Jagadish Shettar: ಸೋಲಿಲ್ಲದ ಸರದಾರ, ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಬಿಜೆಪಿಯಿಂದ ಕೊಕ್? ಈ ಬಾರಿ ಟಿಕೆಟ್ ಸಿಗೋದು ಡೌಟ್!

Jagadish Shettar: ಕರ್ನಾಟಕದ ಮಾಜಿ ಸಿಎಂ, ಮಾಜಿ ಸಚಿವ, ವಿಪಕ್ಷ ನಾಯಕ ಬಿಜೆಪಿ ಪ್ರಭಾವಿ ನಾಯಕ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ನ ಹಾಲೀ ಶಾಸಕ, ಸೋಲಿಲ್ಲದ ಸರದಾರ ಜಗದೀಶ್ ಶೆಟ್ಟರ್(Jagadish Shetter) ಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗೋದು ಅನುಮಾನ ಎಂಬ ಗುಮಾನಿ ಹರಡುತ್ತಿದೆ.

ಹೌದು, ಸತತ ಆರು ಬಾರಿ ಗೆದ್ದು ದಾಖಲೆ ಬರೆದಿರುವ ಶೆಟ್ಟರ್, ಏಳನೇ ಬಾರಿಯೂ ಗೆಲುವು ಕನಸು ಕಾಣುತ್ತಿರುವ ಹೊತ್ತಿನಲ್ಲಿ ಈ ಬಾರಿ ಬಿಜೆಪಿ ಹೈಕಮಾಂಡ್ (BJP High Command) ದೊಡ್ಡ ಶಾಕ್ ನೀಡುವ ಸಾಧ್ಯತೆಯಿದೆ. ಕುಗ್ಗುತ್ತಿರುವ ಶೆಟ್ಟರ್ ಜನಪ್ರಿಯತೆ, ವಯಸ್ಸಿನ ಕಾರಣದಿಂದ ಈ ಬಾರಿ ಟಿಕೆಟ್‌ ಸಿಗುವುದು ಅನುಮಾನವಾಗಿದೆ. ಹೀಗಾಗಿ ಶೆಟ್ಟರ್ ರಾಜಕೀಯ ಜೀವನ ಬಹುತೇಕ ಅಂತ್ಯ ಎಂಬ ಮಾತು ರಾಜಕೀಯ ವಲಯದಿಂದ ಕೇಳಿ ಬಂದಿದೆ.

ರಾಜಕೀಯ ಅಪಾರ ಅನುಭವ, ಉತ್ತರ ಕರ್ನಾಟಕ ಮತ್ತು ಲಿಂಗಾಯತರ ಮುಖಂಡರಾಗಿ ಗುರುತಿಸಿಕೊಂಡಿದ್ದ ಶೆಟ್ಟರ್‌ ಅವರ ಹಿರಿತನಕ್ಕೆ ಕೊಕ್‌ ನೀಡಿ ಬಿಜೆಪಿ ಹೊಸ ಮುಖವನ್ನು ಹುಡುಕುತ್ತಿದೆ ಎನ್ನಲಾಗುತ್ತಿದೆ. ಇಲ್ಲಿಯವರೆಗೆ ಶೆಟ್ಟರ್‌ ಅವರು ಪಕ್ಷಕ್ಕೆ ನೀಡಿದ ಸೇವೆಯನ್ನು ಪರಿಗಣಿಸಿ ಬಿಜೆಪಿ ಗೌರವಯುತವಾಗಿ ಬೀಳ್ಕೋಡುವ ಚಿಂತನೆ ನಡೆಸಿದೆ. ಈಗಾಗಲೇ ಆರ್‌ಎಸ್‌ಎಸ್‌ ಮುಖಂಡರೊಬ್ಬರು ಶೆಟ್ಟರ್ ಜೊತೆಗೆ ಮಾತನಾಡಿ ಈ ಬಾರಿ ಚುನಾವಣೆಯಿಂದ ಹಿಂದೆ ಸರಿಯಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ ರಾಜ್ಯಪಾಲರನ್ನಾಗಿಸುವ ಭರವಸೆಯನ್ನು ಸಹ ನೀಡಿದ್ದಾರೆ ಎಂಬ ವಿಚಾರ ಬಿಜೆಪಿ ವಲಯದಲ್ಲಿ ಹರಿದಾಡುತ್ತಿದೆ.

