ಉಪ್ಪಿನಂಗಡಿ : ಚಿಕಿತ್ಸೆಗೆಂದು ಬಂದ ವ್ಯಕ್ತಿ ಸ್ವಲ್ಪ ಹೊತ್ತಿನಲ್ಲೇ ಶವವಾಗಿ ಪತ್ತೆ !

ಹಿಂದಿ ಭಾಷೆ ಮಾತನಾಡುವ ವ್ಯಕ್ತಿಯೋರ್ವ ಉಪ್ಪಿನಂಗಡಿ ಬಳಿಯ ಕ್ಲಿನಿಕ್ ಒಂದಕ್ಕೆ ರಾತ್ರಿ ಆಗಮಿಸಿದ್ದು, ಈತನನ್ನು ಪರೀಕ್ಷಿಸಿದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ, ಈತನ ಎದೆಬಡಿತ ಕಮ್ಮಿ ಇರುವುದರಿಂದ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಲು ತಿಳಿಸಿದಾಗ, ಆತ ನನಗೆ ಇಲ್ಲಿ ಯಾರೂ ಇಲ್ಲ ಎಂದಿದ್ದು, ಆಗ ವೈದ್ಯರು ಆತನನ್ನು ಅಲ್ಲೇ ಕುಳಿತುಕೊಳ್ಳಲು ಹೇಳಿದ್ದಾರೆ. ನಂತರ 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ ಆ್ಯಂಬುಲೆನ್ಸ್ ಸ್ವಲ್ಪ ತಡವಾಗಿ ಬಂದಿತ್ತಾದರೂ, ವ್ಯಕ್ತಿಯನ್ನು ಹುಡುಕಿದಾಗ ಆತ ಅಲ್ಲಿ ಇರಲಿಲ್ಲ.

ಆದರೆ ಸುಮಾರು ಎರಡು ಗಂಟೆಯ ನಂತರ ಆಸ್ಪತ್ರೆಯ ಹೊರಗಡೆ ಸ್ವಲ್ಪ ದೂರದಲ್ಲಿ ಈತ ಮಲಗಿದ್ದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ವೈದ್ಯರಲ್ಲಿ ಈತ ತನ್ನ ಹೆಸರನ್ನು ರಾಜೇಶ್ ಎಂದು ಹೇಳಿದ್ದು, ತಾನು ಇಲ್ಲಿ ಕೆಲಸಕ್ಕಿರುವುದಾಗಿ ತನ್ನ ಮಾಲಕನ ಮೊಬೈಲ್ ಸಂಖ್ಯೆ ಕೊಟ್ಟಿದ್ದ. ಆದರೆ ಕರೆ ಮಾಡಿದಾಗ ಆ ನಂಬರ್ ಸ್ವಿಚ್ ಆಫ್ ಬರುತ್ತಿದೆ.

ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ

Leave A Reply

Your email address will not be published.