ಕೋರ್ಟ್‌ ಆವರಣಕ್ಕೆ ನುಗ್ಗಿದ ಚಿರತೆ ! ಆರು ಮಂದಿ ಮೇಲೆ ದಾಳಿ, ಇಬ್ಬರ ಸ್ಥಿತಿ ಗಂಭೀರ!

ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲಾ ನ್ಯಾಯಾಲಯದ ಆವರಣಕ್ಕೆ ನುಗ್ಗಿದ ಚಿರತೆ ಸಿಕ್ಕ ಸಿಕ್ಕವರ ಮೇಲೆಲ್ಲಾ ದಾಳಿ ನಡೆಸಿದೆ. ಈ ಪರಿಣಾಮ ಹಲವರು ಗಾಯಗೊಂಡಿದ್ದು ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಚಿರತೆ ಸೆರೆಯಲ್ಲಿ ಯಶಸ್ವಿಯಾಗಿದ್ದಾರೆ.

ಹೌದು ಗಾಜಿಯಾಬಾದ್​ ಕೋರ್ಟ್​ನ ಆವರಣಕ್ಕೆ ನುಗ್ಗಿದ ಚಿರತೆಯೊಂದು 6 ಮಂದಿ ಮೇಲೆ ದಾಳಿ ನಡೆಸಿದ್ದು, ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತರ ನಾಲ್ವರು ಗಾಯಗೊಂಡವರನ್ನು ಪ್ರಥಮ ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದೆ.

ಚಿರತೆ ಹಿಡಿಯಲು ಗಾಜಿಯಾಬಾದ್ ಮಾತ್ರವಲ್ಲದೆ ಮೀರತ್ ನಿಂದ ಅರಣ್ಯ ಇಲಾಖೆ ತಂಡವನ್ನು ಕರೆಸಲಾಗಿದ್ದು ಸುಮಾರು 5 ಗಂಟೆಗಳ ಪರಿಶ್ರಮದ ಬಳಿಕ ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಎಡಿಎಂ ಸಿಟಿ ಗಾಜಿಯಾಬಾದ್, ವಿಪಿನ್ ಕುಮಾರ್, ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುವುದು ಇದರಿಂದ ಚಿರತೆ ಯಾವ ಸಮಯದಲ್ಲಿ ಮತ್ತು ಎಲ್ಲಿಂದ ನ್ಯಾಯಾಲಯದ ಆವರಣಕ್ಕೆ ಪ್ರವೇಶಿಸಿತು ಎಂದು ತಿಳಿಯಬಹುದು ಎಂದು ತಿಳಿಸಲಾಗಿದೆ.

ಮಾಹಿತಿ ಪ್ರಕಾರ ಬುಧವಾರ ಫೆಬ್ರವರಿ 8 ಸಂಜೆ 4 ಗಂಟೆ ಸುಮಾರಿಗೆ ನ್ಯಾಯಾಲಯದ ಆವರಣದಲ್ಲಿ ಚಿರತೆ ಪತ್ತೆಯಾಗಿದೆ ಎಂದು ಎಡಿಎಂ ವಿಪಿನ್ ಕುಮಾರ್ ತಿಳಿಸಿದ್ದಾರೆ. ಈ ವೇಳೆ ಚಿರತೆ 6 ಮಂದಿಯನ್ನು ಗಾಯಗೊಳಿಸಿದೆ.

ಗಾಜಿಯಾಬಾದ್ ಅರಣ್ಯ ಇಲಾಖೆ ತಂಡವು ತಕ್ಷಣ ಸ್ಥಳಕ್ಕೆ ತಲುಪಿದೆ ಆದರೆ ಟ್ರ್ಯಾಂಕ್ವಿಲೈಜರ್ ಗನ್ ಲಭ್ಯವಿಲ್ಲದ ಕಾರಣ ಮೀರತ್‌ನಿಂದ ಅರಣ್ಯ ಇಲಾಖೆ ತಂಡವನ್ನು ಕರೆತರಲಾಯಿತು ಎಂದು ಎಡಿಎಂ ವಿಪಿನ್ ಕುಮಾರ್ ತಿಳಿಸಿದ್ದಾರೆ.

ಸದ್ಯ ಚಿರತೆಯನ್ನು ಸಹರಾನ್‌ಪುರದ ಅರಣ್ಯದಲ್ಲಿ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಜನರ ಆತಂಕ ಕೊಂಚ ಮಟ್ಟಿಗೆ ನಿರಾಳವಾಗಿದೆ.

Leave A Reply

Your email address will not be published.