Kantara : ಕಾಂತಾರ ಸಿನಿಮಾ ಭಾಗ 2 ಮಾಡಲು ವೀರೇಂದ್ರ ಹೆಗ್ಗಡೆ ಒಪ್ಪಿಗೆ ಅಗತ್ಯ – ದೈವದ ನುಡಿ

ಕಾಂತಾರ ಅನ್ನೋ ಸಿನಿಮಾ ರಿಲೀಸ್ ಆದ ದಿನದಿಂದ ಒಂದಲ್ಲ ಒಂದು ವಿಚಾರಕ್ಕೆ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ತುಳುನಾಡಿನ ಸಂಸ್ಕೃತಿಯನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಿದ ಸಿನಿಮಾದ ಹವಾ ಎಷ್ಟರಮಟ್ಟಿಗೆ ಇದೆ ಎಂಬುದನ್ನು ವಿವರಿಸಬೇಕಾಗಿಲ್ಲ. ಎಲ್ಲಿ ಹೋದರೂ ಬಂದರೂ..ಎಲ್ಲರ ಬಾಯಲ್ಲೂ ಸಿನಿಮಾದ ಬಗ್ಗೆಯೇ ಹೆಚ್ಚು ಮಾತುಗಳು ಕೇಳಿಬರುತ್ತಿವೆ .

ಬಾಕ್ಸ್ ಆಫೀಸಲ್ಲಿ ಗೆಲುವಿನ ಜಯಭೇರಿ ಬೀರಿ ಎಲ್ಲ ಹಿಟ್ ಸಿನಿಮಾಗಳ ದಾಖಲೆ ಪುಡಿ ಮಾಡಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇಂದಿಗೂ ಕನ್ನಡದ ಕಾಂತಾರ ಅರ್ಭಟ ಕಮ್ಮಿ ಆಗಿಲ್ಲ. ಕಾಂತಾರ ದಾಖಲೆಗಳ ಮೇಲೆ ದಾಖಲೆ ಬರೆದು ಇತಿಹಾಸ ಸೃಷ್ಟಿಸಿದೆ . ಈ ಸಿನೆಮಾದ ಗೆಲುವಿನ ಬಳಿಕ ರಿಷಬ್ ಶೆಟ್ರ ತಂಡ ಕಾಂತಾರ 2 ರಿಲೀಸ್ ಸಿನಿಮಾ ತಯಾರಿ ನಡೆಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಇದೀಗ ಈ ಕುರಿತು ಹೊಸ ವಿಚಾರ ಹೊರ ಬಿದ್ದಿದೆ.

ಹೌದು!!!..‘ಕಾಂತಾರ 2’ ಸಿನಿಮಾ ಮಾಡುವ ಬಗ್ಗೆ ಅನುಮತಿಯನ್ನು ಕೇಳಲಾಗಿದ್ದು, ಈ ಕಾರ್ಯದಲ್ಲಿ ಮುಂದುವರಿಯಬಹುದು ಎಂದು ದೈವದ ಅನುಮತಿ ಸಿಕ್ಕಿದೆ ಎನ್ನಲಾಗಿದೆ. ಆದರೆ,’ ಕಾಂತಾರ 2′ ಚಿತ್ರಕ್ಕೆ ವೀರೇಂದ್ರ ಹೆಗ್ಗಡೆಯವರ ಅನುಮತಿಯೂ ಬೇಕು ಎಂದು ದೈವ ಭವಿಷ್ಯ ನುಡಿದಿದೆ ಎನ್ನಲಾಗಿದೆ.

‘ಕಾಂತಾರ’ ನೋಡಿದ ಪ್ರತಿ ಸೆಲೆಬ್ರೆಟಿಗಳು ಕೂಡ ಮೆಚ್ಚುಗೆ ಮಾತುಗಳನ್ನಾಡಿದ್ದು ತಿಳಿದಿರುವ ವಿಚಾರವೇ!!. ‘ಕಾಂತಾರ’ ಚಿತ್ರದ ಗೆಲುವಿನ ಬಳಿಕ ರಿಷಬ್ ಶೆಟ್ಟಿ ‘ಕಾಂತಾರ 2’ ಮಾಡುತ್ತಾರೆ ಎಂಬ ಊಹಾಪೋಹಗಳು ಕೇಳಿ ಬರುತ್ತಿತ್ತು. ಇದಕ್ಕೆ ಇಂಬು ನೀಡುವಂತೆ ರಿಷಬ್​ ಶೆಟ್ಟಿ ಅವರು ಇತ್ತೀಚೆಗೆ ನಡೆದ ದೈವ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದರು . ಆ ಸಂದರ್ಭದಲ್ಲಿ ‘ಕಾಂತಾರ 2’ ಬಗ್ಗೆ ರಿಷಬ್​ ಶೆಟ್ಟಿ ಅವರು ದೈವದ ಮುಂದೆ ಪ್ರಶ್ನೆಯಿಟ್ಟಿದ್ದಾರೆ ಎನ್ನಲಾಗಿದೆ.

