ನಿಂತಿಲ್ಲ ದೈವದ ಅನುಕರಣೆ | ʼಕಾಂತಾರʼ ಪಂಜುರ್ಲಿ ದೈವ ಅವಹೇಳನ ಮಾಡಿದ ಸಾಂತಾಕ್ಲಾಸ್‌ , ವೀಡಿಯೋ ಇಲ್ಲಿದೆ

ಕನ್ನಡದ ಹಿಟ್ ಸಿನಿಮಾದಲ್ಲಿ ಕಾಂತಾರ ತನ್ನ ಪಾರುಪತ್ಯ ಕಾಯ್ದು ಕೊಂಡಿದೆ. ತುಳುನಾಡಿನ ಆಚರಣೆ, ಸಂಸ್ಕೃತಿಯನ್ನು ಬಿಂಬಿಸುವ ಈ ಸಿನಿಮಾದಲ್ಲಿ ಪಂಜುರ್ಲಿ ದೈವದ ಪಾತ್ರವನ್ನು ರಿಷಬ್ ಶೆಟ್ಟಿ ಅವರು ತುಂಬಾ ಶ್ರದ್ಧೆಯಿಂದ ಜೊತೆಗೆ ನೋಡುಗರ ಮೈಮನ ರೋಮಾಂಚನ ಗೊಳಿಸುವಂತೆ ನಟಿಸಿದ್ದಾರೆ.

ಆದರೆ, ಈ ಸಿನಿಮಾ ಬಿಡುಗಡೆಯಾದ ಬಳಿಕ ಏಷ್ಟೋ ಮಂದಿ ದೈವದ ಪ್ರತಿರೂಪ ಎಂಬಂತೆ ರಿಷಬ್ ಶೆಟ್ಟಿ ಅವರ ಕಾಲು ಹಿಡಿಯಲು ಕೂಡ ಮುಂದಾಗಿದ್ದು ಅದನ್ನು ಅಷ್ಟೆ ನಯವಾಗಿ ಶೆಟ್ರು ತಿರಸ್ಕರಿಸಿದ್ದು ಕೂಡ ಇದೆ. ಆದರೆ, ಇದೀಗ,ಪಂಜುರ್ಲಿ ದೈವದ ಕೂಗು ನೋಡುಗರ ಪಾಲಿಗೆ ತಮಾಷೆಯ ವಿಷಯವಾಗಿ ಮಾರ್ಪಟ್ಟಿದೆಯಾ??? ಕಾಂತಾರ ನೋಡಿದ್ಮೇಲೆ ಏನ್ ಆಗ್ತಿದೆ ಈ ಜನರಿಗೆ ಎಂಬ ಪ್ರಶ್ನೆ ಭುಗಿಲೆದ್ದಿದೆ.

ಹೌದು!! ಇತ್ತೀಚಿಗೆ ಕಾಂತಾರ ಸಿನಿಮಾದಲ್ಲಿ ತೋರಿಸಲಾದ ದೈವದ ಕುರಿತು ಅವಹೇಳನಕಾರಿ ರೀಲ್ಸ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಡಲಾಗುತ್ತಿದೆ. ರಿಷಬ್‌ ಶೆಟ್ಟಿ ಅವರ ನಟನೆಯನ್ನು ಅನುಕರಣೆ ಮಾಡಿ ದೈವವನ್ನು ಅವಹೇಳನ ಮಾಡಲಾಗುತ್ತಿದೆ. ಇದೀಗ ಸಂತಾಕ್ಲಾಸ್‌ ವೇಷಧಾರಿಯೊಬ್ಬ ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್‌ ಅನುಕರಣೆ ಮಾಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ನೋಡುಗರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಂತಾರ ಸಿನಿಮಾದ ಹಾಡು ಎಷ್ಟು ಸಂಚಲನ ಮೂಡಿಸಿತ್ತೋ ಅಷ್ಟೆ ಮಟ್ಟಿಗೆ ದೈವದ ಕೂಗು ಕೂಡ ದೇಶದ್ಯಂತ ತನ್ನದೇ (Kantara Viral) ಟ್ರೆಂಡ್ ಕ್ರಿಯೇಟ್ ಮಾಡಿದೆ. ಈ ಒಂದು ಕೂಗು ಸಿನಿಮಾ ರಿಲೀಸ್ ಆದ ದಿನದಿಂದಲೂ ಹೆಚ್ಚು ವೈಬ್ ಕ್ರಿಯೆಟ್ ಮಾಡಿದ್ದು ಸುಳ್ಳಲ್ಲ. ಸಿನಿಮಾ ಬಿಡುಗಡೆಯಾದ ಕೂಡಲೇ, ದೈವದ ಕೂಗನ್ನು ಎಲ್ಲರೂ ಕೂಗಬೇಡಿ, ಕೂಗಿ ಅವಮಾನಿಸಬೇಡಿ ಎಂದು ರಿಷಬ್ (Rishab Shetty) ಶೆಟ್ಟಿ ಮನವಿ ಕೂಡ ಮಾಡಿದ್ದರು.

