ಕಾಲೇಜಿನಲ್ಲಿ ಸಾವರ್ಕರ್ ಭಾವಚಿತ್ರ ಅಂಟಿಸಿದ ಕಾರಣಕ್ಕೆ ವಿದ್ಯಾರ್ಥಿ ಬಣಗಳ ನಡುವೆ ಮಾರಾಮಾರಿ!! ನಾಲ್ವರು ಆಸ್ಪತ್ರೆಗೆ ದಾಖಲು-ಪಿಎಫ್ಐ ನಿಂದ ಕಾಲೇಜಿಗೆ ಮುತ್ತಿಗೆ ಯತ್ನ ವಿಫಲ

ಮಂಗಳೂರು:ಕಾಲೇಜು ತರಗತಿಯೊಳಗೆ ಸಾವರ್ಕರ್ ಫೋಟೋ ಹಾಕಿದ ವಿದ್ಯಾರ್ಥಿಯೊಬ್ಬನನ್ನು ಇತರ ನಾಲ್ವರು ಪ್ರಶ್ನಿಸಿದ್ದರೆಂಬ ಕಾರಣಕ್ಕೆ ವಿದ್ಯಾರ್ಥಿ ಬಣಗಳ ನಡುವೆ ಮಾರಾಮಾರಿ ನಡೆದು,ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆಯು ನಗರದ ಹಂಪನಕಟ್ಟೆ ಪದವಿ ಕಾಲೇಜಿನಲ್ಲಿ ನಡೆದಿದೆ.

ಇತ್ತೀಚೆಗೆ ಸಾವರ್ಕರ್ ಜನ್ಮದಿನದ ಪ್ರಯುಕ್ತ ಹಿಂದೂ ವಿದ್ಯಾರ್ಥಿಯೋರ್ವ ತರಗತಿ ಕೋಣೆಯಲ್ಲಿ ಸಾವರ್ಕರ್ ಭಾವಚಿತ್ರವನ್ನು ಅಂಟಿಸಿದ್ದ. ಇದನ್ನು ಅನ್ಯಮತೀಯ ವಿದ್ಯಾರ್ಥಿಗಳು ವಿರೋಧಿಸಿ,ಆತನನ್ನು ಪ್ರಶ್ನಿಸಿದ್ದರು ಎನ್ನಲಾಗಿದೆ.ಇದೇ ವಿಚಾರ ತಾರಕಕ್ಕೇರಿ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದಿದ್ದು,ಸಂಜೆಯಾಗುತ್ತಲೇ ಕೆಲ ಮತೀಯ ಸಂಘಟನೆಗಳು ಕಾಲೇಜಿಗೆ ಮುತ್ತಿಗೆ ಹಾಕಲು ಮುಂದಾಗಿವೆ.

ತಮ್ಮ ಧರ್ಮದ ಯುವಕರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ಪಿಎಫ್ಐ ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ ಕೆಲ ಯುವಕರು ಘೋಷಣೆಗಳನ್ನು ಕೂಗುತ್ತಾ ಕಾಲೇಜಿನ ಗೇಟ್ ಬಳಿ ಜಮಾಯಿಸಿದ್ದು,ಬಿಗುವಿನ ವಾತಾವರಣ ನಿರ್ಮಾಣದ ಹೊತ್ತಲ್ಲೇ ಕಾಲೇಜಿಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆದಾಗ ಪೊಲೀಸರು ಚದುರಿಸಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.