Benefits Of Camphor : ಈ ಕರ್ಪೂರ ನಿಮ್ಮ ಜೀವನವನ್ನು ಚಿನ್ನದಂತೆ ಹೊಳೆಯುವಂತೆ ಮಾಡುತ್ತೆ!

ಮನೆಯಲ್ಲಿಯೇ ಇರುವ ಕರ್ಪೂರದಿಂದ ನಾವು ಅದರ ಪ್ರಯೋಜನವನ್ನು ಪಡೆಯಬಹುದು. ಹೌದು ಕರ್ಪೂರದಲ್ಲಿ ನಮಗೆ ಗೊತ್ತಿರದ ಹಲವಾರು ಔಷಧೀಯ ಗುಣಗಳಿವೆ. ಇದು ಬ್ಯಾಕ್ಟಿರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿದೆ. ನೈಸರ್ಗಿಕ ಕರ್ಪೂರವು ದೇಹದ ಅನೇಕ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಹಿಂದೂ ಧರ್ಮದಲ್ಲಿ ಕರ್ಪೂರವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದ ನಂಬಿಕೆಗಳ ಪ್ರಕಾರ, ಈ ಕರ್ಪೂರವು ನಿಮ್ಮ ಅನೇಕ ಸಮಸ್ಯೆಗಳನ್ನು ಕ್ಷಣಮಾತ್ರದಲ್ಲಿ ನಿವಾರಿಸುತ್ತದೆ. ಇದು ದೈನಂದಿನ ದಿನಚರಿಯಲ್ಲಿ ಬಳಸಬಹುದಾದ ಉಪಯುಕ್ತ ಸಾಧನವಾಗಿದೆ. ಅದರ ಸಹಾಯದಿಂದ ನೀವು ನಿಮ್ಮ ಜೀವನವನ್ನು ಬದಲಾಯಿಸಬಹುದು.

ಮುಖ್ಯವಾಗಿ ಕರ್ಪೂರವನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನ ನೋಡಿದರೆ, ಅದನ್ನ ಮರದ ಮೇಣದಿಂದ ತಯಾರಿಸಲಾಗುತ್ತದೆ. ಅದರಲ್ಲೂ ಒಂದು ವಿಶೇಷತೆ ಇದೆ, ಕರ್ಪೂರದ ಮೇಣವನ್ನು ನೀಡುವಂತಹ ಮರಗಳಿಗೆ 50 ವರ್ಷವಾಗಿದ್ದರೆ ಮಾತ್ರ ಅದು ಮೇಣವನ್ನು ನೀಡುತ್ತದೆ ಮತ್ತು ಕರ್ಪೂರವನ್ನು ತಯಾರಿಸಲು ಸಾಧ್ಯ. ಅಂದರೆ ಸಿನ್ನಮೊನುನ್ ಕ್ಯಾಂಫೋರಾ (Cinnamonun camphora) ಎಂಬ ಮರದ ತೊಗಟೆಯಿಂದ ಕರ್ಪೂರವನ್ನು ಪಡೆಯಲಾಗುತ್ತದೆ. ಕೇವಲ 50 ವರ್ಷಗಳಷ್ಟು ಹಳೆಯದಾದ ಮರಗಳು ಮೇಣದಂಥ ವಸ್ತುವನ್ನು ಉತ್ಪಾದಿಸುತ್ತವೆ, ಇದನ್ನು ಕರ್ಪೂರದ ಎಣ್ಣೆಯಾಗಿ ಬಳಸಲಾಗುತ್ತದೆ. ಮರದ ಕಾಂಡಗಳಿಂದ ಕರ್ಪೂರದ ಎಣ್ಣೆಯನ್ನು ಹೊರತೆಗೆಯಲು ಹಬೆಯ ಭಟ್ಟಿ ಇಳಿಸುವ ಪ್ರಕ್ರಿಯೆಯನ್ನು ಬಳಸಲಾಗುತ್ತದೆ. ಕರ್ಪೂರದ ಮರ ಜಪಾನ್‌ನ ಹಿರೋಷಿಮಾ ಪ್ರಾಂತದ ಮೂಲದ್ದಾಗಿದೆ ಎಂದು ಹೇಳಲಾಗುತ್ತದೆ.

