ಜೀವಭಯದಿಂದ ಕುಟುಂಬ ಸಮೇತರಾಗಿ ಊರು ತೊರೆಯುತ್ತಿದ್ದಾರೆ ಕಾಶ್ಮೀರಿ ಪಂಡಿತರು !! | ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಜನದಟ್ಟಣೆ

ಇಲ್ಲಿನ ಜನ ಅದೆಷ್ಟೋ ವರ್ಷಗಳಿಂದ ಜೀವಭಯದಿಂದ ಬದುಕುತ್ತಿದ್ದಾರೆ. ಹಿಂದುಗಳಿಗೆ ಇದೀಗ ಕಾಶ್ಮೀರ ನರಕಕೂಪವಾಗಿ ಪರಿಣಮಿಸಿದೆ. ಹತ್ಯೆ ಭೀತಿಯಿಂದ ನೂರಾರು ಹಿಂದೂ ಕುಟುಂಬಗಳು ಕಾಶ್ಮೀರ ತೊರೆದಿವೆ ಎಂದು ಸಮುದಾಯದ ಮುಖಂಡರೊಬ್ಬರು ಮಾಧ್ಯಮಗಳಿಗೆ ತಿಳಿಸಿದ ಬೆನ್ನಲ್ಲೇ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ ಮಾರುದ್ದದ ಕ್ಯೂಗಳ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕುಲ್ಕಾಮ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತ (ಹಿಂದೂ) ಶಿಕ್ಷಕಿ ರಜನಿ ಬಲ್ಲಾ (36) ಅವರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಬಳಿಕ ಬ್ಯಾಂಕ್ ಮ್ಯಾನೇಜರ್ ವಿಜಯಕುಮಾರ್ ಅವರನ್ನು ಬ್ಯಾಂಕಿನೊಳಗೇ ಗುಂಡಿಕ್ಕಿ ಹತ್ಯೆ ನಡೆಸಿದ್ದರು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಹಿಂದೂ ಕುಟುಂಬಗಳು ಕಾಶ್ಮೀರ ತೊರೆಯಲಾರಂಭಿಸಿವೆ.

ಕಾಶ್ಮೀರದ ಬಾರಮುಲ್ಲಾ ಪ್ರದೇಶದಲ್ಲಿ ವಾಸಿಸುತ್ತಿರುವ 300 ಹಿಂದೂ ಕುಟುಂಬಗಳ ಪೈಕಿ ಅರ್ಧಕ್ಕೂ ಹೆಚ್ಚು ಆ ಪ್ರದೇಶ ತೊರೆದಿವೆ ಎಂದು ಅಲ್ಲಿನ ‘ಹಿಂದೂ ಕಾಶ್ಮೀರಿ ಪಂಡಿತ್ ಕಾಲೊನಿ’ಯ ಅಧ್ಯಕ್ಷ ಅವತಾರ್ ಕೃಷ್ಣ ಭಟ್ ತಿಳಿಸಿದ್ದಾರೆ. ‘ಹಿಂದೂಗಳ ಹತ್ಯೆಯಿಂದ ಅವರು ಭೀತರಾಗಿದ್ದಾರೆ. ಸರ್ಕಾರದ ಪ್ರತಿಕ್ರಿಯೆಗಾಗಿ ನಾವು ಕಾಯುತ್ತಿದ್ದೇವೆ. ನಾಳೆ ನಾವೂ ಕೂಡ ಇಲ್ಲಿಂದ ತೆರಳಲಿದ್ದೇವೆ. ಕಾಶ್ಮೀರದ ಹೊರಭಾಗದಲ್ಲಿ ನಮಗೆ ಪುನವರ್ಸತಿ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೆವು’ ಎಂದು ಅವರು ಹೇಳಿದ್ದಾರೆ.

ಹಿಂದೂಗಳು ಇರುವ ಪ್ರದೇಶವನ್ನು ಸದ್ಯ ಪೊಲೀಸರು ಸುತ್ತುವರಿದಿದ್ದಾರೆ. ಕಾಶ್ಮೀರಿ ಪಂಡಿತ ಸಮುದಾಯದ ಸರ್ಕಾರಿ ನೌಕರರು ಇರುವ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ. ಹಿಂದೂ ಕುಟುಂಬಗಳು ಕಾಶ್ಮೀರ ತೊರೆಯುತ್ತಿರುವ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ಸ್ಥಳೀಯಾಡಳಿತ ನಿರಾಕರಿಸಿದೆ. ಆದರೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸರದಿ ಸಾಲಿನಲ್ಲಿ ಪಂಡಿತರು ನಿಂತಿರುವ ದೃಶ್ಯವನ್ನು ರಾಹುಲ್ ಗಾಂಧಿ ಸಹಿತ ಹಲವು ನಾಯಕರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಕಾಶ್ಮೀರಿ ಪಂಡಿತರ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಮ್ಮುಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕಳೆದ ತಿಂಗಳು ಭರವಸೆ ನೀಡಿದ್ದರು. ಆದರೆ ಅಲ್ಲಿನ ಜನರಿಗೆ ಭದ್ರತೆಯ ಕುರಿತು ಯಾವುದೇ ನಂಬಿಕೆ ಇಲ್ಲ. 1990ರಿಂದ ಇಲ್ಲಿಯವರೆಗೆ ಸುಮಾರು 64,827 ಕಾಶ್ಮೀರ ಪಂಡಿತರು ಕಾಶ್ಮೀರ ತೊರೆದಿದ್ದಾರೆ ಎಂದು ಹೇಳಲಾಗಿದೆ.

Leave A Reply

Your email address will not be published.