ಹಳೆಯಂಗಡಿ: ಇನ್ನೇನು ವರ-ವಧುವಿಗೆ ತಾಳಿಕಟ್ಟಬೇಕು…ಅಷ್ಟರಲ್ಲಿ ವರ-ವಧು ಜೊತೆ ಪರಾರಿ! ಮದುವೆಗೆ ಆ ಮಹಿಳೆ ಬಂದಿದ್ದೇ ಕಾರಣ!!!

Share the Article

ಇದೊಂದು ಮದವೆಯ ಕಥೆ. ವರ ವಧು ಮದುವೆ ಮಂಟಪದಲ್ಲಿ ತಾಳಿ ಕಟ್ಟಿ, ಹೊಸ ಬಾಳಿಗೆ ಹೆಜ್ಜೆಯಿಡುವ ತವಕದಲ್ಲಿದ್ಧರು. ಇಬ್ಬರೂ ಕಣ್ಸನ್ನೆಯಲ್ಲೇ ಮಾತನಾಡುತ್ತಾ ಇದ್ದರು. ಮದುವೆ ನೋಡಲು ತುಂಬಾ ಜನ ನೆಂಟರಿಷ್ಟರು ಬಂದಿದ್ದರು. ನಗು ತುಂಬಿ ತುಳುಕುತಾ ಇತ್ತು. ಪುರೋಹಿತರು ತಾಳಿ ಕಟ್ಟಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಸ್ವಲ್ಪ ಹೊತ್ತಲ್ಲಿ ವಧುವಿಗೆ ವರ ತಾಳಿ ಕಟ್ಟುವ ಶುಭಗಳಿಗೆ ನಡೆಯಬೇಕು ಎನ್ನುವ ಹಂತದಲ್ಲಿ ಅದೇ ವರನು ಏಕಾಏಕಿ ವಧುವಿನೊಂದಿಗೆ ಪರಾರಿಯಾಗಿದ್ದಾನೆ. ಏಕೆ ಗೊತ್ತೇ? ಮದುವೆಯಾಗೋ ವಧುವಿನ ಜೊತೆಯೇ ವರ ಓಡಿ ಹೋಗಿದ್ದು ಇದೇ ಮೊದಲು ಅಂತ ಕಾಣುತ್ತೆ. ಇಂತಹ ವಿಚಿತ್ರ ಘಟನೆ ನಡೆದಿರುವುದು ಮೂಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಪಡುಪಣಂಬೂರು ಬಳಿಯ ಮದುವೆ ಸಭಾಂಗಣವೊಂದರಲ್ಲಿ ನಡೆದಿದೆ.

ಶಿವಮೊಗ್ಗ-ಮೂಡುಬಿದಿರೆ ರಸ್ತೆಯಲ್ಲಿ ಸಂಚರಿಸುವ ಖಾಸಗಿ ಬಸ್‌ನ ಚಾಲಕನಾಗಿರುವ ತೀರ್ಥಹಳ್ಳಿ ಮೂಲದ ನಲ್ವತ್ತರ ಹರೆಯದ ವರನೇ ಮಂಟಪದಿಂದ ಸಸಿಹಿತ್ಲು ಮೂಲದ ವಧುವನ್ನು ಅಪಹರಿಸಿದವ. ಇವರಿಬ್ಬರು ಪರಸ್ಪರ ಪ್ರೀತಿಸಿದ್ದರು ಎನ್ನಲಾಗಿದೆ.

ಸಭಾಂಗಣದಲ್ಲಿ ಮದುವೆ ಶಾಸ್ತ್ರ ನಡೆಯುತ್ತಿರುವಾಗ ವರನ ಮೊದಲನೇ ಹೆಂಡತಿ ಎಂದು ಹೇಳಿಕೊಂಡು ಮಹಿಳೆಯೊಬ್ಬರು ಬಂದು ತಗಾದೆ ತೆಗೆದು, ವರನಿಗೆ ಈ ಮೊದಲೇ ಒಂದು ಮದುವೆಯಾಗಿದ್ದು ಗಂಡು ಮಗುವಿದೆ ಎಂದು ಬೊಬ್ಬಿಟ್ಟಿದ್ದಾರೆ. ಇದೇ ಸಂದರ್ಭ ಸಭಾಂಗಣದ ಹೊರಭಾಗದಲ್ಲಿ ವರ ಹಾಗೂ ವಧುವಿನ ಫೋಟೋ ಶೂಟಿಂಗ್ ನಡೆಯುತ್ತಿತ್ತು. ವರನಿಗೆ ಗಲಾಟೆಯ ಮಾಹಿತಿ ಸಿಕ್ಕ ತತ್‌ಕ್ಷಣ ಆತ ಅಲ್ಲಿಂದಲೇ ವಧುವನ್ನು ಆಕೆಯ ಮೈಮೇಲಿನ ಚಿನ್ನಾಭರಣ ಸಹಿತ ತನ್ನ ಕಾರಿನಲ್ಲಿ ಕುಳ್ಳಿರಿಸಿಕೊಂಡು ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆತನ ಕಡೆಯಿಂದ ಐದು ಮಂದಿ ಮಾತ್ರ ಮದುವೆಗೆ ಬಂದಿದ್ದರು ಎಂದು ಹೇಳಲಾಗಿದೆ.

ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ವಧುವಿನ ಪೋಷಕರು ನಡೆದ ಘಟನೆಯೊಂದಿಗೆ ದೂರು ಮಾತ್ರ ನೀಡಿದ್ದು ಅಧಿಕೃತವಾಗಿ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

Leave A Reply

Your email address will not be published.