Madhya pradesh: ಹನುಮನೆದುರು ಬಿಕಿನಿಯಲ್ಲಿ ದೇಹದಾರ್ಢ್ಯ ಪ್ರದರ್ಶಿಸಿದ ಮಹಿಳೆಯರು! ಕಾರ್ಯಕ್ರಮ ಆಯೋಜಕ ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ!

Madhya pradesh :ಸಾಮಾನ್ಯವಾಗಿ ಕುಸ್ತಿ ಪಟುಗಳು, ಜಟ್ಟಿಗಳು ತಮ್ಮ ಗರಡಿ ಮನೆಗಳಲ್ಲಿ ಹನುಮಂತ(Hanumanta)ನ ಫೋಟೋಗಳನ್ನು, ಮೂರ್ತಿಗಳನ್ನು ಇಟ್ಟು ಆರಾಧಿಸುವುದನ್ನು ನೋಡುತ್ತೇವೆ. ಆದರೆ ಮಧ್ಯಪ್ರದೇಶ(Madhya pradesh)ದಲ್ಲಿ ನಡೆದ ಮಹಿಳೆಯರ ದೇಹದಾರ್ಢ್ಯ ಸ್ಪರ್ಧೆಯಲ್ಲಿ(Body Building Championship) ಹನುಮಂತನ ವಿಗ್ರಹ ಇಡಲಾಗಿದೆ. ಈ ಸಂದರ್ಭದಲ್ಲಿ ಬಿಕನಿಧಾರಿ ಮಹಿಳೆಯರು ಹನುಮಂತನೆದುರು ತಮ್ಮ ದೇಹದಾರ್ಢ್ಯ ವನ್ನು ಪ್ರದರ್ಶಿಸಿದ್ದಾರೆ. ಇದರಿಂದ ಬ್ರಹ್ಮಚಾರಿ ಹನುಮಂತನಿಗೂ ಬಿಕಿನಿದಾರಿ ಮಹಿಳೆಯರಿಗೂ ಎಲ್ಲಿಯ ನಂಟು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಹೌದು, ಮಧ್ಯಪ್ರದೇಶದ (Madhya Pradesh) ರತ್ಲಾಮ್‌ನಲ್ಲಿ (Ratlam) ನಡೆದ ದೇಹದಾರ್ಢ್ಯ ಚಾಂಪಿಯನ್‌ಶಿಪ್‌ನಲ್ಲಿ (Body Building Championship) ಮಹಿಳಾ ದೇಹದಾರ್ಢ್ಯ ಪಟುಗಳು ಭಗವಾನ್ ಹನುಮಂತನ ವಿಗ್ರಹದ (Lord Hanuman Idol) ಮುಂದೆ ಬಿಕಿನಿಯಲ್ಲಿ (Bikini) ದೇಹದಾರ್ಢ್ಯ ಪ್ರದರ್ಶನ ನೀಡಿದ ನಂತರ ಡ್ರೆಸ್ ಕೋಡ್ ಬಗ್ಗೆ ವಿವಾದ ಭುಗಿಲೆದ್ದಿದೆ. ಸಹಜವಾಗಿ ಮಹಿಳೆಯರು ಈ ಕಾರ್ಯಕ್ರಮದಲ್ಲಿ, ಸ್ಪರ್ಧೆಯಲ್ಲಿ ಭಾಗವಹಿಸುವಾಗ ತೊಡುವ ವಸ್ತ್ರ ತೊಟ್ಟು ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಆದರೆ ಕಾರ್ಯಕ್ರಮ ಸ್ಥಳದಲ್ಲಿ ಹನುಮಂತನ ಫೋಟೋ ಇಟ್ಟಿದ್ದಕ್ಕೆ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ. ಒಂದೆಡೆ ಹನುಮಾನ್‌ ಚಾಲೀಸ್ ಹೇಳುವಂತೆ ಆಂದೋಲನ ನಡೆಸುವ ಬಿಜೆಪಿ ಪಕ್ಷ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಟೀಕಿಸಿದೆ.

ಮಾರ್ಚ್ 4 ಮತ್ತು 5 ರಂದು ನಡೆದ 13 ನೇ ಮಿಸ್ಟರ್ ಜೂನಿಯರ್ ದೇಹದಾರ್ಢ್ಯ ಸ್ಪರ್ಧೆಯನ್ನು ರತ್ಲಾಮ್‌ನ ಮೇಯರ್ ಬಿಜೆಪಿ(BJP)ಯ ಪ್ರಹ್ಲಾದ್ ಪಟೇಲ್(Prahalad Patel) ಆಯೋಜಿಸಿದ್ದರು. 3 ದಿನಗಳ ಕಾಲ ನಡೆದ ಈ ಕಾರ್ಯಕ್ರಮಕ್ಕೆ `ಮುಖ್ಯಮಂತ್ರಿ ದೇಹದಾರ್ಢ್ಯ ಸ್ಪರ್ಧೆ’ ಎಂದು ಹೆಸರಿಡಲಾಗಿತ್ತು.ಇದರಲ್ಲಿ ರಾಜ್ಯ ಶಿಕ್ಷಣ ಸಚಿವ ಮೋಹನ್ ಯಾದವ್ ಸಹ ಭಾಗವಹಿಸಿದ್ದರು. ಮಹಿಳಾ ದೇಹದಾರ್ಢ್ಯ ಪಟುಗಳು ಹನುಮಂತನ ಚಿತ್ರದ ಮುಂದೆ ಪೋಸ್ ಕೊಟ್ಟಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ಸ್ಪರ್ಧೆ ವಿವಾದದ ಕೇಂದ್ರ ಬಿಂದುವಾಗಿದೆ.

