ಶಿರಾಡಿ ಘಾಟ್ ಆಯ್ತು, ಈಗ ಚಾರ್ಮಾಡಿ ಘಾಟ್ ಕೂಡಾ‌ ಬಂದ್ !!!

ಮಂಗಳೂರು: ಕರಾವಳಿಯಾದ್ಯಂತ ಭಾರೀ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂ ಕುಸಿತವಾಗಿದ್ದು ರಾಷ್ಟ್ರೀಯ ಹೆದ್ದಾರಿ 75 ಬಂದ್ ಮಾಡಲಾಗಿದೆ. ಆದ್ರೆ ಶಿರಾಡಿಘಾಟ್ ನ ಪರ್ಯಾಯ ಮಾರ್ಗದಲ್ಲಿ ಲಘು ವಾಹನಗಳು ಸಂಚರಿಸಲು ಅವಕಾಶ ನೀಡಿ ಹಾಸನ ಡಿಸಿ ಆರ್ ಗಿರೀಶ್ ಆದೇಶ ಹೊರಡಿಸಿದ್ದಾರೆ.

ಈಗ ಶಿರಾಡಿಘಾಟ್ ಬಂದ್ ಬೆನ್ನಲ್ಲೇ ಚಾರ್ಮಾಡಿಘಾಟ್ ನಲ್ಲಿ ಹೈ ಅಲರ್ಟ್ ಕೈಗೊಳ್ಳಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಚಾರ್ಮಾಡಿಘಾಟ್ನಲ್ಲಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಆದ್ರೆ ಘಾಟ್‌ನಲ್ಲಿ ವಾಹನದಟ್ಟಣೆ ಹಿನ್ನೆಲೆಯಲ್ಲಿ ರಸ್ತೆ ಬದಿ ಕ್ಲೀನಿಂಗ್ ಕೆಲಸ ಮಾಡಿಸಲಾಗುತ್ತಿದೆ.

ಹೆದ್ದಾರಿ ಪಕ್ಕದ ಗಿಡಗಂಟಿ, ಮಣ್ಣು ತೆರವುಗೊಳಿಸಲಾಗುತ್ತಿದೆ. ಹಾಗೂ ಜೆಸಿಬಿ ಮೂಲಕ ಅಪಾಯಕಾರಿ ಕಲ್ಲು ತೆರವು ಮಾಡಲಾಗುತ್ತಿದೆ. ಘಾಟ್ ರಸ್ತೆಯ ಹಳ್ಳಗಳಲ್ಲಿ ನೀರು ನಿಲ್ಲದಂತೆ ಸರಾಗ ಹರಿವಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಅಪಾಯಕಾರಿ ಮರ, ಬಂಡೆಗಳನ್ನು ಸಿಬ್ಬಂದಿ ತೆರವುಗೊಳಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಡಳಿತ, ಹೆದ್ದಾರಿ ಪ್ರಾಧಿಕಾರದಿಂದ ತುರ್ತು ಕೆಲಸ ನಡೆಯುತ್ತಿದೆ. ಶಿರಾಡಿಘಾಟ್‌ ಆಯ್ತು, ಇದೀಗ ಚಾರ್ಮಾಡಿಘಾಟ್‌ 2ನೇ ತಿರುವಿನಲ್ಲಿ ರಸ್ತೆ ಕುಸಿತಗೊಂಡಿದೆ.

ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ಬಳಿಯ ಚಾರ್ಮಾಡಿಘಾಟ್‌ನ 2ನೇ ತಿರುವಿನಲ್ಲಿ ಕುಸಿತಗೊಂಡಿದೆ. ಸ್ಲ್ಯಾಬ್‌ ಬಿರುಕು ಕಣಿಸಿಕೊಂಡಿದ್ದು, ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ, ಹೆದ್ದಾರಿ ಪ್ರಾಧಿಕಾರದಿಂದ ತುರ್ತು ಕೆಲಸ ನಡೆಯುತ್ತಿದೆ. ಶಿರಾಡಿ ಘಾಟ್ ಭಾಗಶಃ ಬಂದ್ ಆಗಿರೋ ಹಿನ್ನೆಲೆ ವಾಹನಗಳು ಚಾರ್ಮಾಡಿಯತ್ತ ಮುಖ ಮಾಡಿವೆ. ಬಸ್ಸು, ಲಾರಿ ಸೇರಿ ಭಾರೀ ಘನ ವಾಹನಗಳ ಸಂಚಾರ ಹಿನ್ನೆಲೆ ಚಾರ್ಮಾಡಿಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.

Leave A Reply

Your email address will not be published.