ಬೈಲಹೊಂಗಲ : ಅಪಘಾತದಲ್ಲಿ ಮೃತಪಟ್ಟ ಯೋಧನ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ

Share the Article

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟ, ಸಮೀಪದ ಹೊಸೂರು ಗ್ರಾಮದ ಯೋಧ ಪ್ರಕಾಶ‌ ಮಡಿವಾಳಪ್ಪ ಸಂಗೊಳ್ಳಿ (28) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಶುಕ್ರವಾರ ನೆರವೇರಿತು.

ಬೆಳಗಾವಿಯ ಸುವರ್ಣ ವಿಧಾನಸೌಧದ ಹತ್ತಿರ, ರಾಷ್ಟ್ರೀಯ ಹೆದ್ದಾರಿ ಮೇಲೆ ಗುರುವಾರ ಸಂಜೆ ಅಪರಿಚಿತ ವಾಹನ ಡಿಕ್ಕಿ ಹೊಡೆದ‍ ಪರಿಣಾಮ, ಅವರು ಕೊನೆಯುಸಿರೆಳೆದರು. 2013ರಿಂದ ಬೆಳಗಾವಿಯ ಮರಾಠಾ ಲಘು ಪದಾತಿ ದಳದಲ್ಲಿ ಸೇವೆಯಲ್ಲಿದ್ದ ಅವರು, ಪತ್ನಿಯ ಸೀಮಂತ ಕಾರ್ಯಕ್ರಮಕ್ಕೆಂದು ರಜೆ ಪಡೆದಿದ್ದರು. ಬೈಕ್‌ ಮೇಲೆ ಹೊರಟಾಗ ಅವಘಡ ಸಂಭವಿಸಿದೆ.
ಶುಕ್ರವಾರ ನಸುಕಿನ ಹೊತ್ತಿಗೆ ಯೋಧನ ಪ್ರಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತಂದಾಗ, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. ಅಷ್ಟೊತ್ತಿಗೆ ಸುದ್ದಿ ಕಾಳ್ಗಿಚ್ಚಿನಂತೆ ಸುತ್ತಲಿನ ಹಳ್ಳಿಗಳಿಗೂ ಹರಡಿತು. ಅಪಾರ ಸಂಖ್ಯೆಯಲ್ಲಿ ಸೇರಿದ ಜನ ಯೋಧನ ಸಾವಿಗೆ ಕಂಬನಿ ಮಿಡಿದರು.

ಪ್ರಕಾಶ ಅವರ ಅಭಿಮಾನಿಗಳು, ಸ್ನೇಹಿತರು, ಸಹಪಾಠಿಗಳು ಸೇರಿಕೊಂಡು ತೆರೆದ ವಾಹನದಲ್ಲಿ ಕಳೇಬರದ ಮೆರವಣಿಗೆ ಮಾಡಿದರು. ಪುಷ್ಪಾಲಂಕೃತ ವಾಹನವು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಮನೆಗಳ ಮುಂದೆ ಬಂದಾಗ ಹಲವರು ವಾಹನ ಹತ್ತಿ ಯೋಧನ ಅಂತಿಮ ದರ್ಶನ ಪಡೆದರು. ದಾರಿಯುದ್ದಕ್ಕೂ ದೇಶಭಕ್ತಿ ಗೀತೆಗಳು ಮೊಳಗಿದವು. ಭಾರತ್‌ ಮಾತಾ ಕಿ ಜೈ, ಫೌಜಿ ಪ್ರಕಾಶ್‌ ಅಮರ್‌ ರಹೇ… ಎಂದು ಯುವಕರು ಘೋಷಣೆ ಹಾಕಿದರು.

Leave A Reply