ಯಾರೇನೇ ಅಂದರೂ ಕ್ಯಾರೇ ಎನ್ನದೆ, ಅನೇಕರು ಈ ಪ್ರಯತ್ನ ಮಾಡುತ್ತಲೇ ಇದ್ದಾರೆ.ʼಕಾಂತಾರʼ ಸಿನಿಮಾ ಪಂಜುರ್ಲಿ ದೈವ ಹಾಗೂ ಕರಾವಳಿಯ ಸಂಸ್ಕೃತಿ ಬಗ್ಗೆ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ಸಿನಿಮಾ ನೋಡಿ ಭಾರತೀಯ ಸಿನಿರಂಗದ ಗಣ್ಯರು ಕೂಡ ರಿಷಬ್‌ ಶೆಟ್ಟಿ ನಟನೆ ಮತ್ತು ನಿರ್ದೇಶನವನ್ನು ಮೆಚ್ಚಿಕೊಂಡು ಕೊಂಡಾಡಿದ್ದಾರೆ.

ರಜನಿಕಾಂತ್‌, ಕಮಲ್‌ ಹಾಸನ್‌, ಪ್ರಭಾಸ್‌, ರಾಣಾ ದಗ್ಗುಬಾಟಿ, ರಾಮ್‌ ಗೋಪಾಲ್‌ ವರ್ಮಾ, ಅನುಷ್ಕಾ ಶೆಟ್ಟಿ, ಹೃತಿಕ್‌ ರೋಷನ್‌, ವಿವೇಕ್‌ ರಂಜನ್‌ ಅಗ್ನಿಹೋತ್ರಿ, ಕಂಗನಾ ರಣಾವತ್‌, ಶಿಲ್ಪಾಶೆಟ್ಟಿ ಸೇರಿ ಅನೇಕ ಪರಭಾಷೆ ಸೆಲೆಬ್ರಿಟಿಗಳು ಕಾಂತಾರ ಕುರಿತು ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.

ಹೊಂಬಾಳೆ ಫಿಲಂಸ್‌ ಬ್ಯಾನರ್‌ ಅಡಿಯಲ್ಲಿ ಕಾಂತಾರ ಸಿನಿಮಾ ನಿರ್ಮಾಣವಾಗಿದೆ. ಈ ಸಿನಿಮಾವನ್ನು ರಿಷಬ್‌ ಶೆಟ್ಟಿ ನಿರ್ದೇಶಿಸಿ ನಟಿಸಿದ್ದು, 16 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಸಿನಿಮಾ ಇದುವರೆಗೂ ಸುಮಾರು 500 ಕೋಟಿ ರೂ. ಲಾಭ ಗಳಿಸಿದೆ. ಸಿನಿಮಾದಲ್ಲಿ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ದೈವದ ಪಾತ್ರ ಪರ್ಜುಲಿ, ಗುಳಿಗ ದೈವಾರಾಧನೆಯ ದೃಶ್ಯ ನೋಡುಗರಲ್ಲಿ ಭಕ್ತಿ ಭಾವ ಮೂಡಿಸುತ್ತದೆ. ಆದರೆ, ಇದೀಗ ಸಾಂತಾಕ್ಲಾಸ್ ವೇಷಧಾರಿಯೊಬ್ಬ ಕಾಂತಾರ ಸಿನಿಮಾದಲ್ಲಿ ಬರುವ ಕೊನೆಯ ದೃಶ್ಯವನ್ನು ಅನುಕರಣೆ ಮಾಡಿರುವ ವಿಡಿಯೋ ತುಣುಕುಗಳು ಜನರಲ್ಲಿ ಚರ್ಚೆ ಗೆ ಕಾರಣವಾಗಿದೆ.

ಈ ವಿಡಿಯೋವನ್ನು ಶಕುಂತಲ ಎಂಬುವವರು ತಮ್ಮ ಟ್ಟಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ನೋಡಿದ ನೆಟ್ಟಿಗರು ಕುಪಿತರಾಗಿದ್ದು ಜೊತೆಗೆ ದೈವವನ್ನು ಅವಹೇಳನ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

Leave A Reply

Your email address will not be published.