ಚಾರ್ಮಾಡಿ ಘಾಟ್ ನಲ್ಲಿ ದೇವಿ ಹೇಳಿದ ಸ್ಥಳದಲ್ಲಿಯೇ ದೊರಕಿತು ಮೂಲವಿಗ್ರಹ !! | ದೈವದ ಮೇಲಿದ್ದ ಭಕ್ತಿ ಇದೀಗ ಇಮ್ಮಡಿ

ನಮ್ಮಲ್ಲಿ ಹಲವರಿಗೆ ದೈವದ ಮೇಲೆ ವಿಶೇಷ ನಂಬಿಕೆ ಇದೆ. ಸದಾ ನಮ್ಮನ್ನು ದೈವ ಕಾಪಾಡುತ್ತದೆ ಎಂಬುದಕ್ಕೆ ಈ ಘಟನೆಯೊಂದು ಪುಷ್ಠಿ ನೀಡಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಆಲೇಖಾನ್ ಹೊರಟ್ಟಿ ಸಮೀಪದ ಇತಿಹಾಸ ಪ್ರಸಿದ್ಧ ಗುಳಿಗಮ್ಮ ದೇವಿಯ ಮೂಲ ವಿಗ್ರಹ ಆ ದೇವಿ ಹೇಳಿದ ಜಾಗದಲ್ಲೇ ಪತ್ತೆಯಾಗಿದ್ದು, ಸ್ಥಳಿಯರು ಹಾಗೂ ಈ ಭಾಗದ ಪ್ರವಾಸಿಗರಿಗೆ ಗುಳಿಗಮ್ಮ ದೇವಿಯ ಮೇಲಿದ್ದ ದೈವದ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ.

ಕಳೆದ ಏಪ್ರಿಲ್ 24ರಂದು ಗುಳಿಗಮ್ಮ ದೇವಿಯ ವಾರ್ಷಿಕ ಪೂಜಾ ಮಹೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಗುಳಿಗಮ್ಮ ದೇವಿಯ ದೈವದ ದರ್ಶನದಲ್ಲಿ ಕ್ಷೇತ್ರದ ನಾಲ್ಕು ಕಿ.ಮೀ. ದೂರದ ಮರವೊಂದರ ಕೆಳಗೆ ಗುಳಿಗಮ್ಮ ದೇವಿಯ ಮೂಲ ವಿಗ್ರಹ ಇದೆ. ಹುಡುಕಿದರೆ ವಿಗ್ರಹ ಸಿಗಲಿದೆ ಎಂದು ದೈವದ ದರ್ಶನದಲ್ಲಿ ದೇವಿಯೇ ಹೇಳಿದ್ದಳು. ಹಾಗಾಗಿ, ಗುಳಿಗಮ್ಮ ದೇವಿಯ ಕ್ಷೇತ್ರ ಅಭಿವೃದ್ಧಿಯ ಪದಾಧಿಕಾರಿಗಳು ಗುಳಿಗಮ್ಮ ದೇವಿಯ ದೇವಸ್ಥಾನದಿಂದ ಮೂರು-ನಾಲ್ಕು ಕಿ.ಮೀ. ದೂರದಲ್ಲಿ ಹುಡುಕಾಟ ನಡೆಸಿದ್ದಾರೆ. ಆಗ ಆಲೇಖಾನ್ ಎಸ್ಟೇಟ್ ಒಂದರ ಮರದ ಬುಡದಲ್ಲಿ ದೇವಿಯ ಮೂಲವಿಗ್ರಹ ಪತ್ತೆಯಾಗಿದೆ.

