ವಿಸ್ಮಯ ಸಾವು ಪ್ರಕರಣ : ರಾಜ್ಯದಲ್ಲೇ ತಲ್ಲಣ ಮೂಡಿಸಿದ ಈ ಪ್ರಕರಣದ ಆರೋಪಿ ಪತಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್|

ಕೇರಳ ಯುವ ವೈದ್ಯೆ ವಿಸ್ಮಯ ನಾಯರ್ ಆತ್ಮಹತ್ಯೆ ಪ್ರಕರಣದಲ್ಲಿ ಆಕೆಯ ಆರೋಪಿ ಪತಿ ಕಿರಣ್ ಕುಮಾರ್ ಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ.

ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಮೃತ ವಿಸ್ಮಯಾಳ ಪತಿಗೆ ಕೇರಳ ಹೈಕೋರ್ಟ್ ಜಾಮೀನು ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಕಿರಣ್ ಗೆ ಈಗ ಜಾಮೀನು ದೊರಕಿದೆ. ಈ ಜಾಮೀನು ದೊರಕಿರುವುದು ಕಿರಣ್ ಮುಖದಲ್ಲಿ ಮಂದಹಾಸ ಮೂಡಿಸಿದರೆ ಅನೇಕರ ಮನಸ್ಸಿನಲ್ಲಿ ಬೇಸರ ಉಂಟು ಮಾಡಿರುವುದಂತೂ ನಿಜ.

ಪ್ರಕರಣದ ಹಿನ್ನೆಲೆ : ವಿಸ್ಮಯ ಆತ್ಮಹತ್ಯೆ ಪ್ರಕರಣ ಇಡೀ ಕೇರಳದಲ್ಲಿ ಸಂಚಲನ ಮೂಡಿಸಿದ ಘಟನೆಯಾಗಿತ್ತು. ಆಗ ತಾನೇ ಮದುವೆಯಾಗಿ ಗಂಡನ ಮನೆಗೆ ಬಂದಿದ್ದ ಯುವತಿ ವಿಸ್ಮಯ ತನ್ನ ಗಂಡನ ಹಣದಾಹದ ಕರಾಳ ಮುಖವನ್ನು ಕಂಡಿದ್ದಳು. ಅಷ್ಟಕ್ಕೂ ಆಕೆಯ ಗಂಡ ಅನಾಗರಿಕನಲ್ಲ. ಆದರೆ ಆತ ಮಾಡಿದ ಕೆಲಸ ಮಾತ್ರ ನಾಗರಿಕ ಸಮಾಜ ಮೆಚ್ಚುವಂತದ್ದಲ್ಲ. ಈತ ಸರಕಾರಿ ಉದ್ಯೋಗಿಯಾಗಿದ್ದ. ವೃತ್ತಿಯಲ್ಲಿ ಕೇರಳದ ಮೋಟಾರು ವಾಹನ ವಿಭಾಗದ ಅಧಿಕಾರಿಯಾಗಿದ್ದ. ಒಳ್ಳೆಯ ಉದ್ಯೋಗ, ಕೈ ತುಂಬಾ ಸಂಬಳವಿದ್ದತೂ ಈತನ ದುರಾಸೆ ಯುವ ವೈದ್ಯೆ ಪತ್ನಿಯ ಪ್ರಾಣವನ್ನೇ ಕಸಿದುಕೊಳ್ಳುವಷ್ಟರ ಮಟ್ಟಿಗೆ ಹೋಯಿತು. ಶಿಕ್ಷೆಯಾಗಿ ಕೇರಳ ಸರಕಾರ ಆತನ ಉದ್ಯೋಗವನ್ನೇ ಕಸಿದುಕೊಂಡು ಜೈಲಿಗೇ ಅಟ್ಟಿಸಿತ್ತು.

