ಕಾಂತಾರ ತಂಡದಲ್ಲಿ ನಟಿಸಿದವರಿಗೆ ಸಿಕ್ಕ ಸಂಭಾವನೆ ಕುರಿತು ಮಾಹಿತಿ ಬಿಚ್ಚಿಟ್ಟ ನಟ, ನಿರ್ದೇಶಕ ರಿಷಬ್‌ ಶೆಟ್ಟಿ!

‘ಕಾಂತಾರ’ ಎಲ್ಲೆಡೆ ಸಂಚಲನ ಮೂಡಿಸಿದ ಚಿತ್ರ. ಪ್ರತಿಯೊಬ್ಬರ ಬಾಯಲ್ಲೂ ಸಿನಿಮಾದ ಹಾಡಿನ ಗುಣಗಾನ. ತುಳುನಾಡ ಮಣ್ಣಿನ ಕತೆಯನ್ನಾಧರಿಸಿ, ಕಾಡಿನ ಕತೆಯನ್ನೊಳಗೊಂಡ ಅದ್ಭುತ ಚಿತ್ರ. ಸಾಕಷ್ಟು ಜನರು ವೀಕ್ಷಿಸಿ ಮೆಚ್ಚಿಕೊಂಡಂತಹ ಸಿನಿಮಾ ಕಾಂತಾರ. ಅಲ್ಲದೆ, ದಾಖಲೆಯನ್ನೂ ಬರೆದಿದ್ದು, ಈ ಚಿತ್ರ ಜನಮನದಲ್ಲಿ ಅಚ್ಚೊತ್ತಿದೆ. ಇದಿಷ್ಟೇ ಅಲ್ಲದೆ, ಈ ಸಿನಿಮಾದ ಪ್ರೇರಣೆಯಿಂದ ಇತ್ತೀಚೆಗೆ ಹೋಂಸ್ಟೇ ಹಾಗೂ ಡಾಬಾ ಗಳಿಗೆ ಮಾಲಿಕರು ಕಾಂತಾರ ಹೆಸರಿಟ್ಟಿದ್ದಾರೆ. ಸದ್ಯ ರಿಷಬ್ ಶೆಟ್ಟಿಗೆ ಚಿತ್ರದ ಯಶಸ್ಸಿನಿಂದ ಎಲ್ಲೆಡೆ ಗೌರವ ಲಭಿಸಿದ್ದು, ಸಾಲು ಸಾಲು ಸಿನಿಮಾ ಆಫರ್ ಬರುತ್ತಿದೆ. ಆದರೆ ಶೆಟ್ರು ‘ ಕಾಂತಾರ -2’ ತೆರೆ ಮೇಲೆ ತರಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇದೀಗ ರಿಷಬ್ ಕಾಂತಾರ ತಂಡದಲ್ಲಿ ನಟಿಸಿದವರಿಗೆ ಸಿಕ್ಕ ಸಂಭಾವನೆ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ.

‘ಕಾಂತಾರ’ ಯಶಸ್ಸಿನಿಂದ ಈ ಚಿತ್ರದ ಕಲಾವಿದರ ಖ್ಯಾತಿ ಹೆಚ್ಚಿದೆ. ಬಾಲಿವುಡ್​, ಟಾಲಿವುಡ್​ನಿಂದ ರಿಷಬ್ ಶೆಟ್ಟಿಗೆ ಅವಕಾಶಗಳು ಬರುತ್ತಿವೆ. ಹಾಗೇ ನಟಿ ಸಪ್ತಮಿ ಗೌಡ ಅವರಿಗೂ ಬಾಲಿವುಡ್​ನಿಂದ ಆಫರ್ ಅರಸಿ ಬಂದಿದ್ದು, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಮುಂದಿನ ಚಿತ್ರಕ್ಕೆ ಸಪ್ತಮಿ ನಾಯಕಿ ಆಗಿದ್ದಾರೆ.

