ಚಾಣಾಕ್ಷ ಪಾತಕಿ, ಜೈಲಿನಿಂದ ತಪ್ಪಿಸಿಕೊಳ್ಳುವುದರಲ್ಲಿ ದಂತಕತೆಯಾಗಿದ್ದ ‘ ಬಿಕಿನಿ ಕಿಲ್ಲರ್ ‘ ಚಾರ್ಲ್ಸ್ ಶೋಭರಾಜ್ ನೇಪಾಳ ಜೈಲಿನಿಂದ ಬಿಡುಗಡೆ

‘ಬಿಕಿನಿ ಕಿಲ್ಲರ್’ ಅಥವಾ ‘ಸರ್ಪ ಕೊಲೆಗಾರ’ ಎಂದೂ ಕರೆಯಲ್ಪಡುವ ಫ್ರೆಂಚ್ ಸರಣಿ ಕೊಲೆಗಾರ ಚಾರ್ಲ್ಸ್ ಶೋಭರಾಜ್ ಅವರನ್ನು ಬಿಡುಗಡೆ ಮಾಡುವಂತೆ ನೇಪಾಳದ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ. ಚಾಣಾಕ್ಷ ಪಾತಕಿ ಚಾರ್ಲ್ಸ್ ಶೋಭರಾಜ್ ಜೈಲುಗಳಿಂದ ತಪ್ಪಿಸಿಕೊಳ್ಳುವಲ್ಲಿ ದಂತಕತೆಯಾಗಿದ್ದವನು. ಈಗ ವಯಸ್ಸಿನ ಆಧಾರದ ಮೇಲೆ ಆತನನ್ನು ಈಗ ಬಿಡುಗಡೆ ಮಾಡಲಾಗಿದೆ. ಇಬ್ಬರು ಅಮೇರಿಕನ್ ಪ್ರವಾಸಿಗರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಆತ 2003 ರಿಂದ ನೇಪಾಳಿ ಜೈಲಿನಲ್ಲಿದ್ದಾರೆ. ಬಿಡುಗಡೆಯಾದ 15 ದಿನಗಳಲ್ಲಿ ಅವರನ್ನು ನೇಪಾಳದಿಂದ ಗಡಿಪಾರು ಮಾಡುವಂತೆಯೂ ನ್ಯಾಯಾಲಯ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಸಪನಾ ಪ್ರಧಾನ್ ಮಲ್ಲಾ ಮತ್ತು ತಿಲ್ ಪ್ರಸಾದ್ ಶ್ರೇಷ್ಠ ಅವರ ಜಂಟಿ ಪೀಠವು ಶೋಭರಾಜ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸುತ್ತಿದೆ. 15 ದಿನಗಳಲ್ಲಿ ಫ್ರೆಂಚ್ ಪ್ರಜೆಯನ್ನು ಅವರ ದೇಶಕ್ಕೆ ಹಿಂದಿರುಗಿಸಲು ವ್ಯವಸ್ಥೆ ಮಾಡುವಂತೆ ಪೀಠವು ನಿರ್ದೇಶಿಸಿದೆ.

ನೇಪಾಳದ ಕಾಠ್ಮಂಡುವಿನಲ್ಲಿ, ತನ್ನೊಂದಿಗೆ ಸ್ನೇಹ ಹೊಂದಿದ್ದ ಕೆನಡಾದ ಲಾಡಿ ಡುಪಾರ್ ಮತ್ತು ಅಮೇರಿಕನ್ ಮಹಿಳೆ ಅನ್ನಾಬೆಲ್ಲಾ ಟ್ರೆಮಾಂಟ್ ಅವರ 1975 ರಲ್ಲಿ ನಡೆದ ಕೊಲೆಗಳಿಗೆ ನೇಪಾಳದಲ್ಲಿ ಬೇಕಾಗಿದ್ದ ಶೋಭರಾಜ್, ಕಾನೂನಿನಿಂದ ತಪ್ಪಿಸಿಕೊಳ್ಳುವ ಕುತಂತ್ರಕ್ಕಾಗಿ ಕುಖ್ಯಾತನಾಗಿದ್ದನು. ಪೊಲೀಸರು 2003ರ ಸೆಪ್ಟೆಂಬರ್‌ನಲ್ಲಿ ಪಂಚತಾರಾ ಹೋಟೆಲ್‌ನಿಂದ ಶೋಭರಾಜ್‌ನನ್ನು ಬಂಧಿಸಿದ್ದರು. 1996 ರಲ್ಲಿ, ಥೈಲಾಂಡ್ ದೇಶದ ಪಟ್ಟಾಯಂನ ಕಡಲ ತೀರದಲ್ಲಿ ಬಿಕಿನಿಯಲ್ಲಿ ಇರುವಾಗ ಆರು ಮಹಿಳೆಯರನ್ನು ಕೊಂದ ಆರೋಪವನ್ನು ಎದುರಿಸಲು ಆತನನ್ನು ಥೈಲ್ಯಾಂಡ್‌ಗೆ ಹಸ್ತಾಂತರಿಸುವ ಸಾಧ್ಯತೆ ಬಗ್ಗೆ ಭಾರತ ಯೋಚಿಸುತ್ತಿತ್ತು. ಆಗಆತ ನವದೆಹಲಿಯ ಜೈಲಿನಿಂದ ತಪ್ಪಿಸಿಕೊಂಡಿದ್ದ.