ವಿಸ್ಮಯ, ಕಿರಣ್ ಮದುವೆ 2020 ಮೇ ತಿಂಗಳಲ್ಲಿ ನಡೆದಿತ್ತು. ಕುಟುಂಬಸ್ಥರೆಲ್ಲಾ ಸೇರಿ ಅದ್ಧೂರಿಯಾಗಿಯೇ ಈ ಮದುವೆ ಮಾಡಿಕೊಟ್ಟಿದ್ದರು. ದಂಪತಿಗಳಿಬ್ಬರು ಕೇರಳದ ಕೊಲ್ಲಂನಲ್ಲಿ ವಾಸವಿದ್ದರು. 2021 ರ ಜೂನ್ 21 ರ ಸೋಮವಾರ ಬೆಳಗ್ಗೆ ವಿಸ್ಮಯಾ ಗಂಡನ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ದೇಹದ ಮೇಲೆಲ್ಲಾ ಗಾಯದ ಗುರುತುಗಳಿದ್ದವು. ಸಾವಿಗಪ್ಪುವ ಮೊದಲು ಅಂದರೆ ಭಾನುವಾರ ರಾತ್ರಿ ವಾಟ್ಸಪ್ ಮತ್ತು ಫೇಸ್ ಬುಕ್ ನಲ್ಲಿ ಸೋದರ ಸಂಬಂಧಿ ಜೊತೆ ಚಾಟ್ ಮಾಡಿದ್ದ ವಿಸ್ಮಯ, ಇದು ನನ್ನ ಕಡೇ ಚಾಟ್ ಆಗಿರಬಹುದು. ಗಂಡನ ಕಿರುಕುಳ ತಡೆಯೋಕೆ ಆಗ್ತಿಲ್ಲ ಎಂದು ಹೇಳಿ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಳು.

ಈ ಸಾವಿನ ಬಗ್ಗೆ ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ಘಟನೆಯನ್ನು ಖಂಡಿಸಿದ್ದರು. ಅಲ್ಲದೇ ವಿಶೇಷ ತನಿಖೆ ನಡೆಸುವಂತೆ ಆದೇಶ ಕೂಡ ನೀಡಿದ್ದರು.

ಸಾರಿಗೆ ಅಧಿಕಾರಿಯಾಗಿದ್ದ ಕಿರಣ್ ಜೊತೆ ಮದುವೆ ಮಾಡಿಕೊಡಲು ವರದಕ್ಷಿಣೆ ರೂಪದಲ್ಲಿ 800 ಗ್ರಾಂ ಚಿನ್ನ, ಒಂದು ಎಕರೆಗೂ ಅಧಿಕ ಜಮೀನು, 10 ಲಕ್ಷ ಮೌಲ್ಯದ ಕಾರನ್ನು ವಿಸ್ಮಯ ಪಾಲಕರು ನೀಡಿದ್ದರು. ಮದುವೆ ನಂತರವೂ ಕಿರಣ್ ಇನ್ನೂ ಹೆಚ್ಚಿನ ಹಣ ತರಲು ಹೆಂಡತಿಗೆ ಕಿರುಕುಳ ನೀಡುತ್ತಿದ್ದ. ಇದನ್ನು ಸಹಿಸದ ವಿಸ್ಮಯ ತವರು ಮನೆ ಸೇರಿದ್ದಳು. ಕೊನೆಗೆ ಸಂಧಾನ ನಡೆದು ಮತ್ತೆ ಗಂಡನ ಮನೆ ಸೇರಿದ್ದಳು.ಕಡೆಗೂ ಆತನ ಕಿರುಕುಳ ಸಹಿಸಲಾರದೇ ಇಹಲೋಕವನ್ನೇ ತ್ಯಜಿಸಿಬಿಟ್ಟಳು.

ಈ ಘಟನೆ ನಡೆದ ಕೂಡಲೇ ಕಿರಣ್ ನನ್ನು ಕೇರಳ ಪೊಲೀಸರು ಬಂಧಿಸಿದ್ದರು. ಕೆಲಸದಿಂದ ಆ ಕ್ಷಣದಲ್ಲೇ ಅಮಾನತುಗೊಳಿಸಲಾಗಿತ್ತು. ಪ್ರಕರಣದ ತನಿಖೆ ನಡೆಯುತ್ತಿದ್ದು, ಬಲವಾದ ಸಾಕ್ಷಿಗಳು ಇವೆ. ಇದರ ನಡುವೆ ಸರಕಾರಿ ಕೆಲಸದಿಂದ ಕಿರಣ್ ( 35) ನನ್ನು ಶಾಶ್ವತವಾಗಿ ವಜಾ ಮಾಡಲಾಗಿದೆ.

ಸುಪ್ರೀಂ ಕೋರ್ಟ್ ಇದೀಗ ಆರೋಪಿಗೆ ಜಾಮೀನು ನೀಡಿರುವುದು ಅನೇಕ ಮಂದಿಯ ಮನಸ್ಸಲ್ಲಿ ಬೇಸರ ಮೂಡಿರುವುದಂತು ನಿಜ.

Leave A Reply

Your email address will not be published.