Breaking । ಮಂಗಳೂರು ಜಲೀಲ್ ಹತ್ಯಾ ಆರೋಪಿಗಳಲ್ಲಿ ಮೂವರ ಬಂಧನ !

ಸುರತ್ಕಲ್: ದುಷ್ಕರ್ಮಿಗಳಿಂದ ಹತ್ಯೆಯಾದ ಜಲೀಲ್ ಕೊಲೆ ಪ್ರಕರಣದಲ್ಲಿ ನಗರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಕಳೆದ 24 ರ ಸಂಜೆಯ ವೇಳೆಗೆ ಸುರತ್ಕಲ್ ಕಾಟಿಪಳ್ಳ ನೈತಂಗಡಿ ಎಂಬಲ್ಲಿನ ಅಂಗಡಿಯೊಂದರಲ್ಲಿ ಕೃಷ್ಣಾಪುರ ನಾಲ್ಕನೇ ಬ್ಲಾಕ್ ನಿವಾಸಿ ಅಬ್ದುಲ್ ಜಲೀಲ್ ಎಂಬವರನ್ನು ದುಷ್ಕರ್ಮಿಗಳಿಬ್ಬರು ಚೂರಿ ಇರಿದು ಪರಾರಿಯಾಗಿದ್ದರು.

ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರಾದರೂ, ಅದಾಗಲೇ ಜಲೀಲ್ ಪ್ರಾಣಪಕ್ಷಿ ಹಾರಿಹೋಗಿದ್ದು,ಕ್ಷಣ ಮಾತ್ರದಲ್ಲೇ ಸುದ್ದಿ ಎಲ್ಲೆಡೆ ಹಬ್ಬಿ ಪೊಲೀಸರು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದರು.ಮಾರನೇ ದಿನ ಅಂತ್ಯಕ್ರಿಯೆಗೆ ಶವ ಹೊತ್ತು ಸಾಗಿದ್ದ ಆಂಬುಲೆನ್ಸ್ ತಡೆದು ಆಕ್ರೋಷಿತರು ಪ್ರತಿಭಟಿಸಿದ್ದು,ಸಾವಿಗೆ ಸೂಕ್ತ ನ್ಯಾಯ ಸಿಗಬೇಕು, ಆರೋಪಿಗಳ ಬಂಧನ ಶೀಘ್ರವಾಗಬೇಕು ಎಂದು ಪಟ್ಟು ಹಿಡಿದಿದ್ದರು.

ಈ ಬಗ್ಗೆ ಮುಖ್ಯ ಮಂತ್ರಿ ಬೊಮ್ಮಾಯಿಯವರು ಪ್ರತಿಕ್ರಿಯಿಸಿದ್ದು, ಪೊಲೀಸರು ನ್ಯಾಯಾಯುತವಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ, ಶೀಘ್ರ ಆರೋಪಿಗಳನ್ನು ಬಂಧಿಸಲಿದ್ದಾರೆ ಎಂದು ಭರವಸೆ ನೀಡಿದ್ದರು. ನಗರ ಪೊಲೀಸ್ ಆಯುಕ್ತರು ಹಲವು ತಂಡಗಳನ್ನು ನಡೆಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದು, ಹಲವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದರು.

ವಿಚಾರಣೆಯ ಬಳಿಕ ಮೂವರನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ಇಬ್ಬರು ಆರೋಪಿಗಳು ಹತ್ಯೆ ನಡೆಸಿದವರಾಗಿದ್ದು, ಉಳಿದವನೊಬ್ಬ ಆರೋಪಿಗಳಿಗೆ ಪರಾರಿಯಗಲು ಸಹಕರಿಸಿದ್ದನೆನ್ನಲಾಗಿದೆ.ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆದುಕೊಳ್ಳಬೇಕಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave A Reply

Your email address will not be published.