ಈ ಘಟನೆಯು ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ಕೆರಳಿಸಿದ್ದು, ನಂತರ ಅವರು ಸ್ಥಳದ “ಶುದ್ಧೀಕರಣ” ಮಾಡಲು ‘ಗಂಗಾಜಲ’ ಎರಚಿದ್ದಾರೆ ಮತ್ತು ‘ಹನುಮಾನ್ ಚಾಲೀಸಾ’ ಪಠಿಸಿದರು. ಹಾಗೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಇದು ಹನುಮಂತ ದೇವರಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದೆ. ಕಾರ್ಯಕ್ರಮವು ಹಿಂದೂಗಳ (Hindus) ಭಾವನೆಗಳಿಗೆ ನೋವುಂಟು ಮಾಡಿದೆ ಮತ್ತು ಅವರ ದೇವರಿಗೆ ಅವಮಾನವಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದ್ದು, ಆಯೋಜಕರಿಂದ ಕ್ಷಮೆಯಾಚಿಸುವಂತೆ ಕೋರಿದೆ. ಈ ಮಧ್ಯೆ, ಹಿಂದೂ ದೇವರನ್ನು ಅವಮಾನಿಸುತ್ತಿದೆ ಎಂದು ಸಮಾಜವಾದಿ(BSP) ಪಕ್ಷ ಸಹ ಮಧ್ಯ ಪ್ರದೇಶದ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

ಬಿಜೆಪಿ ತನ್ನನ್ನು ರಾಮಭಕ್ತ ಪಕ್ಷ ಎಂದು ಕರೆದುಕೊಳ್ಳುತ್ತದೆ, ಮತ್ತೊಂದೆಡೆ ಅದರ ನಾಯಕರು ಹನುಮಂತನನ್ನು ಅವಮಾನಿಸುತ್ತಿದ್ದಾರೆ, ಹಿಂದೂ ದೇವತೆಯನ್ನು ಅವಮಾನಿಸಿದ್ದಕ್ಕಾಗಿ ಬಿಜೆಪಿ ನಾಯಕರು ಕ್ಷಮೆಯಾಚಿಸಬೇಕು ಎಂದು ಮಧ್ಯ ಪ್ರದೇಶದ ರಾಜ್ಯ ಕಾಂಗ್ರೆಸ್ ಮಾಧ್ಯಮ ಉಸ್ತುವಾರಿ ಕೆ.ಕೆ.ಮಿಶ್ರಾ ಅವರು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸ್ಥಳೀಯ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಹನುಮಾನ್ ಚಾಲೀಸಾ ಪಠಿಸಿದರು. ಕೆಲ ಸ್ಥಳೀಯ ಬಿಜೆಪಿ ಮುಖಂಡರೂ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಂತ್ರ ಪಠಿಸಿದರು.

ಆದರೂ, ಮಹಿಳಾ ಸ್ಪರ್ಧಿಗಳು ತಮ್ಮ ಡ್ರೆಸ್ ಕೋಡ್‌ನಲ್ಲಿ ವೇದಿಕೆಯಲ್ಲಿ ಪ್ರದರ್ಶನ ನೀಡಿದರು ಎಂದು ಸಂಘಟನಾ ಸಮಿತಿಯು ಸಮರ್ಥಿಸಿಕೊಂಡಿದೆ. ಕಾಂಗ್ರೆಸ್‌(Congress) ಆರೋಪಕ್ಕೆ ತಿರುಗೆಟು ನೀಡಿದ ಬಿಜೆಪಿ ವಕ್ತಾರ ಹಿತೇಜ್‌ ಬಾಜ್‌ಪೇಯಿ, ಕುಸ್ತಿ, ಜಿಮ್ನಾಸ್ಟಿಕ್ ಅಥವಾ ಈಜುಗಳಲ್ಲಿ ಮಹಿಳೆಯರು ಭಾಗವಹಿಸುವುದನ್ನು ಕಾಂಗ್ರೆಸ್ಸಿಗರು ನೋಡುವುದಿಲ್ಲ. ಏಕೆಂದರೆ ಅವರೊಳಗಿನ ದೆವ್ವವು ಇದನ್ನು ನೋಡಿ ಎಚ್ಚರಗೊಳ್ಳುತ್ತದೆ. ಅವರು ಆಟದ ಮೈದಾನದಲ್ಲಿ ಮಹಿಳೆಯರನ್ನು ಕೊಳಕು ಕಣ್ಣುಗಳಿಂದ ನೋಡುತ್ತಾರೆ, ಅವರಿಗೆ ನಾಚಿಕೆಯಾಗುವುದಿಲ್ಲವೇ’ ಎಂದು ಕಿಡಿ ಕಾರಿದ್ದಾರೆ.

Leave A Reply

Your email address will not be published.