ಆರ್‌ಎಸ್‌ಎಸ್‌ ವಿರುದ್ಧ ಮತ್ತೆ ಕೆಂಡಕಾರಿದ ಸಿದ್ದರಾಮಯ್ಯ !! | ರಾಜ್ಯಾದ್ಯಂತ “ಚಡ್ಡಿ ಸುಡುವ ಅಭಿಯಾನ” ಆರಂಭಿಸುವುದಾಗಿ ಎಚ್ಚರಿಕೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ವಿರುದ್ಧ ಸದಾ ಕೆಂಡಕಾರುವ ರಾಜಕಾರಣಿ ಎಂದರೆ ಅದು ಸಿದ್ದರಾಮಯ್ಯ ಎಂದೇ ಹೇಳಬಹುದು. ಅಂತೆಯೇ ಇದೀಗ ವಾಗ್ದಾಳಿ ಮುಂದುವರಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ರಾಜ್ಯದಾದ್ಯಂತ “ಚಡ್ಡಿ ಸುಡುವ ಅಭಿಯಾನ” ಆರಂಭಿಸುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು, ಆರ್‌ ಎಸ್.ಎಸ್‌ ನವರು ಹಿಂದೆ ಚಡ್ಡಿ ಹಾಕುತ್ತಿದ್ದರು, ಈಗ ಪ್ಯಾಂಟ್‌ ಹಾಕುತ್ತಿದ್ದಾರೆ. ನಮ್ಮವರು ಪ್ರತಿಭಟನೆ ಸಂದರ್ಭದಲ್ಲಿ ಸಾಂಕೇತಿಕವಾಗಿ ಒಂದೇ ಒಂದು ಚಡ್ಡಿ ಸುಟ್ಟು ಹಾಕಿದ್ದಾರೆ. ಅದು ಪೊಲೀಸರಿಗೆ ಮತ್ತು ಸರ್ಕಾರಕ್ಕೆ ದೊಡ್ಡ ಅಪರಾಧವಾಗಿ ಕಂಡಿದೆ ಎಂದು ಹೇಳಿದ್ದಾರೆ.

ಅವರೇನು ಮನೆಗೆ ಬೆಂಕಿ ಹಚ್ಚುವ ಅಥವಾ ಬೆಂಕಿಯನ್ನು ಸಮಾಜ ವಿರೋಧಿ ಕೆಲಸಕ್ಕೆ ಬಳಸಿಲ್ಲ. ಇದು ಕಾನೂನು ವಿರೋಧಿ ಕೃತ್ಯ ಹೇಗಾಗುತ್ತದೆ? ಕಾನೂನು ಉಲ್ಲಂಘನೆಗಾಗಿ ಗುಂಪುಗೂಡಿರುವುದು ಹೇಗಾಗುತ್ತದೆ ? ಒಬ್ಬರೇ ಪ್ರತಿಭಟನೆ ಮಾಡುವುದಕ್ಕಾಗುತ್ತದೆಯೇ ? ಅನ್ಯಾಯದ ವಿರುದ್ಧ, ನ್ಯಾಯಕ್ಕಾಗಿ ಹೋರಾಟ ಮಾಡುವುದು ಸಂವಿಧಾನ ನಮಗೆ ಕೊಟ್ಟ ಹಕ್ಕು.ಅದು ಮೂಲಭೂತ ಹಕ್ಕು. ಪ್ರತಿಭಟನೆ ವೇಳೆ ಆರ್‌ಎಸ್‌ಎಸ್‌ ನವರ ಚಡ್ಡಿಯನ್ನು ಸುಟ್ಟು ಹಾಕಿದ್ದಾರೆ. ಒಂದೇ ಒಂದು ಚಡ್ಡಿ ಸುಟ್ಟಿದ್ದು ಪೊಲೀಸರಿಗೆ, ಸರ್ಕಾರದವರಿಗೆ ದೊಡ್ಡ ಅಪರಾಧವಾಗಿದೆ. ಅವರೇನು ಮನೆಗೆ ಬೆಂಕಿ ಹಚ್ಚೋಕೆ ಹೋಗಿರಲಿಲ್ಲ. ಕಾಂಪೌಂಡ್ ಗೇಟ್ ತೆಗೆದು ಒಳಗೆ ಹೋಗಿದ್ದಾರೆ. ಮನೆಗೆ ಪ್ರವೇಶ ಮಾಡಿಲ್ಲ. ಆಗ ಪೊಲೀಸರು ಏನು ಮಾಡುತ್ತಿದ್ದರು? ತಡೆಯಬೇಕಿತ್ತು ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಎಲ್ಲಾದಕ್ಕೂ ಮನೆಗೆ ಬೆಂಕಿ ಹಾಕುತ್ತಾರಾ? ಚಡ್ಡಿ ಸುಟ್ಟಿರೋದು, ಅದು ಒಂದೇ ಒಂದು ಚಡ್ಡಿ ಸುಟ್ಟಿರೋದು. ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಹಲ್ಲೆ ಮಾಡಿದವರ ಮೇಲೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ‘ಚಡ್ಡಿ ಸುಡುವ ಅಭಿಯಾನ’ ಶುರು ಮಾಡ್ತೇವೆ ಎಂದಿದ್ದಾರೆ.

ಶಿವಮೊಗ್ಗದಲ್ಲಿ ಹರ್ಷ ಎಂಬ ಯುವಕನ ಕೊಲೆಯಾದಾಗ ಮಾಜಿ ಸಚಿವ ಈಶ್ವರಪ್ಪ 144 ಸೆಕ್ಷನ್ ಇದ್ದಾಗಲೇ ಪ್ರತಿಭಟನೆ ಮಾಡಿ, ಮೆರವಣಿಗೆ ಮಾಡಿದರು. ಅದು ಕಾನೂನಿಗೆ ವಿರುದ್ಧವಾಗಲಿಲ್ಲವೇ? ಆಗ ಅವರ ಮೇಲೆ ಏನು ಕ್ರಮ ತೆಗೆದುಕೊಂಡಿದ್ದರು? ಗೃಹ ಸಚಿವರು ಏನು ಕ್ರಮ ಜರುಗಿಸಿದ್ರು? ಕೇಂದ್ರ ಸಚಿವ ಖೂಬಾ ಮೇಲೆ ಏನು ಕ್ರಮ ಜರುಗಿಸಿದ್ರು ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು.

Leave A Reply

Your email address will not be published.