‘ನನ್ನ ಬಗ್ಗೆ ಪ್ರೀತಿ, ಅಭಿಮಾನ ಇಟ್ಟಿರುವ ನೀವು ನನ್ನೀ ಕೋರಿಕೆಯನ್ನು ನಡೆಸಿಕೊಡಿ’ ಎಂದು ಫ್ಯಾನ್ಸ್‌ ಬಳಿ ದರ್ಶನ್‌ ಮನವಿ | ಅರೇ! ದರ್ಶನ್ ಹೀಗೆ ಹೇಳಿದಾದ್ರೂ ಯಾಕೆ ಗೊತ್ತಾ?

ಕರ್ನಾಟಕದಲ್ಲಿ ನಟ ದರ್ಶನ್ ಹೆಸರು ಕೇಳಿದ್ರೆನೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿದು ಬಿಡ್ತಾರೆ. ಆ ಕೂಡಲೇ ಡಿ ಬಾಸ್ ಅನ್ನೋ ಕೂಗು ಮುಗಿಲುಮುಟ್ಟುತ್ತೆ. ಅವರಿಗಾಗಿ ಏನು ಬೇಕಾದ್ರೂ ಮಾಡಲು ಆ ಅಭಿಮಾನಿ ದೇವರುಗಳು ಮುಂದಾಗ್ತಾರೆ. ಆದರೀಗ ನಟ ದರ್ಶನ್ ಅವರೇ ‘ನನ್ನ ಬಗ್ಗೆ ಪ್ರೀತಿ, ಅಭಿಮಾನ ಇಟ್ಟಿರುವ ನೀವು ನನ್ನ ಕೋರಿಕೆಯನ್ನು ನಡೆಸಿಕೊಡಿ’ ಎಂದು ಫ್ಯಾನ್ಸ್‌ ಬಳಿ ಮನವಿ ಮಾಡಿದ್ದಾರೆ. ಕೇಳಿದ್ರೆ ಜೀವ ಬೇಕಾದ್ರೂ ಕೊಡೋ ಫ್ಯಾನ್ಸ್ ಇರುವಾಗ ದರ್ಶನ್ ಅವರಲ್ಲಿ ಮನವಿ ಮಾಡಿದ್ದಾದ್ರೂ ಏನು ಗೊತ್ತಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಹುಟ್ಟುಹಬ್ಬಕ್ಕೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಇದೆ. ಹೌದು ಫೆಬ್ರವರಿ 16ಕ್ಕೆ ದರ್ಶನ್‌ 46ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಸಾಗರೋಪಾದಿಯಲ್ಲಿ ಇರುವ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳುವ ಆಸೆಯಿಂದ ಪ್ರತಿ ವರ್ಷ ಈ ವಿಶೇಷ ದಿನಕ್ಕಾಗಿ ಕಾಯುತ್ತಾರೆ. ಕಳೆದ ಮೂರು ವರ್ಷಗಳಿಂದ ಕೊರೊನಾ ಲಾಕ್‌ಡೌನ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ನಿಧನದಿಂದ ದರ್ಶನ್‌ ಹಿನ್ನೆಲೆಯಲ್ಲಿ ದರ್ಶನ್ ತಮ್ಮ ಫ್ಯಾನ್ಸ್‌ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ.

ದೇವರೆಂದೇ ಆರಾಧಿಸುವ ದರ್ಶನ್ ಅಭಿಮಾನಿಗಳು ಮೂರು ವರ್ಷಗಳ ಬಳಿಕ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ತಮ್ಮ ಪ್ರೀತಿಯ ನಟನ ಬರ್ತ್ ಡೇ ಸೆಲಬ್ರೇಟ್ ಮಾಡೋಕೆ ಭರದಿಂದ ತಯಾರಿ ನಡೆಸುತ್ತಿದ್ದಾರೆ. ಜೊತೆಗೆ ವಿಶೇಷ ಡಿಪಿ ತಯಾರಿಸುತ್ತಿದ್ದಾರೆ. ಆದ್ರೆ ಇದೀಗ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಯಾಕೆಂದರೆ ಈ ಬಾರಿ ಕೂಡಾ ದರ್ಶನ್‌ ಅದ್ಧೂರಿ ಹುಟ್ಟುಹಬ್ಬ ಆಚರಣೆಗೆ ಬ್ರೇಕ್‌ ನೀಡಿದ್ದಾರೆ. ಹಾಗಾಗಿ ‘ನನ್ನ ಬಗ್ಗೆ ಪ್ರೀತಿ, ಅಭಿಮಾನ ಇಟ್ಟಿರುವ ನೀವು ನನ್ನ ಈ ಕೋರಿಕೆಯನ್ನು ನಡೆಸಿಕೊಡಿ’ ಎಂದು ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ.

