ಪ್ರಶಾಂತ್ ನೀಲ್ ಸಿನಿಮಾದಲ್ಲಿ ಅಮೀರ್ ಖಾನ್! ಸಿನಿ ರಸಿಕರಿಗೆ ಸಿಕ್ತು ಸಿಹಿ ಸುದ್ದಿ

ಉಗ್ರಂ ಸಿನಿಮಾದ ನಿರ್ದೇಶನದ ಮೂಲಕ ಸಿನಿ ಪ್ರಿಯರ ಮನ ಗೆದ್ದು ನಂತರ ಕೆಜಿಎಫ್ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ನಿರ್ದೇಶಕ ಪ್ರಶಾಂತ್ ನೀಲ್ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ್ದರು. ಕನ್ನಡ ಸಿನಿಮಾಗೆ ಹೆಸರಾಂತ ನಟ ಸಂಜಯ್ ದತ್ತರನ್ನು ಕರೆತಂದು ಅಚ್ಚರಿ ಮೂಡಿಸಿದ್ದರು. ಆದರೆ ಇದೀಗ ಗಾಂಧಿನಗರದಲ್ಲಿ ಮತ್ತೊಂದು ಗುಸು ಗುಸು ಶುರುವಾಗಿದೆ.

ಪ್ರಶಾಂತ್ ನೀಲ್ ಅವರ ಮುಂದಿನ ಸಿನಿಮಾದಲ್ಲಿ ಆಮೀರ್ ಖಾನ್ ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಈ ಚಿತ್ರಕ್ಕಾಗಿ ಪ್ರಶಾಂತ್ ಬಾಲಿವುಡ್ ನಟನನ್ನು ತೆಲುಗು ಸಿನಿಮಾ ರಂಗಕ್ಕೆ ಕರೆತರುತ್ತಿದ್ದಾರೆ ಎನ್ನುವುದು ಗಾಂಧಿನಗರದಲ್ಲಿ ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿ.

ಸದ್ಯ ಬಾಹುಬಲಿಯ ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಪ್ರಶಾಂತ್, ಈ ಚಿತ್ರವು ತೆರೆಕಂಡ ಬಳಿಕ ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾವನ್ನು ಅವರು ಕೈಗೆತ್ತಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಆಮೀರ್ ಖಾನ್ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈ ಸಿನಿಮಾ ಸೆಟ್ಟೇರಲು ಇನ್ನೂ ಒಂದು ವರ್ಷವೇ ಬೇಕಾಗಬಹುದು. ಆದರೂ, ಸುದ್ದಿ ಈಗಲೇ ಹುಟ್ಟಿಕೊಂಡಿದ್ದು ಸಿನಿ ಪ್ರೇಕ್ಷಕರಿಗೆ ಸಂತೋಷ ಉಂಟು ಮಾಡಿದೆ.

ಆದರೆ ನಿರ್ದೇಶಕ ಪ್ರಶಾಂತ್ ನೀಲ್ ಈ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಮಾತನಾಡದೆ ಇದ್ದರೂ ಅವರ ಅಡ್ಡದಿಂದಲೇ ಈ ಸುದ್ದಿ ಲೀಕ್ ಆಗಿ ಎಲ್ಲೆಡೆ ಹರಿದಾಡುತ್ತಿದೆ ಎನ್ನಲಾಗಿದೆ. ಮುಂದಿನ ಸಿನಿಮಾದಲ್ಲಿ ಅಮೀರ್ ಖಾನ್ ನಟಿಸುತ್ತಾರಾ ಅಥವಾ ಇಲ್ಲವಾ? ಒಂದು ವೇಳೆ ಇದು ಬರೀ ಗಾಸಿಪ್ ಮಾತ್ರನಾ ಎಂಬುದರ ಬಗ್ಗೆ ಪ್ರಶಾಂತ್ ಅವರೇ ಪ್ರತಿಕ್ರಿಯೆ ನೀಡಬೇಕಾಗಿದೆ.

Leave A Reply

Your email address will not be published.