ದರ್ಶನ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ |’D56′ ಚಿತ್ರದ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕ್ರಾಂತಿ’ ಸಿನಿಮಾ ಜನವರಿ 26 ರಂದು ತೆರೆ ಕಂಡು ಉತ್ತಮ ಪ್ರತಿಕ್ರಿಯೆ ಗಳಿಸಿದೆ. ಜನರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಅಭಿಮಾನಿಗಳಂತು ಕ್ರಾಂತಿ ಗುಂಗಿನಲ್ಲೇ ಇದ್ದಾರೆ. ಆದರೆ ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ತಮ್ಮ ಮುಂದಿನ ಚಿತ್ರದ ಬಗ್ಗೆ ಅಪ್ಡೇಟ್ ನೀಡಲಿದ್ದಾರೆ. ನಟ ದರ್ಶನ್ ಹುಟ್ಟುಹಬ್ಬಕ್ಕೆ ‘D56’ ಟೀಂನಿಂದ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಸಿಗಲಿದೆ. ಹುಟ್ಟುಹಬ್ಬದಂದು ಸಿನಿಮಾ ಟೈಟಲ್ ಅನೌನ್ಸ್ ಮಾಡುವುದಾಗಿ ನಿರ್ದೇಶಕ ತರುಣ್ ಸುಧೀರ್ ಸ್ಪೆಷಲ್ ಪೋಸ್ಟ್ ಮೂಲಕ ಕನ್ಫರ್ಮ್ ಮಾಡಿದ್ದು, ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ. ಇನ್ನು ಈ ಚಿತ್ರದಲ್ಲಿ ಯಾರೆಲ್ಲಾ ಬಣ್ಣ ಹಚ್ಚಿದ್ದಾರೆ? ಹಾಗೇ ಈ ಸಿನಿಮಾದ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿದೆ.

ಕಳೆದ ವರ್ಷದ ವರಮಹಾಲಕ್ಷ್ಮಿ ಹಬ್ಬದಂದು ರವಿಶಂಕರ್ ಗುರೂಜಿ ಆಶ್ರಮದಲ್ಲಿ ಪೂಜೆ ಸಲ್ಲಿಸಿ, D56 ಚಿತ್ರಕ್ಕೆ ಚಾಲನೆ ನೀಡಲಾಯಿತು.
ದರ್ಶನ್‌ 56ನೇ ಈ ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ರಾಧನಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಅದ್ಭುತ ಕಲಾವಿದರನ್ನು ಒಳಗೊಂಡ ಸಿನಿಮಾ ಆಗಿದ್ದು, ‘ರಾಬರ್ಟ್’ ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂತ್ರಜ್ಞರ ತಂಡ ಈ ಚಿತ್ರದಲ್ಲೂ ಕೆಲಸ ಮಾಡ್ತಿದೆ. ಹಾಗಾಗಿ ನಿರೀಕ್ಷೇ ಹೆಚ್ಚೇ ಇದೆ. ಸಿನಿಮಾದ 3 ಶೆಡ್ಯೂಲ್ ಶೂಟಿಂಗ್ ಮುಗಿದಿದೆ. ಈ ವರ್ಷಾಂತ್ಯಕ್ಕೆ ಸಿನಿಮಾ ತೆರೆ ಮೇಲೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.

ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದಲ್ಲಿ ತೆಲುಗಿನ ಜಗಪತಿ ಬಾಬು ಅವರು ವಿಲನ್ ನಾನಭಾಯ್ ಆಗಿ ಕಾಣಿಸಿಕೊಂಡಿದ್ದರು. ಸದ್ಯ ಈ ಸಿನಿಮಾದಲ್ಲೂ ನಟಿಸುತ್ತಿದ್ದು, ಜಗಪತಿ ಬಾಬು ಅವರು ಖಡಕ್ ರೋಲ್‌ನೊಂದಿಗೆ ಅಬ್ಬರಿಸಲಿದ್ದಾರೆ. ಕಾಮಿಡಿ ಅಧ್ಯಕ್ಷ ಶರಣ್ ಕೂಡ ‘D56’ ಚಿತ್ರದಲ್ಲಿ ನಟಿಸುತ್ತಿದ್ದು, ಶರಣ್ ತಂಗಿ ಶೃತಿ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಣ್ಣ ತಂಗಿ ಇಬ್ಬರು ದರ್ಶನ್ ಸಿನಿಮಾದಲ್ಲಿ ನಟಿಸುತ್ತಿರುವುದು ಇದೇ ಮೊದಲು. ಇನ್ನು ನಟ, ನಿರ್ದೇಶಕ ಕುಮಾರ್ ಗೋವಿಂದ್ ಕೂಡ ‘D56’ ತಂಡದಲ್ಲಿದ್ದಾರೆ.

‘ರಾಬರ್ಟ್’ ಚಿತ್ರವನ್ನು ಅದ್ಭುತವಾಗಿ ಸೆರೆಹಿಡಿದು ಭೇಷ್ ಎನ್ನಿಸಿಕೊಂಡಿದ್ದ ಸುಧಾಕರ್ ಈ ಚಿತ್ರದ ಛಾಯಾಗ್ರಹಣವನ್ನು ಮಾಡಲಿದ್ದಾರೆ. ಹಂಪಿಯಲ್ಲಿ ನಡೆದ ಕೆಲ ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಕಥೆ ಹೆಣೆಯಲಾಗಿದ್ದು, 70ರ ದಶಕದ ಕಥೆಯನ್ನು ಚಿತ್ರದಲ್ಲಿ ತೋರಿಸಲಾಗುತ್ತಿದೆ ಎನ್ನಲಾಗಿದೆ. ಈ ಚಿತ್ರವನ್ನು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸುತ್ತಿದ್ದು, ತರುಣ್‌ ಸುಧೀರ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಒಟ್ಟಾರೆ ‘D56’ ಸಿನಿಮಾ ಭಾರೀ ನಿರೀಕ್ಷೆಯಲ್ಲಿದ್ದು, ದರ್ಶನ್ ಹುಟ್ಟುಹಬ್ಬದ ದಿನ ಪೋಸ್ಟರ್‌ನಲ್ಲಿ ಟೈಟಲ್ ಜೊತೆಗೆ ದರ್ಶನ್ ಲುಕ್ ರಿವೀಲ್ ಆಗಲಿದೆ. ಸದ್ಯ ಪೋಸ್ಟರ್ ನಲ್ಲಿ ಕುರಿಗಳ ಹಿಂಡನ್ನು ರಕ್ಷಿಸುವ ನಾಯಿಯ ಚಿತ್ರವನ್ನು ಹಾಕಿ ‘ಹಿಂದಿರೋವ್ರಿಗೆ ದಾರಿ ಮುಂದಿರೋವ್ನದ್ದು ಜವಾಬ್ದಾರಿ’ ಅಂತ ಬರೆದು ಚಿತ್ರತಂಡ ಕುತೂಹಲ ಮೂಡಿಸಿದೆ.

Leave A Reply

Your email address will not be published.