ಹೆಚ್ ವಿಶ್ವನಾಥ್ ಒಬ್ಬ ಕೃತಜ್ಞತೆ ಇಲ್ಲದ ಕೃತಘ್ನ; ಅವರ ಮೆದುಳು – ನಾಲಿಗೆಗೆ ಕಂಟ್ರೋಲ್ ತಪ್ಪಿದೆ – ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ

ಮಡಿಕೇರಿ: ಹೆಚ್ ವಿಶ್ವನಾಥ್ ಒಬ್ಬ ಕೃತಜ್ಞತೆ ಇಲ್ಲದ ಕೃತಘ್ನ ಮನುಷ್ಯ. ಅವರಿಗೆ ಮೆದುಳು ಮತ್ತು ನಾಲಿಗೆಗೆ ಮಧ್ಯೆ ಕಂಟ್ರೋಲ್ ತಪ್ಪಿದೆ ಎಂದು ಬಿಜೆಪಿ ಎಂಎಲ್‌ಸಿ ಹೆಚ್ ವಿಶ್ವನಾಥ್ ವಿರುದ್ಧ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ವೋಟರ್ ಐಡಿ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ಶಾರೀಕ್ ಪ್ರಕರಣ ಬಳಸಿಕೊಂಡಿದೆ ಎಂಬ ಡಿಕೆಶಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು ಹೆಚ್. ವಿಶ್ವನಾಥ್. ಯಾವುದೋ ಕಾರಣಕ್ಕೆ ತಲೆ ಕೆಟ್ಟವರನ್ನು ಸರಿಮಾಡಬಹುದು. ಪೂರ್ತಿ ತಲೆ ಕೆಟ್ಟಿರದಿದ್ದರೂ ತಲೆ ಕೆಟ್ಟವರಂತೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಕೆಲವರು. ಅಂತಹ ವ್ಯಕ್ತಿತ್ವ ಹೊಂದಿರುವವರು ವಿಶ್ವನಾಥ್. ಈ ತಲೆ ಕೆಟ್ಟವರ ಬಗ್ಗೆ ಏನು ಮಾತನಾಡುವುದು? ಅಂಥವರನ್ನು ನೆಗ್ಲೆಟ್ ಮಾಡಬೇಕು ಅಷ್ಟೇ ಎಂದು ಬೋಪಯ್ಯ ಹೇಳಿಕೆ ನೀಡಿದ್ದಾರೆ.

ಹೆಚ್ ವಿಶ್ವನಾಥ್ ಅವರು ಪಾರ್ಲಿಮೆಂಟ್ ಸದಸ್ಯರಾಗಿದ್ದವರು. ಬಿಜೆಪಿಯಿಂದ ಎಲ್ಲವನ್ನೂ ಅನುಭವಿಸಿ ಇದೀಗ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ವಿಶ್ವನಾಥ್ ಗೆ ಕೃತಜ್ಞತೆ ಎಂಬುದೇ ಇಲ್ಲ ಎಂದು ಬೋಪಯ್ಯ ಅವರು ಖಾರವಾಗಿ ವಿಶ್ವನಾಥ್ ಅವರ ಮಾತಿಗೆ ಕೌಂಟರ್ ಕೊಟ್ಟಿದ್ದಾರೆ.

ಅಲ್ಲದೆ, ಬೋಪಯ್ಯನವರು ವಿಶ್ವನಾಥ್ಗೆ ದುಡ್ಡು ನೀಡಿದ ಶ್ರೀನಿವಾಸ್ ಪ್ರಸಾದ್ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದರು. ಚುನಾವಣೆ ಎದುರಿಸಲು ಬಿಜೆಪಿಯಿಂದ 15 ಕೋಟಿ ರೂ. ವಿಶ್ವನಾಥ್ ಅವರಿಗೆ ನೀಡಲಾಗಿತ್ತು ಎಂದು ಶ್ರೀನಿವಾಸ್ ಪ್ರಸಾದ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಶ್ರೀನಿವಾಸ್ ಪ್ರಸಾದ್ ಅವರು ಯಾವ ದೃಷ್ಟಿಯಿಂದ ಹೇಳಿದರು ಎಂಬುದು ನನಗೆ ತಿಳಿದಿಲ್ಲ. ಶ್ರೀನಿವಾಸ್ ಪ್ರಸಾದ್ ಅವರು ತುಂಬ ಹಿರಿಯರಿದ್ದಾರೆ. ಅವರು ಯಾವಾಗಲೂ ತುಂಬಾ ತೂಕದ ಮಾತುಗಳನ್ನು ಆಡುತ್ತಾರೆ. ಅವರು ಏಕಾಏಕಿ ಆ ರೀತಿಯ ಹೇಳಿಕೆ ಕೊಡುವವರಲ್ಲ. ಶ್ರೀನಿವಾಸ್ ಪ್ರಸಾದ್ ಒಬ್ಬ ಸಜ್ಜನರು ಎಂದು ತಿಳಿಸಿದರು.

Leave A Reply

Your email address will not be published.