ಮಂಗಳೂರು: ಸುರತ್ಕಲ್ ನ ಎನ್ಐಟಿಕೆ ಟೋಲ್ ಗೇಟ್ ರದ್ದು ಅನುಮಾನ !?? | ಮುಂದಿನ ಒಂದು ವರ್ಷಕ್ಕೆ ಮತ್ತೆ ಹೊಸ ಟೆಂಡರ್ ಕರೆದ ಸರ್ಕಾರ

ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ 60 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಟೋಲ್ ಗೇಟ್ ಮುಚ್ಚಬೇಕೆಂದು ಹೇಳಿದ್ದರು. ಹಾಗಾಗಿ ಸುರತ್ಕಲ್ ನ ಎನ್‌ಐಟಿಕೆ ಟೋಲ್ ಗೇಟ್ ರದ್ದಾಗುತ್ತದೆ ಎಂಬ ಮಾತು ಕೇಳಿ ಬರುತ್ತಿರುವಾಗಲೇ, ಮುಂದಿನ ಒಂದು ವರ್ಷಕ್ಕೆ ಸುರತ್ಕಲ್‌ ಎನ್‌ಐಟಿಕೆ ಟೋಲ್‌ನಲ್ಲಿ ಶುಲ್ಕ ಸಂಗ್ರಹಕ್ಕೆ ಮತ್ತೆ ಟೆಂಡರ್‌ ಕರೆದಿರುವ ಮಾಹಿತಿ ಸರಕಾರದ ವೆಬ್‌ಸೈಟ್‌ನಲ್ಲಿ ಲಭ್ಯವಾಗಿದೆ.

ಟೆಂಡರ್‌‌ನಲ್ಲಿ ವಾರ್ಷಿಕ ಬಿಡ್ 49.05 ಕೋಟಿ ಎಂದು ನಮೂದಿಸಲಾಗಿದೆ. ಸೆಂಟ್ರಲ್‌ ಇ ಪ್ರೊಕ್ಯೂರ್‌ವೆುಂಟ್‌ ಪೋರ್ಟಲ್‌ನಲ್ಲಿ ಮಾ. 23ರಂದು 6.45ಕ್ಕೆ ಹಾಕಲಾಗಿದ್ದು ಟೆಂಡರ್‌ ಹಾಕಲು ದಿನಾಂಕವನ್ನು ಅದೇ ದಿನ ನಿಗದಿ ಪಡಿಸಲಾಗಿದ್ದು ಎಪ್ರಿಲ್ 13ಕ್ಕೆ 11 ಗಂಟೆಗೆ ಕೊನೆಗೊಳ್ಳಲಿದ್ದು, ಎಪ್ರಿಲ್ 18ರಂದು ಟೆಂಡರ್‌ ಪರಿಶೀಲನೆ ನಡೆಯಲಿದೆ. ಎನ್‌ಎಚ್‌ಎಐನ ಕೇಂದ್ರ ಕಚೇರಿಯ ಕೆ.ವಿ. ಸಿಂಗ್‌ ಎನ್ನುವ ಅಧಿಕಾರಿಯ ಸಹಿಯಲ್ಲಿ ಹೊಸ ಟೆಂಡರ್‌ ಪ್ರಕಟವಾಗಿದೆ.

ಇನ್ನು ಹೊಸ ಟೆಂಡರ್‌ನಲ್ಲಿ ಶೇ 25ರಷ್ಟು ರಿಯಾಯಿತಿ ಗೊಂದಲ ಸೃಷ್ಟಿಸಿದ್ದು, ಎಲ್ಲ ರೀತಿಯ ವಾಹನಗಳಲ್ಲಿ ಪ್ರಯಾಣ ಮಾಡಿದವರು 24 ತಾಸಿನಲ್ಲಿ ಮರಳಿ ಬಂದಲ್ಲಿ ರಿಯಾಯಿತಿ ನೀಡಿದ್ದು, ಮರು ಪಾವತಿ ಬಗ್ಗೆ ಸ್ಪಷ್ಟನೆಯಿಲ್ಲ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು 60 ಕಿಮೀ ಅಂತರದಲ್ಲಿರುವ ಟೋಲ್‌ಗೇಟ್‌ಗಳನ್ನು ರದ್ದುಗೊಳಿಸುವುದಾಗಿ ಸಂಸತ್ತಿನಲ್ಲಿ ಹೇಳಿದ್ದರು. ಎನ್‌ಐಟಿಕೆ ಟೋಲ್‌ಗೇಟ್ ಅನ್ನು ನವಮಂಗಳೂರು ಪೋರ್ಟ್ ಟ್ರಸ್ಟ್‌ನೊಳಗೆ ಸ್ಥಳಾಂತರಿಸಲಾಗುವುದು ಎಂದು ಹೇಳಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೇ ಸಂಸ್ಥೆಯು ಗುತ್ತಿಗೆ ಪಡೆದು ಕಾಮಗಾರಿ ಮಾಡಿದ್ದಲ್ಲಿ ಮಾತ್ರ ಇದು ಅನ್ವಯ ಎನ್ನಲಾಗುತ್ತಿದೆ. ಅದರಂತೆ ತಲಪಾಡಿ, ಹೆಜಮಾಡಿ, ಸಾಸ್ತಾನ ನಡುವೆ ಮೂರರಲ್ಲಿ ಒಂದು ಹಾಗೂ ಬ್ರಹ್ಮರಕೊಟ್ಲು, ಸುರತ್ಕಲ್‌ ಟೋಲ್‌ಗ‌ಳಲ್ಲಿ ಒಂದು ರದ್ದಾಗುವ ಸಂಭವವಿದೆ.

ಸುರತ್ಕಲ್ ಎನ್‌ಐಟಿಕೆ ಟೋಲ್ ಪ್ಲಾಜಾ ರದ್ದುಗೊಳಿಸುವಂತೆ ಆಗ್ರಹಿಸಿ ಹಲವು ಸಂಘಟನೆಗಳು ಇತ್ತೀಚೆಗೆ ಬೃಹತ್ ಪ್ರತಿಭಟನೆ ನಡೆಸಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಇತರ ಮುಖಂಡರು ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇಲ್ಲಿಗೆ ಬಂದಾಗ ಈ ಕುರಿತು ಮನವಿ ಪತ್ರ ಸಲ್ಲಿಸಲಾಗಿತ್ತು.

Leave A Reply

Your email address will not be published.