ನಂತರ ಶೋಭರಾಜ್ ನನ್ನು ಗೋವಾದಲ್ಲಿ ಮತ್ತೆ ಬಂಧಿಸಲಾಯಿತು. ಭಾರತದಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ಅವರು ಫ್ರಾನ್ಸ್‌ನಲ್ಲಿ ಶಾಂತವಾಗಿ ವಾಸಿಸುತ್ತಿದ್ದ ತಿಳಿದುಬಂದಿದೆ. ಕಠ್ಮಂಡು ಮತ್ತು ಭಕ್ತಾಪುರ ಜಿಲ್ಲಾ ನ್ಯಾಯಾಲಯಗಳು 1975 ರಲ್ಲಿ ಅಮೇರಿಕನ್ ಮತ್ತು ಕೆನಡಾದ ಪ್ರಜೆಗಳ ಕೊಲೆಗಳಿಗೆ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದವು. ಕಠ್ಮಂಡುವಿನ ಮನೋಹರಾದಲ್ಲಿ ಅಮೇರಿಕನ್ ಪ್ರಜೆ ಕೋನಿ ಜೋ ಬ್ರೋಂಜಿಚ್ ಮತ್ತು ನಂತರ ಕೆನಡಾದ ಪ್ರಜೆ ಲಾರೆಂಟ್ ಕ್ಯಾರಿಯರ್ ಅವರನ್ನು ಎರಡು ದಿನಗಳ ನಂತರ ಭಕ್ತಾಪುರದ ಸಂಗದಲ್ಲಿ ಕೊಲೆ ಮಾಡಿದ್ದಾರೆ ಎಂದು ತೀರ್ಪು ನೀಡಲಾಯಿತು. 2010 ರಲ್ಲಿ, ಕಠ್ಮಂಡು ಜಿಲ್ಲಾ ನ್ಯಾಯಾಲಯವು ಅವರಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಅನುಮೋದಿಸಿತ್ತು. 2014 ರಲ್ಲಿ ಕೆನಡಾದ ಪ್ರಜೆಯ ಹತ್ಯೆಗೆ ಭಕ್ತಾಪುರ ಜಿಲ್ಲಾ ನ್ಯಾಯಾಲಯವು ಶಿಕ್ಷೆ ವಿಧಿಸಿತ್ತು.

ತಾನು ಈಗಾಗಲೇ 19 ವರ್ಷ ಜೈಲು ವಾಸ ಅನುಭವಿಸಿದ್ದೇನೆ ಮತ್ತು ಈಗ ತನಗೆ 78 ವರ್ಷ ವಯಸ್ಸಾಗಿದೆ ಎಂದು ಶೋಭರಾಜ್ ಅರ್ಜಿಯಲ್ಲಿ ವಾದಿಸಿದ್ದಾರೆ. 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಜೈಲಿನಿಂದ ಬಿಡುಗಡೆಗೆ ಪಡೆಯುವ ವಿನಾಯತಿಯನ್ನು ತನಗೆ ನೀಡುವಂತೆ ಕೋರಿ ಶೋಭರಾಜ್ ಸುಪ್ರೀಂ ಕೋರ್ಟ್‌ನಲ್ಲಿ ಪದೇ ಪದೇ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು. ರಾಷ್ಟ್ರಪತಿಗಳ ಕ್ಷಮಾದಾನದ ನಿರೀಕ್ಷೆಯಲ್ಲಿ ಅವರು ವಿಶೇಷವಾಗಿ ಸಂವಿಧಾನ ದಿನ, ಪ್ರಜಾಪ್ರಭುತ್ವ ದಿನ ಮತ್ತು ಗಣರಾಜ್ಯೋತ್ಸವದಂದು ಇಂತಹ ಅರ್ಜಿಗಳನ್ನು ಕಳುಹಿಸಿದ್ದಾರೆ. ಆದರೆ, ಇದುವರೆಗೆ ಅವರ ಎಲ್ಲಾ ರಿಟ್ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಈಗ ಸುಪ್ರೀಂ ಕೋರ್ಟಿನ ನಿರ್ದೇಶನದ ಮೇರೆಗೆ ಆತನ ಬಿಡುಗಡೆ ಆಗಿದೆ.

Leave A Reply

Your email address will not be published.