ಇದರ ಬಗ್ಗೆ ಮಾತನಾಡಿದ ಅವರು ‘ಪ್ರೀತಿಯ ಅಭಿಮಾನಿಗಳಲ್ಲಿ ನಿಮ್ಮ ದರ್ಶನ್‌ ತೂಗುದೀಪ ಮಾಡುವ ವಿನಂತಿ. ಬ್ಯಾನರ್‌ , ಕೇಕ್‌, ಹಾಗೂ ಹಾರಗಳನ್ನು ದಯಮಾಡಿ ತರಬೇಡಿ. ಅದೇ ಹಣದಲ್ಲಿ ಈ ವರ್ಷ ಕೂಡಾ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರೆ ದವಸ ಧಾನ್ಯಗಳನ್ನು ದಾನ ನೀಡಿ. ಅದನ್ನು ಒಗ್ಗೂಡಿಸಿ ಸೇರಿಸಬೇಕಾದ ಅನಾಥಾಶ್ರಮ, ವೃದ್ದಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು’ ಎಂದು ಹೇಳಿದ್ದಾರೆ.

ಅಲ್ಲದೆ ‘ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕ-ಪಕ್ಕದ ನಿವಾಸಿಗಳಿಗೆ ನಿಮ್ಮಿಂದ ತೊಂದರೆ ಆಗುವುದು, ಪಟಾಕಿ ಹೊಡೆಯುವುದು, ಕಾಂಪೌಂಡ್‌ ಹತ್ತುವುದು, ಹೂವು ಕುಂಡಗಳನ್ನು ಬೀಳಿಸುವುದು ಹಾಗೂ ಅವರ ಸ್ವತ್ವುಗಳಿಗೆ ಹಾನಿ ಮಾಡುವುದು, ಇಂತಹ ಅನುಚಿತ ವರ್ತನೆ ನಡೆಯಬಾರದು. ನನ್ನ ಬಗ್ಗೆ ಇಷ್ಟೆಲ್ಲಾ ಪ್ರೀತಿ ಅಭಿಮಾನ ಇಟ್ಟಿರುವ ನೀವೆಲ್ಲಾ ಈ ನನ್ನ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ. ಹಾಗೂ ಸಂಘದ ಕಾರ್ಯಕರ್ತರು ಮತ್ತು ಪೊಲೀಸ್‌ ಸಿಬ್ಬಂದಿ ವರ್ಗದವರಿಗೆ ಸಹಕರಿಸಬೇಕೆಂದು ವಿನಂತಿಸುವುದಾಗಿ’ ದರ್ಶನ್‌ ಮನವಿ ಮಾಡಿದ್ದಾರೆ.

ಅಲ್ಲದೆ ಈ ಬಾರಿಯ ಹುಟ್ಟುಹಬ್ಬದಲ್ಲಿ ದರ್ಶನ್‌ ಅಭಿಮಾನಿಗಳು, ಅವರ ಹೊಸ ಸಿನಿಮಾ ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ. ಸದ್ಯ ದರ್ಶನ್ ಅವರ 56ನೇ ಚಿತ್ರಕ್ಕೆ ‘ಚೌಡಯ್ಯ’ ಎಂಬ ಹೆಸರನ್ನು ಫೈನಲ್‌ ಮಾಡಲಾಗಿದೆ ಎಂಬ ಹೊಸ ಸುದ್ದಿ ಹರಿದಾಡುತ್ತಿದೆ. ಕೆಲವು ದಿನಗಳ ಹಿಂದೆ ಈ ಚಿತ್ರಕ್ಕೆ ಸ್ವಲ್ಪ ಭಾಗದ ಚಿತ್ರೀಕರಣ ಕೂಡಾ ನಡೆದಿತ್ತು. ಕಳೆದ ವರ್ಷ ದರ್ಶನ್ ಹುಟ್ಟುಹಬ್ಬದಂದು ಈ ಚಿತ್ರದ ಥೀಮ್‌ ಪೋಸ್ಟರ್‌ ರಿಲೀಸ್‌ ಆಗಿತ್ತು. ಕುರಿಗಳ ಹಿಂಡಿನ ಮುಂದೆ ನಿಂತಿರುವ ಶ್ವಾನದ ಪೋಸ್ಟರ್‌ ಅದಾಗಿದ್ದು ”ಹಿಂದಿರೋವ್ರಿಗೆ ದಾರಿ ಮುಂದಿರೋವ್ನದ್ದು ಜವಾಬ್ದಾರಿ” ಎಂಬ ಬರಹ ಕುತೂಹಲ ಕೆರಳಿಸಿತ್ತು. ಇದೀಗ ಈ ಹುಟ್ಟುಹಬ್ಬದಲ್ಲಿ, ದರ್ಶನ್ ಅವರು ತಪ್ಪದೆ ಹೊಸ ಸಿನಿಮಾ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ.

Leave A Reply

Your email address will not be published.