ಯಾವ ಸಮಸ್ಯೆಗಳನ್ನು ನಿವಾರಿಸಲು ಕರ್ಪೂರವನ್ನು ಬಳಸಬಹುದು ಎಂಬುದನ್ನು ಇಲ್ಲಿ ತಿಳಿಯಿರಿ :

• ಯಾವುದೇ ಕಾರಣದಿಂದ ನಿಮಗೆ ಸುಟ್ಟು ಗಾಯವಾದರೆ, ಕರ್ಪೂರದ ಪೇಸ್ಟ್ ಅನ್ನು ಅನ್ವಯಿಸುವುದು ನಿಮಗೆ ಪ್ರಯೋಜನಕಾರಿಯಾಗಿದೆ. ಸುಟ್ಟ ಗಾಯವನ್ನು ಗುಣಪಡಿಸಲು ನೀವು ತಯಾರಿಸಿದ ಕರ್ಪೂರ ಪೇಸ್ಟ್ ಅಥವಾ ಕೆನೆ ಬಳಸಬಹುದು. ಇದು ನಂಜುನಿರೋಧಕ. ಇದಕ್ಕೆ ಕರ್ಪೂರವನ್ನು ಅರೆದು ಅದಕ್ಕೆ ಜೇನುತುಪ್ಪ ಬೆರೆಸಬೇಕು. ನಂತರ ಅದನ್ನು ನಿಮ್ಮ ಗಾಯದ ಮೇಲೆ ಹಚ್ಚಿ, ಮೊದಲು ಅದು ನಿಮ್ಮ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ ಮತ್ತು ನಂತರ ಗಾಯವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

• ಕರ್ಪೂರದ ಎಣ್ಣೆಯು ಚರ್ಮದ ರಕ್ತ ಪರಿಚಲನೆಯನ್ನು ಸರಿಯಾಗಿಡುತ್ತದೆ. ಉರಿಯೂತ, ಮೊಡವೆ ಮತ್ತು ಎಣ್ಣೆಯುಕ್ತ ಚರ್ಮದ ಚಿಕಿತ್ಸೆಯಲ್ಲಿ ಇದನ್ನು ಬಳಸಲಾಗುತ್ತದೆ. ಸಂಧಿವಾತ ನೋವಿನಿಂದ ಪರಿಹಾರ ಪಡೆಯಲು ಕರ್ಪೂರ ಮಿಶ್ರಿತ ಮುಲಾಮುವನ್ನು ಬಳಸಲಾಗುತ್ತದೆ. ಕುತ್ತಿಗೆ ನೋವಿನ ಮೇಲೆ ಕರ್ಪೂರ ಇರುವ ಮುಲಾಮು ಹಚ್ಚುವುದರಿಂದ ಪರಿಹಾರ ಸಿಗುತ್ತದೆ. ಕಫದಿಂದಾಗಿ ಎದೆಯ ಬಿಗಿತಕ್ಕೆ ಕರ್ಪೂರದ ಎಣ್ಣೆಯನ್ನು ಉಜ್ಜಿದರೆ ಪರಿಹಾರ ದೊರೆಯುತ್ತದೆ.

• ಬೇಸಿಗೆಯಲ್ಲಿ ಯಾರಿಗಾದರೂ ತಲೆನೋವಿನ ಸಮಸ್ಯೆ ಇದ್ದರೆ, ಶುಂಠಿ, ಅರ್ಜುನ ತೊಗಟೆ ಮತ್ತು ಬಿಳಿ ಚಂದನದ ಪೇಸ್ಟ್ ಅನ್ನು ಕರ್ಪೂರದೊಂದಿಗೆ ಬೆರೆಸಿ ಹಚ್ಚುವುದರಿಂದ ತಲೆನೋವು ನಿವಾರಣೆಯಾಗುತ್ತದೆ.

• ನೆಗಡಿ ಮತ್ತು ಜ್ವರದ ಸಂದರ್ಭದಲ್ಲಿ ಬಿಸಿನೀರಿನಲ್ಲಿ ಕರ್ಪೂರವನ್ನು ಸೇರಿಸಿ ಹಬೆ ತೆಗೆದುಕೊಂಡರೆ ತತ್‌ಕ್ಷಣ ಶಮನವಾಗುತ್ತದೆ. ಕೆಮ್ಮಿನ ಸಂದರ್ಭದಲ್ಲಿ ಕರ್ಪೂರವನ್ನು ಸಾಸಿವೆ ಅಥವಾ ಎಳ್ಳೆಣ್ಣೆಯೊಂದಿಗೆ ಬೆರೆಸಿ ಬೆನ್ನು ಮತ್ತು ಎದೆಯನ್ನು ಹಗುರವಾದ ಕೈಗಳಿಂದ ಮಸಾಜ್ ಮಾಡುವುದರಿಂದ ಪರಿಹಾರ ಸಿಗುತ್ತದೆ.

