ನಾನು ಮುಸ್ಲಿಂ, ನನ್ನ ಪತ್ನಿ ಹಿಂದೂ…ನನಗೆ ದೇಶದಲ್ಲಿ ಅಭದ್ರತೆ ಎಂದೂ ಕಾಡಿಲ್ಲ !! | ಕೋಮುಗಲಭೆ ಕುರಿತು ಮನಬಿಚ್ಚಿ ಮಾತನಾಡಿದ ನಟ ನಾಸಿರುದ್ದೀನ್ ಶಾ

ಹಿಂದೂ-ಮುಸ್ಲಿಂ ವಿಚಾರದಲ್ಲಿ ದ್ವೇಷ ಹರಡುವ ಕೆಲಸ ಭಾರತದಲ್ಲಿ ಆಗುತ್ತಿದೆ. ಎರಡೂ ಕಡೆಯಲ್ಲೂ ದ್ವೇಷ ಹಂಚಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯೆ ಪ್ರವೇಶಿಸಿ ಇದನ್ನು ತಿಳಿಗೊಳಿಸಬೇಕು, ನಿಯಂತ್ರಿಸಬೇಕು. ಇಲ್ಲದೇ ಹೋದರೆ, ದೊಡ್ಡಮಟ್ಟದಲ್ಲಿಯೇ ಅಪಾಯ ಕಾದಿರುತ್ತದೆ ಬಾಲಿವುಡ್ ಖ್ಯಾತ ನಟ ನಾಸಿರುದ್ದೀನ್ ಶಾ ಹೇಳಿದ್ದಾರೆ.

ಕೋಮು ಗಲಭೆಯ ವಿಚಾರದಲ್ಲಿ ತುಂಬಾ ನೊಂದುಕೊಂಡು ಮಾತನಾಡಿದ ಅವರು, ದ್ವೇಷ ಹರಡುವವರ ಬಗ್ಗೆ ನಾನೆಷ್ಟೇ ತೀಕ್ಷ್ಣವಾಗಿ ಮಾತನಾಡಿದರೂ ಅದು ಶಾರೂಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್ ಅವರಷ್ಟು ಶಕ್ತಿಯುತವಾಗಿ ಇರುವುದಿಲ್ಲ. ಈ ಮೂವರು ನನಗಿಂತ ಎತ್ತರದಲ್ಲಿ ಇದ್ದಾರೆ. ಇವರು ಮಾತನಾಡಿದರೆ, ಅಲ್ಲೊಂದು ಸೌಹಾರ್ದ ನೆಲೆ ಕಾಣಬಹುದು. ಆದರೆ, ಅದು ಅಷ್ಟು ಸುಲಭವಾದದ್ದಲ್ಲ ಎನ್ನುವುದು ನನಗೂ ಅರಿವಿದೆ. ಈ ಕುರಿತು ಮಾತನಾಡಿದರೆ, ದೊಡ್ಡಮಟ್ಟದ ರಿಸ್ಕ್ ತಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ ಶಾ.

ಶಾಂತಿ ಭಾರತವನ್ನು ನಾವು ಬಯಸಬೇಕು. ಈ ಕುರಿತು ಏನಾದರೂ ಮಾತನಾಡಿದರೆ, ನಾವೇ ಟಾರ್ಗೆಟ್ ಆಗುತ್ತೇವೆ. ಸೋನು ಸೂದ್ ಸೇರಿದಂತೆ ಹಲವರು ಗುರಿಯಾಗಿ ಮನೆಗೆ ಐಟಿ ರೇಟ್ ಕೂಡ ಮಾಡಿಸಿಕೊಂಡಿದ್ದಾರೆ. ನಾವು ಇಂತಹ ಸ್ಥಿತಿಯಲ್ಲಿ ಇದ್ದೇವೆ. ಮಾತನಾಡುವ ಹಕ್ಕುಗಳನ್ನೇ ಕಸಿದುಕೊಳ್ಳಲಾಗುತ್ತಿದೆ ಎಂದು ಸಂದರ್ಶನವೊಂದರಲ್ಲಿ ಮಾರ್ಮಿಕವಾಗಿ ಶಾ ನುಡಿದಿದ್ದಾರೆ.

ನಾನೊಬ್ಬ ಮುಸ್ಲಿಂ, ನನ್ನ ಹೆಂಡತಿ ಹಿಂದೂ. ನನಗೆ ಈ ಬಗ್ಗೆ ಅರಿವಿದೆ. ಹಾಗಾಗಿ ನನಗೆ ಈ ದೇಶದಲ್ಲಿ ಅಭದ್ರತೆ ಕಾಡುತ್ತಿಲ್ಲ. ತುಂಬಾ ಚೆನ್ನಾಗಿಯೇ ನಾನು ಬದುಕುತ್ತಿದ್ದೇನೆ. ಈ ಬದುಕು ಎಲ್ಲರದ್ದೂ ಆಗಬೇಕು ಎನ್ನುವುದು ನನ್ನ ಮಾತಿನ ಹಿಂದಿರುವ ಉದ್ದೇಶ ಎಂದಿದ್ದಾರೆ ನಾಸಿರುದ್ದೀನ್ ಶಾ.

Leave A Reply

Your email address will not be published.