದೇ ಪದೇ ವಿಳಂಬವಾಗಿ ಬರುತ್ತಿರುವುದನ್ನು ವಿರೋಧಿಸಿ ಪತ್ರಿಕಾಗೋಷ್ಠಿ ಬಹಿಷ್ಕರಿಸಿದ ಪತ್ರಕರ್ತರಿಗೆ ಕಾಂಗ್ರೆಸ್‌ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಡಿ.ಕೆ.ಶಿವಕುಮಾರ್‌ ಬೆಂಗಳೂರಿನಲ್ಲಿ ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದಾರೆ. ಎಲ್ಲಾ ಪತ್ರಕರ್ತರೂ ಹಣ ಮತ್ತು ಹೆಂಡಕ್ಕಾಗಿ ತಮ್ಮ ಆತ್ಮಸಾಕ್ಷಿಯನ್ನು ಮಾರಿಕೊಳ್ಳುವವರಲ್ಲ ಎಂಬುದನ್ನು ಡಿಕೆಶಿ ಖಂಡಿತವಾಗಿಯೂ ಅರ್ಥ ಮಾಡಿಕೊಳ್ಳಬೇಕು. ಬಹಳಷ್ಟು ಜನ ಇನ್ನೂ ತಮ್ಮ ಬೆನ್ನುಹುರಿ ಗಟ್ಟಿಯಾಗಿ ಇರಿಸಿಕೊಂಡಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಕಿಡಿಕಾರಿದ್ದಾರೆ.

ಇದೇ ವೇಳೆ ಡಿಕೆಶಿ ಬೆದರಿಕೆ ಮತ್ತು ವರ್ತನೆಯ ಬಗ್ಗೆ ಕಿಡಿ ಕಾರಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪತ್ರಿಕಾಗೋಷ್ಠಿಯನ್ನು ಪತ್ರಕರ್ತರು ಬಹಿಷ್ಕರಿಸಿದ ಬಳಿಕ ಖಾಲಿ ಇರುವ ಕುರ್ಚಿಗಳ ಫೋಟೋ ಲಗತ್ತಿಸಿ ಟ್ವೀಟ್‌ ಮಾಡಿದ್ದಾರೆ. ‘ ನಿನ್ನೆ ಕರ್ನಾಟಕ ಕಾಂಗ್ರೆಸ್‌ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್‌ ಪಕ್ಷದ ಕರೆದ ಪತ್ರಿಕಾಗೋಷ್ಠಿಯಲ್ಲಿ ಸ್ಮಶಾನ ಮೌನ ಆವರಿಸಿದೆ. ಡಿ.ಕೆ.ಶಿವಕುಮಾರ್‌ ಅವರ ಮಾಧ್ಯಮದವರ ಜತೆ ಗೂಂಡಾ ವರ್ತನೆ, ದರ್ಪ ವಿರೋಧಿಸಿ ಸ್ವಾಭಿಮಾನಿ ಮಾಧ್ಯಮ ಮಿತ್ರರು ಪತ್ರಿಕಾಗೋಷ್ಠಿ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಅಧಿಕಾರದ ಅಮಲಿನಲ್ಲಿ ಇರುವ ಡಿಕೆಶಿ ಕೈಗೆ ಅಧಿಕಾರ ಸಿಕ್ಕರೆ ರಾಜ್ಯದ ಪರಿಸ್ಥಿತಿ ಏನಾಗಬಹುದು ಹೇಳಿ? ರಾಜ್ಯದಲ್ಲಿ ಶಾಂತಿ ಕಾಪಾಡುವ ಮೂಲಕ ಸಮಗ್ರ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ’ ಎಂದು ಪ್ರತಿಕ್ರಿಯೆ ಶೋಭಾ ಪ್ರತಿಕ್ರಿಯೆ ನೀಡಿದ್ದಾರೆ.

 

Leave A Reply

Your email address will not be published.