ರೈಲ್ವೇ ಪರೀಕ್ಷೆ ಪಾಸ್ ಮಾಡಲೇಬೇಕೆಂದು ಈ ಅಭ್ಯರ್ಥಿ ಮಾಡಿದ ಕೆಲಸ ಮಾತ್ರ ಭಯಾನಕ!

Share the Article

ಪರೀಕ್ಷೆ ಬಂದ್ರೆ ಸಾಕು ಕೆಲವೊಂದು ವಿದ್ಯಾರ್ಥಿಗಳು ಯಾವ ರೀತಿ ಪರೀಕ್ಷೆಯನ್ನು ಪಾಸ್ ಮಾಡುವುದು ಎಂದು ಯೋಚಿಸುತ್ತಾರೆ. ಇನ್ನು ಕೆಲವೊಂದು ವಿದ್ಯಾರ್ಥಿಗಳು ಅಡ್ಡದಾರಿಯನ್ನು ಹಿಡಿದು ಪರೀಕ್ಷೆ ಬರೆಯಲು ಮುಂದಾಗುತ್ತಾರೆ. ಒಂದು ಪರೀಕ್ಷೆಗಾಗಿ ಎಂತಹ ಸಾಹಸವನ್ನೇ ಮಾಡಿರುವಂತಹ ಘಟನೆಗಳು ನಡೆದಿದೆ. ಆದರೆ ಇಲ್ಲೊಂದು ಕಡೆ ರೈಲ್ವೆ ಪರೀಕ್ಷೆಯನ್ನು ಪಾಸ್ ಮಾಡಲು ಅಭ್ಯರ್ಥಿಯೋರ್ವ ಮಾಡಿದ ಕೆಲಸ ನೋಡಿದ್ರೆ ಬೆಚ್ಚಿ ಬೀಳುವುದು ಗ್ಯಾರಂಟಿ.

ಹೌದು. ಇಲ್ಲೊಬ್ಬ ಮಹಾಶಯ ರೈಲ್ವೇ ಉದ್ಯೋಗವನ್ನು ಪಡೆಯಲೇ ಬೇಕೆಂಬ ಹಠ ತೊಟ್ಟು ಸಾಹವೊಂದಕ್ಕೆ ಕೈ ಹಾಕಿದ್ದಾನೆ. ಅಭ್ಯರ್ಥಿಯು ತನ್ನ ಹೆಬ್ಬೆರಳಿನ ಚರ್ಮವನ್ನು ಬಿಸಿ ಪ್ಯಾನ್​ ಬಳಸಿ ತೆಗೆದು, ತನ್ನ ಸ್ನೇಹಿತನ ಹೆಬ್ಬೆರಳಿಗೆ ಅಂಟಿಸಿದ್ದಾನೆ, ನಂತರ ಅವನು ಬಯೋಮೆಟ್ರಿಕ್​ ಪರಿಶೀಲನೆಯನ್ನು ಪೂರ್ಣಗೊಳಿಸಿ ಸ್ನೇಹಿತನಿಂದ ಪರೀಕ್ಷೆ ಬರೆಸುವ ಪ್ರಯತ್ನದಲ್ಲಿದ್ದನು. ಆದರೆ ಇವರ ಪ್ಲಾನ್ ಮಾತ್ರ ಕೈಕೊಟ್ಟಿದೆ.

ಆಗಸ್ಟ್​ 22ರಂದು ಗುಜರಾತ್​ನ ವಡೋದರಾ ನಗರದಲ್ಲಿ ನಡೆದ ರೈಲ್ವೇ ನೇಮಕಾತಿ ಪರೀಕ್ಷೆಯಲ್ಲಿ ಮೋಸವನ್ನು ತಡೆಗಟ್ಟಲು ಎಲ್ಲಾ ಅಭ್ಯರ್ಥಿ ತಮ್ಮ ಹೆಬ್ಬೆರಳಿನ ಗುರುತನ್ನು ನೀಡಬೇಕಾಗಿತ್ತು, ನಂತರ ಪರೀಕ್ಷೆಯ ಮೊದಲು ಬಯೋಮೆಟ್ರಿಕ್​ ಸಾಧನದ ಮೂಲಕ ಅವರ ಆಧಾರ್​ ಡೇಟಾದೊಂದಿಗೆ ಹೊಂದಾಣಿಕೆ ಮಾಡಲಾಯಿತು. ಆ ಸಮಯದಲ್ಲಿ, ಪದೇ ಪದೇ ಪ್ರಯತ್ನಿಸಿದರೂ ಮನೀಶ್​ ಕುಮಾರ್​ ಎಂಬ ಅಭ್ಯರ್ಥಿಯ ಹೆಬ್ಬೆರಳಿನ ಗುರುತನ್ನು ರಿಜಿಸ್ಟರ್​ ಮಾಡಿಕೊಳ್ಳುವಲ್ಲಿ ಸಾಧನವು ವಿಫಲವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಭ್ಯರ್ಥಿ ತನ್ನ ಎಡಗೈಯನ್ನು ಪ್ಯಾಂಟ್​ನ ಜೇಬಿನೊಳಗೆ ಮರೆಮಾಚಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಪರೀಕ್ಷಾ ಮೇಲ್ವಿಚಾರಕರಿಗೆ ಅನುಮಾನ ಬಂದಿದೆ. ಹೀಗಾಗಿ ಮೇಲ್ವಿಚಾರಕರು ಆತನ ಎಡಗೈ ಹೆಬ್ಬೆರಳಿಗೆ ಸ್ಯಾನಿಟೈಸರ್​ ಸಿಂಪಡಿಸಿದಾಗ, ಅದರ ಮೇಲೆ ಅಂಟಿಸಲಾದ ಚರ್ಮವು ಉದುರಿಹೋಯಿತು ಎಂದು ವಿವರಿಸಿದ್ದಾರೆ.

ಸಿಕ್ಕಿಬಿದ್ದ ವ್ಯಕ್ತಿ ತನ್ನ ನಿಜವಾದ ಹೆಸರು ರಾಜ್ಯಗುರು ಗುಪ್ತ ಎಂದು ಪೊಲೀಸರಿಗೆ ತಿಳಿಸಿದ್ದು, ತನ್ನ ಸ್ನೇಹಿತ ಮನೀಶ್​ ಕುಮಾರ್​ ಎಂದು ಹೇಳಿ ಪರೀಕ್ಷೆಗೆ ಹಾಜರಾಗಲು ಬಂದಿದ್ದ. ಗುಪ್ತಾ ಅಧ್ಯಯನದಲ್ಲಿ ಉತ್ತಮನಾಗಿದ್ದರಿಂದ, ರೈಲ್ವೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದ ಮನೀಶ್​ ಕುಮಾರ್​, ನಕಲಿ ಗುರುತಿನ ಮೂಲಕ ಗುಪ್ತಾನನ್ನು ನೇಮಕಾತಿ ಪರೀಕ್ಷೆಗೆ ಕಳುಹಿಸಿದ್ದ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ 20 ವರ್ಷದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ವಡೋದರದ ಲಕ್ಷ್ಮೀಪುರಂ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ ಎಫ್​ಐಆರ್ ಪ್ರಕಾರ, ಆಗಸ್ಟ್​ 22 ರಂದು ಇಲ್ಲಿನ ಕಟ್ಟಡವೊಂದರಲ್ಲಿ ಡಿ ಗ್ರೂಪ್​ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ಏರ್ಪಡಿಸಿತ್ತು, ಇದರಲ್ಲಿ 600 ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು.

Leave A Reply