ದೇವಸ್ಥಾನದಿಂದ ನಾಲ್ಕು ಕಿ.ಮೀ. ದೂರದ ಮರವೊಂದರ ಕೆಳಗೆ ನೋಡಿದಾಗ ದೇವಿಯ ಕಂಚಿನಮೂರ್ತಿ, ಗಂಟೆ ಹಾಗೂ ಕತ್ತಿ ಪತ್ತೆಯಾಗಿವೆ. ನೂರಾರು ವರ್ಷಗಳ ಹಿಂದೆ ಈ ಜಾಗದಲ್ಲಿ ಚಾಮುಂಡೇಶ್ವರಿ, ಗುಳಿಗಮ್ಮ, ಬಬ್ಬುಸ್ವಾಮಿಗೆ ವಿಜೃಂಭಣೆಯಿಂದ ಪೂಜಾ, ವಿಧಿ-ವಿಧಾನಗಳು ನಡೆಯುತ್ತಿದ್ದವು. ಈಗ ಗುಳಿಗಮ್ಮ ದೇವಿ ಹೇಳಿರೋ ಜಾಗದಲ್ಲೇ ಪುರಾತನ ಮೂರ್ತಿಗಳು ಸಿಕ್ಕಿರೋದು ಕ್ಷೇತ್ರ ಹಾಗೂ ದೇವಿಯ ಮಹಿಮೆಯನ್ನು ಇಮ್ಮಡಿಗೊಳಿಸಿದೆ.

ದೇವಿ ಹೇಳಿದ ಜಾಗದಲ್ಲೇ ಮೂಲ ವಿಗ್ರಹ ಪತ್ತೆಯಾದ ಹಿನ್ನೆಲೆ ಭಕ್ತರು ದೇವಾಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಈಗ ಸಿಕ್ಕಿರೋ ಪುರಾತನ ಮೂರ್ತಿಗಳನ್ನು ಅದೇ ಜಾಗದಲ್ಲಿ ಪುನರ್ ಪ್ರತಿಷ್ಠಾಪಿಸಿ ದೇವಿಯ ಹಿಂದಿನ ಗತಕಾಲದ ವೈಭವವನ್ನು ಮತ್ತೆ ಮರುಕಳಿಸಲು ಯೋಚಿಸಿದ್ದಾರೆ. ಆದರೆ, ಈಗ ಗುಳಿಗಮ್ಮ ದೇವಿ ಹೇಳಿರೋ ಜಾಗದಲ್ಲೇ ಮೂಲ ವಿಗ್ರಹ ಸಿಕ್ಕಿರೋದು ಮುಂದಿನ ದಿನಗಳಲ್ಲಿ ದೈವ ದರ್ಶನದ ಹೇಳಿಕೆಯಂತೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಹೇಳಿದ್ದಾರೆ.

ಯಾರು ಈ ಗುಳಿಗಮ್ಮ ??

ಈ ಗುಳಿಗಮ್ಮ ದೇವಿ ಅಂದ್ರೆ ಯಾರಿಗೂ ಅಷ್ಟಾಗಿ ಗೊತ್ತಿಲ್ಲ. ಆದರೆ, ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಚಾರ್ಮಾಡಿ ಘಾಟ್‍ನ ಮಾರ್ಗದಲ್ಲಿ ನೆಲೆ ನಿಂತಿರುವವಳೇ ಗುಳಿಗಮ್ಮ ದೇವಿ. ನಿತ್ಯ ಸಾವಿರಾರು ವಾಹನಗಳು ಓಡಾಡುವ ಈ ದಟ್ಟಾರಣ್ಯದ ಹಾವುಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ಚಲಿಸಲು ಗಟ್ಟಿ ಗುಂಡಿಗೆ ಬೇಕು.

ಈ ಮಾರ್ಗ ಎಷ್ಟು ಸೌಂದರ್ಯ-ಅನಿವಾರ್ಯವೋ ಅಷ್ಟೆ ಅಪಾಯ ಕೂಡ. ಆದರೆ, ಈಕೆ ಬಗ್ಗೆ ಗೊತ್ತಿರುವವರು ಈ ಮಾರ್ಗದಲ್ಲಿ ಸಂಚರಿಸುವಾಗ ಈ ದೇವಿಗೆ ಕೈಮುಗಿಯದೆ ಮುಂದೆ ಹೋಗಲ್ಲ. ಚಾರ್ಮಾಡಿ ರಸ್ತೆಯ ಅಲೇಖಾನ್ ಹೊರಟ್ಟಿ ಗ್ರಾಮದ ಆರಂಭದಲ್ಲೇ ಈ ದೇವಿ ವಿರಾಜಮಾನವಾಗಿ ನೆಲೆ ನಿಂತಿದ್ದಾಳೆ. ಅಂದು ಈಕೆಗೆ ಮೂರ್ತಿ ಇರಲಿಲ್ಲ. ಇಂದು ಈಕೆಯ ಪುರಾತನ ವಿಗ್ರಹ ಸಿಕ್ಕಿದೆ. ಅಂದು ಕಲ್ಲಿನ ಮೂರ್ತಿಗೆ ಕೈಮುಗಿಯುತ್ತಿದ್ದರು. ಇನ್ಮುಂದೆ ಮೂರ್ತಿ ರೂಪದಲ್ಲಿ ನೆಲೆ ನಿಲ್ಲುತ್ತಾಳೆ. ಈಕೆಯದ್ದು ಅಪಾರ ಶಕ್ತಿ ಅನ್ನೋದು ಭಕ್ತರ ನಂಬಿಕೆ. ವರ್ಷ ಪೂರ್ತಿ ಈ ಮಾರ್ಗದಲ್ಲಿ ಸಂಚರಿಸುವವರನ್ನು ಈಕೆಯೇ ಕಾಯುತ್ತಾಳೆ ಅನ್ನೋದು ಸಾವಿರಾರು ಜನರ ನಂಬಿಕೆ.