ಈ ಸಂದರ್ಭ ದೈವದ ಅನುಮತಿ ದೊರೆತಿದ್ದು, ಇದರ ಜೊತೆಗೆ ಧರ್ಮಸ್ಥಳದ ಧರ್ಮಾಧಿಕಾರಿಯಾದ ವೀರೇಂದ್ರ ಹೆಗ್ಗಡೆ ಅವರ ಅನುಮತಿಯನ್ನು ಸಹ ಪಡೆಯಲು ದೈವ ತಿಳಿಸಿದೆ.

ಮೊದಲ ಚಿತ್ರ ಮಾಡುವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ, ಈ ಬಾರಿ ಮಾತ್ರ ನೂರು ಬಾರಿ ಯೋಚನೆ ಮಾಡಿ ಹೆಜ್ಜೆ ಇಡಬೇಕೆಂದು ಎಂದು ಅಣ್ಣಪ್ಪ ಪಂಜುರ್ಲಿ ದೈವ ಎಚ್ಚರಿಕೆ ನೀಡಿದೆ ಎನ್ನಲಾಗಿದೆ. ಅಣ್ಣಪ್ಪ ಪಂಜುರ್ಲಿ ದೈವಕ್ಕೆ ‘ಕಾಂತಾರ’ ಚಿತ್ರತಂಡ ಇತ್ತೀಚೆಗೆ ನೇಮೋತ್ಸವ ನೀಡಿದ್ದು , ಈ ಸಂದರ್ಭದಲ್ಲಿ ‘ಕಾಂತಾರ 2’ (Kantara 2) ಸಿನಿಮಾ ಮಾಡುವ ಕುರಿತಾಗಿ ಅಪ್ಪಣೆಯನ್ನು ಕೂಡ ಕೇಳಲಾಗಿದೆ. ಇದಕ್ಕೆ ದೈವವು ಕೂಡ ಸಮ್ಮತಿ ಸೂಚಿಸಿದ್ದು ಈ ಕಾರ್ಯದಲ್ಲಿ ಮುಂದುವರಿಯಬಹುದು ಎಂದು ದೈವವೂ ಅನುಮತಿ ನೀಡಿದ್ದು, ಚಿತ್ರತಂಡಕ್ಕೆ ಕೆಲವು ಷರತ್ತುಗಳನ್ನು ಹಾಗೂ ಎಚ್ಚರಿಕೆಯನ್ನು ದೈವ ನೀಡಿದೆ ಎನ್ನಲಾಗಿದೆ.

‘ಕಾಂತಾರ’ ಮೊದಲ ಭಾಗದಲ್ಲಿ ಚಿತ್ರ ತೆರೆಕಂಡ ಬಳಿಕ ಉತ್ತಮ ಯಶಸ್ಸು ಗಳಿಸಿದೆ ಇದರ ಜೊತೆಗೆ, ಕೆಲ ಅಪವಾದವೂ ಬಂದಿದೆ. ಆದರೆ ಮುಂದಿನ ಭಾಗದಲ್ಲಿ ಮಾತ್ರ ನೂರು ಬಾರಿ ಯೋಚನೆ ಮಾಡಿ ಹೆಜ್ಜೆ ಇಡಬೇಕೆಂದು ಸೂಚನೆ ನೀಡಿದ ದೈವವು ಆಚಾರ ವಿಚಾರಗಳ ಜೊತೆಗೆ ಧರ್ಮದ ಪ್ರಕಾರ ಹೋಗಲು ಎಚ್ಚರಿಕೆ ನೀಡಿದೆ.

‘ಕಾಂತಾರ 2’ ಮಾಡುವ ಮುನ್ನ ಖಾವಂದರ ಬಳಿ ಅನುಮತಿ ಕೇಳಲು ದೈವ ಅಪ್ಪಣೆ ಕೊಟ್ಟಿದೆ ಎನ್ನಲಾಗಿದೆ. ‘ಕಾಂತಾರ 2’ ಬಗ್ಗೆ ರಿಷಬ್​ ಶೆಟ್ಟಿ ಅವರು ದೈವದ ಬಳಿ ಅನುಮತಿ ಕೇಳಿದ್ದು, ಅದಕ್ಕೂ ಮೊದಲು ಧರ್ಮಸ್ಥಳ ಮಂಜುನಾಥೇಶ್ವರನ ಅನುಮತಿ ಕೇಳಲು ದೈವ ತಿಳಿಸಿದೆ ಎನ್ನಲಾಗಿದೆ . ಇದಲ್ಲದೇ ಕಾಂತಾರದಲ್ಲಿ ಕೆಲಸ ಮಾಡಿದ ಅದೇ ತಂಡದೊಂದಿಗೆ ಅಷ್ಟೇ ಶುದ್ಧಾಚಾರದಿಂದ ಮುಂದುವರೆಯಿರಿ ಎಂದು ಅಣ್ಣಪ್ಪ ಪಂಜುರ್ಲಿ ದೈವ ಹೇಳಿರುವುದಾಗಿ ಭಕ್ತರು ಹೇಳಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.