• ಸ್ವಲ್ಪ ಕರ್ಪೂರವನ್ನು ತೆಗೆದುಕೊಂಡು ಅದನ್ನು ಪುಡಿಮಾಡಿ. ಅದರಲ್ಲಿ ಎರಡು ಚಮಚ ಲ್ಯಾವೆಂಡರ್ ಎಣ್ಣೆಯನ್ನು ಬೆರೆಸಿ ಸ್ಪ್ರೇ ಬಾಟಲಿಗೆ ಹಾಕಿ ಮನೆಯಲ್ಲಿ ಉದುರಿಸಿದರೆ ಮನೆ ಪರಿಮಳದಿಂದ ಕೂಡಿರುತ್ತದೆ. ಇದು ರೂಮ್ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ.

• ಚರ್ಮದ ತುರಿಕೆ ಮತ್ತು ಉರಿಯುವಿಕೆಗೆ ಒಂದು ಚಮಚ ಕೊಬ್ಬರಿ ಎಣ್ಣೆಯಲ್ಲಿ ಒಂದು ಚಮಚ ಕರ್ಪೂರವನ್ನು ಬೆರೆಸಿ ಲೇಪಿಸಿ. ಚಳಿಗಾಲದಲ್ಲಿ ಬಿರುಕು ಬಿಟ್ಟ ಹಿಮ್ಮಡಿಗಳಿಗೆ ಕರ್ಪೂರ ಅತ್ಯುತ್ತಮ ಪರಿಹಾರವೆಂದು ಪರಿಗಣಿಸಲಾಗಿದೆ.

• ಕೊಂಚ ಕರ್ಪೂರದ ಬಿಲ್ಲೆಗಳನ್ನು ನುಣ್ಣಗೆ ಪುಡಿಮಾಡಿ ಕೊಂಚ ನೀರು ಬೆರೆಸಿ ನಯವಾದ ಲೇಪ ತಯಾರಿಸಿ. ಈ ಲೇಪವನ್ನು ತೆಳ್ಳಗೆ ಕೆಂಪಗಾಗಿರುವ ಚರ್ಮದ ಮೇಲೆ ಹಚ್ಚಿ ಒಣಗಲು ಬಿಡಿ. ರಾತ್ರಿ ಮಲಗುವ ಮುನ್ನ ಹಚ್ಚಿ ಬೆಳಗ್ಗೆ ಉಪ್ಪುನೀರಿನಿಂದ ತೊಳೆದುಕೊಳ್ಳಿ. ಒಂದೆರಡು ದಿನಗಳಲ್ಲಿಯೇ ಉರಿ ಮತ್ತು ಗುಳ್ಳೆಗಳು ಇಲ್ಲವಾಗುತ್ತವೆ.

• ಕರ್ಪೂರದ ತೈಲ ಅತಿ ಪ್ರಬಲವಾದ ಕಾರಣ ಇವನ್ನು ನೇರವಾಗಿ ಹಚ್ಚುವ ಬದಲು ನಿಮ್ಮ ನಿತ್ಯದ ಬಳಕೆಯ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ. ಒಂದು ಪ್ರಮಾಣದ ಕರ್ಪೂರದ ತೈಲಕ್ಕೆ ಹತ್ತು ಪ್ರಮಾಣದ ಕೊಬ್ಬರಿ ಎಣ್ಣೆ ಬೆರೆಸಿ. ಈ ಮಿಶ್ರಣವನ್ನು ನಿಮ್ಮ ನಿತ್ಯದ ಎಣ್ಣೆಯ ರೂಪದಲ್ಲಿ ಬಳಸುತ್ತಾ ಬನ್ನಿ. ರಾತ್ರಿ ಮಲಗುವ ಮುನ್ನವೂ ತಲೆಗೆ ಮಸಾಜ್ ಮಾಡಿಕೊಂಡು ಹಚ್ಚಿ ಮರುದಿನ ಬೆಳಿಗ್ಗೆ ತಲೆಸ್ನಾನ ಮಾಡಿ. ಇದು ಕೂದಲ ಬುಡಗಳಿಗೆ ಪ್ರಚೋದನೆ ನೀಡಿ ರಕ್ತ ಪರಿಚಲನೆ ಹೆಚ್ಚಿಸುವ ಮೂಲಕ ಕೂದಲ ಆರೋಗ್ಯವನ್ನು ವೃದ್ದಿಸುತ್ತದೆ ಹಾಗೂ ಕೂದಲ ಬೆಳವಣಿಗೆಯನ್ನೂ ಉತ್ತೇಜಿಸುತ್ತದೆ.

