ಮಂಗಳೂರು:ರಾಹುಲ್ ಅಲಿಯಾಸ್ ಕಕ್ಕೆಯ ಕೊಲೆಯ ಹಿಂದಿದೆ ಅದೊಂದು ಕಾರಣ!! ಪಾತಕ ಲೋಕದಲ್ಲಿ ಹೆಚ್ಚು ಪಳಗದಿದ್ದರೂ ಆತನಲ್ಲಿ ಭಯ ಕಾಡಿದ್ದು ಯಾಕೆ!??

ಮಂಗಳೂರು: ಕೆಲ ಸಮಯಗಳಿಂದ ನೆತ್ತರ ಕಲೆ ಕಾಣದೆ ಶಾಂತವಾಗಿದ್ದ ಮಂಗಳೂರಿನಲ್ಲಿ ಏಪ್ರಿಲ್ 28 ರಂದು ಓರ್ವ ರೌಡಿಶೀಟರ್ ನನ್ನು ಬರ್ಬರವಾಗಿ ಕೊಚ್ಚಿ ಕೊಲೆ ನಡೆಸುವ ಮೂಲಕ ಮತ್ತೊಮ್ಮೆ ನೆತ್ತರ ಕೋಡಿ ಹರಿಸಲಾಗಿದೆ. ಹೌದು, ನಿನ್ನೆಯ ದಿನ ಇಳಿ ಸಂಜೆಯ ಹೊತ್ತಿಗೆ ಸಣ್ಣಪುಟ್ಟ ಪುಂಡಾಟಿಕೆಗಳಲ್ಲಿ ತೊಡಗಿಸಿಕೊಂಡು ರೌಡಿಶೀಟರ್ ಪಟ್ಟಿಗೆ ಸೇರ್ಪಡೆಯಾಗಿದ್ದ ರಾಹುಲ್ ಹೊಯ್ಗೆಬಜಾರ್ ಎಂಬಾತನನ್ನು ನಾಲ್ವರು ಸೇರಿಕೊಂಡು ಎಮ್ಮೆಕೆರೆ ಎಂಬಲ್ಲಿ ಕಡಿದು ಹತ್ಯೆನಡೆಸಿದ್ದು, ಸದ್ಯ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಯಾರೀತ ರಾಹುಲ್ ಅಲಿಯಾಸ್ ಕಕ್ಕೆ!?
ರಾಹುಲ್ ಅಲಿಯಾಸ್ ಕಕ್ಕೆ ಎಂಬಾತ ಪಾತಕ ಲೋಕದಲ್ಲಿ ಹೆಚ್ಚೇನು ಪಳಗಿದವನಲ್ಲ. ಆದರೂ ಆತನ ಮೇಲಿನ ಜಿದ್ದಿಗೆ ಅದೊಂದು ಸಣ್ಣ ಮಟ್ಟಿನ ಜಗಳವೇ ಕಾರಣವಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಎಮ್ಮೆಕೆರೆ ಪ್ರದೇಶದಲ್ಲಿ ನಡೆಯುತ್ತಿದ್ದ ಕೋಳಿ ಅಂಕವೊಂದಕ್ಕೆ ತನ್ನ ಗೆಳೆಯನೊಂದಿಗೆ ತೆರಳಿ ವಾಪಾಸ್ಸಾಗುತ್ತಿದ್ದಾಗ ನಾಲ್ವರ ತಂಡವೊಂದು ಆತನ ಕೊಲೆಗೆ ಹೊಂಚು ಹಾಕಿತ್ತು. ಕೂಡಲೇ ಅಪಾಯ ಅರಿತ ಕಕ್ಕೆ, ಅಲ್ಲೇ ಪಕ್ಕದ ದೇವಸ್ಥಾನವೊಂದರ ಕಾಂಪೌಂಡ್ ಹಾರಿ ಓಡಿ ಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಬೆನ್ನಟ್ಟಿದ ತಂಡ ಎಳೆದು ತಂದು ಯದ್ವಾತದ್ವ ಕಡಿದು ಪರಾರಿಯಾಗಿದೆ.

ಗಂಭೀರ ಗಾಯಗೊಂಡಿದ್ದ ರಾಹುಲ್(ಕಕ್ಕೆ)ಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದರು. ಕೊಲೆ ನಡೆಸಿದ ಆರೋಪಿಗಳನ್ನು ಎಮ್ಮೆಕೆರೆ ನಿವಾಸಿಗಳಾದ ಮಹೇಂದ್ರ ಶೆಟ್ಟಿ, ಅಕ್ಷಯ್, ಸುಶೀಲ್ ಸಹಿತ ನಾಲ್ವರು ಎಂದು ಗುರುತಿಸಲಾಗಿದೆ.

ಹಳೆ ವೈಷಮ್ಯವೇ ಕೊಲೆಗೆ ಕಾರಣ!
ರಾಹುಲ್ ಗ್ಯಾಂಗಿಗೂ ಎಮ್ಮೆಕೆರೆ ಮಹೇಶ್ ಶೆಟ್ಟಿ ಗ್ಯಾಂಗಿಗೂ ದ್ವೇಷವಿತ್ತು ಎನ್ನಲಾಗಿದ್ದು, ಎರಡು ವರ್ಷಗಳ ಹಿಂದೆ ಬೋಳಾರದಲ್ಲಿ ರಾಹುಲ್ ಹಾಗೂ ಆತನ ಗೆಳೆಯರು ಮಹೇಶ್ ಶೆಟ್ಟಿ ಹಾಗೂ ಆತನ ಸಹೋದರನಿಗೆ ಇರಿದು ಹಲ್ಲೆ ನಡೆಸಿದ್ದರು. ಇದೇ ದ್ವೇಷ ಕೊಲೆಗೆ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದ್ದು, ಹಲ್ಲೆ ನಡೆಸಿದ ಬಳಿಕ ರಾಹುಲ್ ಪ್ರಾಣಭಯದಿಂದಲೇ ಓಡಾಟ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

ಸದ್ಯ ಮಂಗಳೂರು ನಗರ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ರಕ್ತದ ಕಲೆಯಿಲ್ಲದೇ ಶಾಂತವಾಗಿದ್ದ ಮಂಗಳೂರಿನಲ್ಲಿ ಮತ್ತೊಮ್ಮೆ ರಕ್ತ ಹರಿಸಿದ ಗ್ಯಾಂಗ್ ನ್ನು ಹೆಡೆಮುರಿಕಟ್ಟಲು ಬಲೆ ಬೀಸಲಾಗಿದೆ.

Leave A Reply

Your email address will not be published.