ಅಂದಹಾಗೆ ಧಾರವಾಡ ಜಿಲ್ಲೆಯ ಸದ್ಯ ಹುಬ್ಬಳ್ಳಿ- ಸೆಂಟ್ರಲ್ (Hubli-Dharwad Central Assembly constituency) ಕ್ಷೇತ್ರ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿರುವ ಅತ್ಯಂತ ಮಹತ್ವವಾದ ವಿಧಾನಸಭಾ ಕ್ಷೇತ್ರ. ಮೊದಲು ಹುಬ್ಬಳ್ಳಿ ಗ್ರಾಮೀಣ ವಿಧಾನಸಭಾ ಕ್ಷೇತ್ರವಾಗಿದ್ದ ಈ ಕ್ಷೇತ್ರ ಪುನರ್‌ ವಿಂಗಡನೆಯಾದ ಬಳಿಕ ಹು-ಧಾ ಸೆಂಟ್ರಲ್ ಕ್ಷೇತ್ರ ಎಂದೇ ಮರು ನಾಮಕರಣಗೊಂಡಿದೆ. ಇಂತಹ ಕ್ಷೇತ್ರದಲ್ಲಿ ತನ್ನದೇಯಾದ ಇತಿಹಾಸ ಬರೆದು ಸೋಲಿಲ್ಲದ ಸರದಾರಾಗಿ, ಬಿಜೆಪಿ (BJP) ಪಕ್ಷದಲ್ಲಿ ಮುಖ್ಯಮಂತ್ರಿ, ವಿಪಕ್ಷ ನಾಯಕ, ಸಚಿವರಾಗಿ ಅಧಿಕಾರ ಅನುಭವಿಸಿದ ಜಗದೀಶ್ ಶೆಟ್ಟರ್ (Jagadish Shettar) ಅವರಿಗೆ ಈ ಬಾರಿ ಟಿಕೆಟ್‌ ಸಿಗುವುದು ಅನುಮಾನ ಎಂಬ ವಿಚಾರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

1994 ರಲ್ಲಿ ಅಂದಿನ ಹುಬ್ಬಳ್ಳಿ ಗ್ರಾಮೀಣ ಅಂದರೆ ಇಂದಿನ ಸೆಂಟ್ರಲ್ ಕ್ಷೇತ್ರದಿಂದ ಬಿಜೆಪಿಯಿಂದ ರಾಜಕೀಯ ಆರಂಭಿಸಿದ ಶೆಟ್ಟರ್ ಅಂದಿನಿಂದ ಇಂದಿನವರೆಗೆ ಸತತವಾಗಿ ಆರು ಬಾರಿ ಜಯಭೇರಿ ಬಾರಿಸಿದ್ದಾರೆ. ಅಲ್ಲದೆ 2012ರ ಜುಲೈ 7 ರಿಂದ 2013ರ ಮೇ 8 ರವರೆಗೆ ರಾಜ್ಯ 27ನೇ ಮುಖ್ಯಮಂತ್ರಿಯಾಗಿ ಮುನ್ನಡೆಸಿದ್ದಾರೆ. ಇಂತಹ ಪ್ರಭಾವಿ ನಾಯಕನಿಗೆ ಬಿಜೆಪಿ ಕೊಕ್ ನೀಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಒಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದಾಗ ಅದರಲ್ಲಿ ಶೆಟ್ಟರ್ ಹೆಸರು ಇರುತ್ತದೆಯೋ ಇಲ್ಲವೋ ಎಂದು ಕಾದುನೋಡಬೇಕಿದೆ.

ಇದನ್ನೂ ಓದಿ: ಪುತ್ತೂರು ಶಾಸಕ ಸಂಜೀವ ಮಠಂದೂರು ಕುರಿತು ಮಾನಹಾನಿ ವರದಿ ಪ್ರಕಟಿಸದಂತೆ ತಡೆಯಾಜ್ಞೆ ಕೊಟ್ಟ ಕೋರ್ಟ್

Leave A Reply

Your email address will not be published.