ಈ ಸಿನಿಮಾ ಕೇವಲ 15 ಕೋಟಿ ರೂ. ಬಜೆಟ್​ನಲ್ಲಿ ಸಿದ್ಧಗೊಂಡಿತ್ತು. ಆದರೆ ಈ ಚಿತ್ರ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಹೊಂಬಾಳೆ ಫಿಲ್ಮ್ಸ್​ನ ವಿಜಯ್ ಕಿರಗಂದೂರು ಅವರು ಚಿತ್ರದಿಂದ ಬಂದ ಹಣವನ್ನು ‘ಕಾಂತಾರ’ ಗಾಗಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಹಂಚಿದ್ದಾರೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

ಅಲ್ಲದೆ, ಹೊಂಬಾಳೆ ಫಿಲ್ಮ್ಸ್​​ನವರು ಎಷ್ಟು ಬಾರಿ ಪೇಮೆಂಟ್ ನೀಡಿದ್ದಾರೆ ಎಂದೂ ಹೇಳಿದ್ದಾರೆ. ಒಂದು ಬಾರಿ ಪೇಮೆಂಟಾ ನೀಡಿದ್ದರು. ಬಳಿಕ ಮತ್ತೆ ಎರಡನೇ ಬಾರಿ ಪೇಮೆಂಟ್ ನೀಡಿದ್ದಾರಂತೆ. ಈ ಬಗ್ಗೆ ರಿಷಬ್ ಮಾಹಿತಿ ನೀಡಿದ್ದಾರೆ. “ಕಾಂತಾರ ಗೆದ್ದ ನಂತರ ಹೊಂಬಾಳೆ ಎಲ್ಲರಿಗೂ ಮತ್ತೊಮ್ಮೆ ಪೇಮೆಂಟ್​ ಮಾಡಿದೆ. ಅದು ಅವರ ದೊಡ್ಡತನ”ಎಂದು ರಿಷಬ್ ಹೇಳಿದ್ದಾರೆ. ಇದರಿಂದ ಚಿತ್ರತಂಡದಲ್ಲಿ ಕೆಲಸ ಮಾಡಿದವರಿಗೆ ಎರಡು ಸಲ ಪೇಮೆಂಟ್ ಸಿಕ್ಕಿದೆ.

ಕಾಂತಾರ ಸಿನಿಮಾ ರಿಲೀಸ್​ಗೂ ಮುನ್ನ ಹೆಚ್ಚು ಪ್ರಚಾರ ಮಾಡಿರಲಿಲ್ಲ. ಆದರೂ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಚಿತ್ರ ಪ್ಯಾನ್ ಇಂಡಿಯಾ ಮಟ್ಟಕ್ಕೆ ತಲುಪಲು ವಿಜಯ್ ಕಿರಂಗದೂರು ಅವರು ಕೂಡ ಕಾರಣ. ಅವರಿಗೆ ನಮ್ಮ ಸಿನಿಮಾವನ್ನು ಹೇಗೆ ತಲುಪಿಸಬೇಕು ಎನ್ನುವ ಕ್ಲ್ಯಾರಿಟಿ ಇತ್ತು. ಈ ಕ್ಲ್ಯಾರಿಟಿ ಇದ್ದಿದ್ದರಿಂದಲೇ ಯಶಸ್ಸು ಸಿಕ್ಕಿತು ಎಂದಿದ್ದಾರೆ ರಿಷಬ್ ಶೆಟ್ಟಿ. ಕಾಂತಾರ ಆಸ್ಕರ್ ಪ್ರಶಸ್ತಿಗೂ ನಾಮಿನೇಟ್ ಆಗಿತ್ತು. ಆದರೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಕಾರಣ ಚಿತ್ರದ ಪ್ರಚಾರ ಹೆಚ್ಚೇನೂ ಮಾಡಿರಲಿಲ್ಲ ಎಂದು ಕಿರಂಗದೂರು ಅವರು ತಿಳಿಸಿದ್ದರು. ಇನ್ನು ‘ಕಾಂತಾರ-2’ ವಿಭಿನ್ನ ರೀತಿಯಲ್ಲಿ ಇರಲಿದ್ದು, ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತುರದಿಂದ ಕಾದುಕುಳಿತಿದ್ದಾರೆ.

Leave A Reply

Your email address will not be published.