• ಪುಡಿ ಮಾಡಿದ ಕರ್ಪೂರದ ಕೆಲವು ಬಿಲ್ಲೆಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಮಲಗುವ ಮುನ್ನ ನೆತ್ತಿ ಮತ್ತು ಕೂದಲಿಗೆ ಚೆನ್ನಾಗಿ ಆವರಿಸುವಂತೆ ಹಚ್ಚಿಕೊಳ್ಳಿ ಮರುದಿನ ನಿಮ್ಮ ಕೂದಲನ್ನು ನಿಮ್ಮ ನಿತ್ಯದ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಏಕೆಂದರೆ ಕರ್ಪೂರ ಪುಡಿ ಪರೋಪಜೀವಿಗಳನ್ನು ಉಸಿರುಗಟ್ಟಿಸುತ್ತದೆ ಮತ್ತು ಈ ಮೂಲಕ ಅವುಗಳನ್ನು ಕೊಲ್ಲುತ್ತದೆ. ಸ್ನಾನದ ಬಳಿಕ ಚಿಕ್ಕ ಹಲ್ಲುಗಳಿರುವ ಬಾಚಣಿಗೆಯಿಂದ ಬಾಚಿಕೊಂಡು ಸತ್ತ ಹೇನುಗಳನ್ನೆಲ್ಲಾ ನಿವಾರಿಸಿ.

• ಉಗುರಿನಲ್ಲಿ ಫಂಗಸ್ ಸಮಸ್ಯೆಯಿದ್ದರೆ ಕರ್ಪೂರದಿಂದ ಪರಿಹಾರ ಸಿಗುತ್ತದೆ. ಸಮಸ್ಯೆಯಿರುವ ಸ್ಥಳದಲ್ಲಿ ಕರ್ಪೂರವನ್ನು ಹಚ್ಚಿಕೊಂಡರೆ ಬಹು ಬೇಗನೆ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

• ಕರ್ಪೂರದ ಎಣ್ಣೆಯ ಸುವಾಸನೆ ನಿದ್ದೆಯ ಸಮಸ್ಯೆ ಇರುವವರಿಗೆ ರಾಮಬಾಣ. ನೀವು ಕೆಲ ಹನಿ ಕರ್ಪೂರದ ಎಣ್ಣೆಯನ್ನು ತಲೆ ದಿಂಬಿಗೆ ಹಚ್ಚಿದರೆ ಒಳ್ಲೆಯ ನಿದ್ರೆ ಬರುತ್ತದೆ.

• ಬಿರುಕು ಬಿಟ್ಟ ಹಿಮ್ಮಡಿಗಳಿಗೆ ಚಿಕಿತ್ಸೆ ನೀಡಲು ನೀವು ಕರ್ಪೂರವನ್ನು ಸಹ ಬಳಸಬಹುದು. ಒಡೆದ ಹಿಮ್ಮಡಿಗಳು ಬ್ಯಾಕ್ಟಿರಿಯಾದ ಸೋಂಕಿನಿಂದ ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಸೋಂಕನ್ನು ಗುಣಪಡಿಸಲು ಚರ್ಮಕ್ಕೆ ಮಾಯಿಶ್ಚರೈಸರ್ ಅಗತ್ಯವಿದೆ. ಈ ಸಂದರ್ಭದಲ್ಲಿ ಕರ್ಪೂರವನ್ನು ಬಳಸಬಹುದು.

ಸದ್ಯ ಕರ್ಪೂರವನ್ನು ಕೇವಲ ಪೂಜೆಯಲ್ಲಿ ಮಾತ್ರವಲ್ಲದೇ ಹಲವಾರು ಔಷಧಿಗಳಿಗೆ ಕೂಡ ಬಳಕೆ ಮಾಡಲಾಗುತ್ತದೆ. ಇದನ್ನು ವೆಪೋರಬ್, ಮಲಾಮ್ ಮತ್ತು ಕೆಲವೊಂದು ತೈಲಗಳಲ್ಲಿ ಸಹ ಬಳಕೆ ಮಾಡಲಾಗುತ್ತದೆ. ಕರ್ಪೂರದಿಂದ ಸೌಂದರ್ಯ ಲಾಭಗಳು ಸಹ ಇದೆ. ಅಲ್ಲದೇ ಈ ಕರ್ಪೂರದ ಸುವಾಸನೆಯಿಂದ ಮನೆಗಳಿಗೆ ಕೀಟಗಳು ಬರದಂತೆ ತಡೆಯುತ್ತದೆ. ಒಟ್ಟಿನಲ್ಲಿ ಕರ್ಪೂರದಿಂದ ಹಲವಾರು ಪ್ರಯೋಜನ ಪಡೆಯಬಹುದಾಗಿದೆ.

Leave A Reply

Your email address will not be published.