ಕಳೆದ ಎರಡ್ಮೂರು ವರ್ಷಗಳಿಂದ ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. ಒಂದೇ ರಾತ್ರಿಗೆ 22 ಇಂಚಿನಷ್ಟು ಮಳೆ ಸುರಿದು ಜಿಲ್ಲೆಯೇ ಅಲ್ಲೋಲ-ಕಲ್ಲೋಲವಾಗಿತ್ತು. ಮಳೆಗಾಲದಲ್ಲಿ ಅತಿಹೆಚ್ಚು ಭೂ ಕುಸಿತ, ಗುಡ್ಡ ಕುಸಿತವಾದರೂ ಕೂಡ ಸಾವಿರಾರು ವಾಹನಗಳಲ್ಲಿ ಸಂಚರಿಸುವ ಯಾರೊಬ್ಬರಿಗೂ ಸಣ್ಣ ಅನಾಹುತ-ಅಪಾಯ ಕೂಡ ಆಗಿಲ್ಲ.

ಚಾರ್ಮಾಡಿ ಘಾಟಿಯೇ ಅಲ್ಲೋಲ-ಕಲ್ಲೋಲವಾದರೂ ಈ ಪ್ರದೇಶ ಕಿಂಚಿತ್ತು ಅಲುಗಾಡಿರಲಿಲ್ಲ. ದೇವಿ ನೆಲೆಸಿರೋ ನೂರು ಮೀಟರ್ ಅಂತರದಲ್ಲಿ ರಸ್ತೆಯ ಎರಡು ಭಾಗ ಕುಸಿದಿದ್ದರೂ ಕೂಡ ಈಕೆ ಸ್ಥಳದ ಒಂದು ಹುಲ್ಲು ಕಡ್ಡಿಯೂ ಅಲುಗಾಡಿರಲಿಲ್ಲ. ಒಂದಿಂಚು ಭೂಮಿಯೂ ಕದಲಿರಲಿಲ್ಲ.

ಚಾರ್ಮಾಡಿ ಘಾಟಿಗೆ ಅಂಟಿಕೊಂಡಂತಿರುವ ಆಲೇಖಾನ್ ಹೊರಟ್ಟಿ ಗ್ರಾಮದ ರಸ್ತೆಯ ಹಲವೆಡೆ ಬೃಹತ್ ಪ್ರಮಾಣದ ಬಂಡೆಗಳು ಬಿದ್ದರೂ ಗ್ರಾಮ, ಗ್ರಾಮದ ಜನರಿಗೆ ಯಾವುದೇ ತೊಂದರೆಯಾಗಿಲ್ಲ. ಹಾಗಾಗಿ, ಚಾರ್ಮಾಡಿ ಘಾಟಿಯನ್ನು ರಕ್ಷಿಸಿ, ಉಳಿಸಿ, ಜನರನ್ನೂ ಕಾಪಾಡುತ್ತಿರುವುದು ಈಕೆಯೇ ಅನ್ನೋದು ಸ್ಥಳಿಯರು-ಸಾವಿರಾರು ಪ್ರವಾಸಿಗರ ನಂಬಿಕೆ ಆಗಿದೆ.

Leave A Reply

Your email address will not be published.